ಸಿಧು ಮೂಸೆ ವಾಲಾ ಹತ್ಯೆಯ ಮಾಸ್ಟರ್ ಮೈಂಡ್ ಕ್ಯಾಲಿಫೋರ್ನಿಯಾದಲ್ಲಿ ಅರೆಸ್ಟ್: ಮೂಲಗಳು
ನವದೆಹಲಿ ಡಿಸೆಂಬರ್ 2: ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನನ್ನು ಯುಎಸ್ನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ಎನ್ಡಿಟಿವಿಗೆ ತಿಳಿಸಿವೆ.
ಮೇ 29 ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಸಿಧು ಮೂಸೆ ವಾಲಾ ಎಂದು ಜನಪ್ರಿಯರಾಗಿರುವ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯ ಗೋಲ್ಡಿ ಬ್ರಾರ್ ಇತ್ತೀಚೆಗೆ ಕೆನಡಾದಿಂದ ಯುಎಸ್ಗೆ ತೆರಳಿದ್ದು, ಮೇ ತಿಂಗಳಲ್ಲಿ ಗಾಯಕನ ಹತ್ಯೆಯ ನಂತರ ತನಗೆ ಭಾರಿ ಅಪಾಯವಿದೆ ಎಂದು ಹೇಳಿಕೊಂಡಿದ್ದ.
ಬಳಿಕ ನವೆಂಬರ್ 20 ರಂದು ಗ್ಯಾಂಗ್ಸ್ಟರ್ ಗೋಲ್ಡಿ ಬ್ರಾರ್ನನ್ನು ಕ್ಯಾಲಿಫೋರ್ನಿಯಾದಲ್ಲಿ ಬಂಧಿಸಲಾಯಿತು ಎಂದು ಮೂಲಗಳು ತಿಳಿಸಿವೆ. ಈ ಪ್ರಕ್ರಣದ ಬಗ್ಗೆ ಕ್ಯಾಲಿಫೋರ್ನಿಯಾದಿಂದ ಭಾರತ ಸರ್ಕಾರ ಇನ್ನೂ ಯಾವುದೇ ಅಧಿಕೃತ ಹೇಳಿಕೆಯನ್ನು ಸ್ವೀಕರಿಸಿಲ್ಲ.
ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ಬ್ರಾರ್ ಬಂಧನ
ಮೂಸೆ ವಾಲಾ ಅವರ ಹತ್ಯೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬ್ರಾರ್ ಅವರು ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ವಾಸಿಸುತ್ತಿದ್ದರು. ಸ್ಯಾಕ್ರಮೆಂಟೊ, ಫ್ರಿಜೋವ್ ಮತ್ತು ಸಾಲ್ಟ್ ಲೇಕ್ನಂತಹ ನಗರಗಳನ್ನು ತಮ್ಮ ಸುರಕ್ಷಿತ ಮನೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಭಾರತದ ಬೇಹುಗಾರಿಕಾ ಸಂಸ್ಥೆ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (R&AW), ದೆಹಲಿ ಪೊಲೀಸರ ಗುಪ್ತಚರ ವಿಭಾಗ ಮತ್ತು ಪಂಜಾಬ್ನಲ್ಲಿರುವ ಅವರ ಸಹವರ್ತಿಗಳಿಗೆ ಗೋಲ್ಡಿ ಬ್ರಾರ್ ಬಂಧನವು ಕ್ಯಾಲಿಫೋರ್ನಿಯಾದಲ್ಲಿ ದೊಡ್ಡ ಸಂಚಲನವನ್ನು ಉಂಟುಮಾಡಿದೆ ಎಂದು ಇನ್ಪುಟ್ಗಳನ್ನು ಸ್ವೀಕರಿಸಿದೆ ಎಂದು ತಿಳಿದುಬಂದಿದೆ.
ಪಂಜಾಬ್ನ ಮೂಲದ ಆರೋಪಿ
ಇತ್ತೀಚೆಗೆ, ಗೋಲ್ಡಿ ಬ್ರಾರ್ ಬಗ್ಗೆ ಯಾವುದೇ ಮಾಹಿತಿ ನೀಡಿದವರಿಗೆ ಕೇಂದ್ರ ಸರ್ಕಾರ 2 ಕೋಟಿ ಬಹುಮಾನವನ್ನು ಘೋಷಿಸಬೇಕೆಂದು ಸಿಧು ಮೂಸೆ ವಾಲಾ ಅವರ ತಂದೆ ಒತ್ತಾಯಿಸಿದರು. ಅಮೃತಸರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಬಲ್ಕೌರ್ ಸಿಂಗ್, ಸರ್ಕಾರವು ಹೆಚ್ಚಿನ ಮೊತ್ತವನ್ನು ನೀಡಲು ಸಾಧ್ಯವಾಗದಿದ್ದರೆ ತನ್ನ ಜೇಬಿನಿಂದ ಬಹುಮಾನವನ್ನು ಪಾವತಿಸಲು ಸಹ ಸಿದ್ಧ ಎಂದು ಹೇಳಿದರು.
