ಮಾಧ್ಯಮಗಳಿಗೆ ಮಾಹಿತಿ ಸಿಕ್ಕಿದ್ದರಿಂದ ದಾಳಿಯಲ್ಲಿ ಆಗಿತ್ತು ವಿಳಂಬ!
ಕಾಶ್ಮೀರ, ಸೆಪ್ಟೆಂಬರ್ 30: ಗಡಿ ನಿಯಂತ್ರಣದ ಆಚೆ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆಯಲ್ಲಿ ಏಳು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಲಾಗಿದೆ. ಅವುಗಳು ಲಷ್ಕರ್ ಇ ತೈಬಾ, ಹಿಜ್ಬುಲ್ ಮುಜಾಹಿದೀನ್ ಮತ್ತು ಜೈಶ್ ಇ ಮೊಹ್ಮದ್ ಗೆ ಸೇರಿದ್ದ ನೆಲೆಗಳಾಗಿದ್ದವು. ಆ ಗುಂಪಿನ ಮೂವತ್ತೆಂಟು ಉಗ್ರಗಾಮಿಗಳನ್ನು ಕಾರ್ಯಾಚರಣೆಯಲ್ಲಿ ಕೊಲ್ಲಲಾಗಿದೆ.
ಒನ್ಇಂಡಿಯಾಗೆ ದೊರೆತಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ ವಾರದ ಹಿಂದೆಯೇ ಕಾರ್ಯಾಚರಣೆಯ ಯೋಜನೆಯನ್ನು ರೂಪಿಸಲಾಗಿತ್ತು. ರಾತ್ರಿ 12.30ಕ್ಕೆ ಕಾರ್ಯಾಚರಣೆ ಆರಂಭಿಸಲಾಯಿತು. ಅದಕ್ಕೂ ಮುನ್ನವೇ ದಾಳಿ ಅರಂಭಿಸಬೇಕಿತ್ತು. ಆದರೆ ಈ ಬಗ್ಗೆ ಕೆಲವು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ದೊರೆತಿದ್ದರಿಂದ ಸ್ವಲ್ಪ ಸಮಯ ಮುಂದೂಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಭಾರತ-ಪಾಕ್ ಉದ್ವಿಗ್ನ: ಕಂಪೆನಿಗಳ 2.40 ಲಕ್ಷ ಕೋಟಿ ಬಂಡವಾಳ ಖಲ್ಲಾಸ್]

ಅದರೆ, ಕಾರ್ಯಾಚರಣೆಯಲ್ಲಿ ವಿಳಂಬ ಮಾಡಿದ್ದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಇಡೀ ಕಾರ್ಯಾಚರಣೆಗೆ ಭಾರತೀಯ ಸೇನೆಯ ತಯಾರಿ ತುಂಬ ಚೆನ್ನಾಗಿತ್ತು. ಜತೆಗೆ ಯೋಜನೆಯೂ ಚೆನ್ನಾಗಿದ್ದರಿಂದ ಸೇನೆಗೆ ಅದನ್ನು ಅಚ್ಚುಕಟ್ಟಾಗಿ, ಆತ್ಮವಿಶ್ವಾಸದಿಂದ ಜಾರಿಗೆ ತರಲು ಸಾಧ್ಯವಾಯಿತು. ದಾಳಿಯಲ್ಲಿ ಪಾಲ್ಗೊಂಡ ತಂಡವನ್ನು ಹೆಲಿಕಾಪ್ಟರ್ ನಲ್ಲಿ ಗಡಿ ನಿಯಂತ್ರಣ ರೇಖೆ ಆಚೆಗೆ ಬಿಡಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.[ಸರ್ಜಿಕಲ್ ಸ್ಟ್ರೈಕ್ ನಡೆದದ್ದು ಹೇಗೆ? 10 ಬೆಳವಣಿಗೆಗಳು]
ಗಡಿ ನಿಯಂತ್ರಣ ರೇಖೆ ಆಚೆಯ 500 ಮೀಟರ್ ನಿಂದ 3 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸೇನೆಯ ವಿಶೇಷ ತಂಡವು ಕಾರ್ಯಾಚರಣೆಯನ್ನು ನಡೆಸಿದೆ. ಭಾರತೀಯ ವಾಯುಪಡೆಯನ್ನು ಸಹ ಕಾರ್ಯಾಚರಣೆ ವೇಳೆ ಕಾಯ್ದಿರಸಲಾಗಿತ್ತು. ಒಟ್ಟಿನಲ್ಲಿ ಪಾಕಿಸ್ತಾನ ಹಾಗೂ ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಹವಣಿಸುತ್ತಿದ್ದ ಉಗ್ರರು ನಿರೀಕ್ಷಿಸದ ರೀತಿಯಲ್ಲಿ ಭಾರತ ತಿರುಗೇಟು ನೀಡಿದೆ.











Click it and Unblock the Notifications