ಪಂಜಾಬ್ನ ಮುಕ್ತಸರ್ ಸಾಹಿಬ್ ಮೂಲದ ಗೋಲ್ಡಿ ಬ್ರಾರ್ 2017 ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ಹೋಗಿದ್ದರು. ಅವರು ಕಳೆದ ತಿಂಗಳು ಡೇರಾ ಸಚ್ಚಾ ಸೌದಾ ಅನುಯಾಯಿಯ ಹತ್ಯೆಯ ಪ್ರಮುಖ ಸಂಚುಕೋರರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಧುಗೆ ಪೊಲೀಸ್ ಭದ್ರತೆ
ಕಾಂಗ್ರೆಸ್ ನಾಯಕರೂ ಆಗಿದ್ದ ಸಿಧು ಮೂಸೆ ವಾಲಾ ಅವರನ್ನು ಮೇ 29ರಂದು ಪಂಜಾಬ್ನ ಮಾನ್ಸಾ ಜಿಲ್ಲೆಯಲ್ಲಿ ಗುಂಡಿನ ದಾಳಿ ನಡೆಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪಂಜಾಬ್ ರಾಜ್ಯ ಸರ್ಕಾರವು ಸಿಧು ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ನಾಲ್ಕರಿಂದ ಎರಡಕ್ಕೆ ಇಳಿಸಿದ್ದ ಮರು ದಿನವೇ ಈ ಘಟನೆ ನಡೆದಿತ್ತು. ಸಿಧು ಅವರ ಹುಟ್ಟೂರು ಮೂಸಾ ಹಳ್ಳಿ ಸಮೀಪ ಈ ದಾಳಿ ನಡೆದಿತ್ತು. ಅಲ್ಲಿಗೆ ಅವರು ಇಬ್ಬರು ಭದ್ರತಾ ಪೊಲೀಸರನ್ನು ಕರೆದೊಯ್ದಿರಲಿಲ್ಲ.
ಕೇಂದ್ರ ಸಂಸ್ಥೆಗಳ ಜಂಟಿ ಕಾರ್ಯಾಚರಣೆ
ಸಿಧು ಮೂಸೆ ವಾಲಾ ಅವರ ತಂದೆ ಬಲ್ಕೌರ್ ಸಿಂಗ್ ಸಿಧು ಅವರಿಗೆ ಇ- ಮೇಲ್ ಮೂಲಕ ಬೆದರಿಕೆ ಕಳುಹಿಸಿದ್ದ ಆರೋಪದಲ್ಲಿ ರಾಜಸ್ಥಾನದ ಜೋಧಪುರದಲ್ಲಿ ವ್ಯಕ್ತಿಯೊಬ್ಬನನ್ನು ನವೆಂಬರ್ ಆರಂಭದಲ್ಲಿ ಬಂಧಿಸಲಾಗಿತ್ತು. ಸಿಧು ಹತ್ಯೆಯ ಮಾಸ್ಟರ್ ಮೈಂಡ್ ಎನಿಸಿರುವ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಶ್ನೋಯಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೇಜ್ ಸೃಷ್ಟಿಸಿದ್ದ ಮಹಿಪಾಲ್ ಎಂಬಾತ, ತನ್ನ ಫಾಲೋವರ್ಗಳ ಸಂಖ್ಯೆ ಹೆಚ್ಚಿಸಲು ಈ ಬೆದರಿಕೆ ಸಂದೇಶ ರವಾನಿಸಿದ್ದ. ಈ ಪ್ರಕರಣದಲ್ಲಿ ಇಬ್ಬರು ಶಂಕಿತರಾದ ಅನ್ಮೋಲ್ ಬಿಶ್ನೋಯಿಯನ್ನು ಕೀನ್ಯಾದಲ್ಲಿ ಮತ್ತು ಅಜೆರ್ಬೈಜನ್ನಲ್ಲಿ ಸಚಿನ್ ತಪನ್ ಎಂಬುವವರನ್ನು ಬಂಧಿಸಲಾಗಿದೆ ಎಂದು ಸೆಪ್ಟೆಂಬರ್ 1ರಂದು ಕೇಂದ್ರ ಸರ್ಕಾರ ಖಚಿತಪಡಿಸಿತ್ತು.
ಸಚಿನ್ ತಪನ್, ಕೆನಡಾದಿಂದ ಸಂಚು ರೂಪಿಸಿದ್ದ ಗೋಲ್ಡಿ ಬ್ರಾರ್ನ ಜತೆ ಸಂಪರ್ಕದಲ್ಲಿದ್ದ. ಅನ್ಮೋಲ್ ಬಿಶ್ನೋಯಿ, ಜೈಲಿನಲ್ಲಿರುವ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಶ್ನೋಯಿಯ ಸೋದರಳಿಯ. ದೀಪಕ್ ಅಲಿಯಾಸ್ ಮುಂಡಿ ಎಂಬಾತನನ್ನು ಪಶ್ಚಿಮ ಬಂಗಾಳ- ನೇಪಾಳ ಗಡಿಯಲ್ಲಿ ಕೇಂದ್ರ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ನವೆಂಬರ್ನಲ್ಲಿ ಬಂಧಿಸಲಾಗಿದೆ.