ಮುಂಬೈ ಹೈಕೋರ್ಟ್ ಗರಂ: ಸಂಜುಗೆ ಮತ್ತೆ ಜೈಲು ವಾಸ?
ಸಂಜಯ್ ದತ್ ಅವರ ಪರೋಲ್ ಬಗ್ಗೆ ಬಾಂಬೆ ಹೈಕೋರ್ಟ್ ಗೆ ಮಹಾರಾಷ್ಟ್ರ ಸರ್ಕಾರದ ಸ್ಪಷ್ಟನೆ. ಪರೋಲ್ ನಿಯಮಗಳು ಉಲ್ಲಂಘನೆಯಾಗಿದ್ದರೆ ಸಂಜಯ್ ಅವರನ್ನು ಮತ್ತೆ ಜೈಲಿಗೆ ಅಟ್ಟುವುದಾಗಿ ಭರವಸೆ.
ಮುಂಬೈ, ಜುಲೈ 27: ನಟ ಸಂಜಯ್ ದತ್ ಅವರು ಜೈಲು ಶಿಕ್ಷೆಗೆ ಒಳಗಾಗಿದ್ದ ಅಕ್ರಮವಾಗಿ ಅವರಿಗೆ ಪೆರೋಲ್ ನೀಡಲಾಗಿದ್ದರೆ ಅವರನ್ನು ಖಂಡಿತವಾಗಿಯೂ ಮತ್ತೆ ಜೈಲಿಗೆ ಕಳುಹಿಸಲಾಗುವುದು ಎಂದು ಮಹಾರಾಷ್ಟ್ರ ಸರ್ಕಾರ, ಮುಂಬೈ ಹೈಕೋರ್ಟ್ ಗೆ ತಿಳಿಸಿದೆ.
1993ರ ಮುಂಬೈ ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ನಡೆಸುತ್ತಿದ್ದ ತನಿಖಾಧಿಕಾರಿಗಳು ಸಂಜಯ್ ದತ್ ಅವರು ಮುಂಬೈ ಸ್ಫೋಟದ ಉಗ್ರರಿಂದ ಅಕ್ರಮವಾಗಿ ಎ.ಕೆ. 53 ಬಂದೂಕು ಹೊಂದಿದ್ದನ್ನು ಪತ್ತೆ ಮಾಜಿ ಅದನ್ನು ಜಪ್ತಿ ಮಾಡಿದ್ದರು.
ಹಾಗಾಗಿ, ಅವರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಪ್ರಕರಣ ದಾಖಲಿಸಲಾಗಿತ್ತು. ಆಗಿನಿಂದ ಈ ವಿಚಾರಣೆ ನಡೆದು, 2013ರಲ್ಲಿ ಸುಪ್ರೀಂ ಕೋರ್ಟ್ ಸಂಜಯ್ ಅವರಿಗೆ ಐದು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ವಿಧಿಸಲಾಗಿತ್ತು.
ಅವರ ಶಿಕ್ಷೆ ಮುಗಿಯಲು ಇನ್ನೂ ಕೆಲವು ತಿಂಗಳು ಬಾಕಿಯಿರುವಾಗಲೇ 2016ರ ಫೆಬ್ರವರಿ 25ರಂದು ಅವರು ಬಿಡುಗಡೆಯಾಗಿದ್ದರು. ಸನ್ನಡತೆಯ ಆಧಾರದ ಮೇಲೆ ಅವರನ್ನು ಬೇಗನೇ ಬಿಡುಗಡೆ ಮಾಡುತ್ತಿರುವುದಾಗಿ ಜೈಲು ಅಧಿಕಾರಿಗಳು ತಿಳಿಸಿದ್ದರು. ಇದನ್ನು ಮುಂಬೈ ಹೈಕೋರ್ಟ್ ಕಳೆದ ತಿಂಗಳು ಪ್ರಶ್ನೆ ಮಾಡಿತ್ತು. ಈ ಪ್ರಶ್ನೆಗೆ ಮಹಾರಾಷ್ಟ್ರ ಸರ್ಕಾರ ಹೇಳಿದ್ದೇನು, ಕೋರ್ಟ್ ಗೆ ನೀಡಿರುವ ಆಶ್ವಾಸನೆಯ ವಿಸ್ತಾರ ರೂಪವೇನು ಎಂಬುದರ ಸಾರಾಂಶ ಇಲ್ಲಿದೆ.
ಸನ್ನಡತೆಯೇ ಬಿಡುಗಡೆಗೆ ಆಧಾರ
ಜೈಲು ಶಿಕ್ಷೆ ಮುಗಿಯಲು ಇನ್ನೂ ಎಂಟು ತಿಂಗಳು ಇರುವಾಗಲೇ ಸಂಜಯ್ ದತ್ ಅವರನ್ನು ಬಿಡುಗಡೆ ಮಾಡಲಾಗಿದೆ. ಇದಕ್ಕೆ ಸನ್ನಡತೆಯ ಕಾರಣವನ್ನೂ ಕೊಡಲಾಗಿದೆ. ಆದರೆ, ಯಾವ ಮಾನದಂಡ ಅನುಸರಿಸಿ ಸಂಜಯ್ ದತ್ ಅವರ ಸನ್ನಡತೆಯನ್ನು ಅಳೆಯಲಾಯಿತು ಎಂಬುದನ್ನು ಮಹಾರಾಷ್ಟ್ರ ಸರ್ಕಾರ ನ್ಯಾಯಾಲಯಕ್ಕೆ ವರದಿ ಮಾಡಬೇಕು ಎಂದು ನ್ಯಾಯಪೀಠ ಸೂಚಿಸಿತ್ತು.
ಪರೋಲ್ ಹೆಸರಲ್ಲಿ ಪದೇಪದೇ ಬಿಡುಗಡೆ
ಇದಲ್ಲದೆ, ಜೈಲು ವಾಸ ಅನುಭವಿಸುತ್ತಿರುವಾಗಲೇ ಹಲವಾರು ಬಾರಿ ಸಂಜಯ್ ದತ್ ಅವರನ್ನು ಪರೋಲ್ ಹೆಸರಿನಲ್ಲಿ ಹೊರಬಿಟ್ಟಿದ್ದೇಕೆ ಎಂದೂ ನ್ಯಾಯಪೀಠ ಮಹಾರಾಷ್ಟ್ರ ಸರ್ಕಾರವನ್ನು ಕೇಳಿತ್ತು.
ತಪ್ಪು ಸಾಬೀತಾದರೆ ಸಂಜು ಮತ್ತೆ ಜೈಲಿಗೆ
ಮುಂಬೈ ಹೈಕೋರ್ಟ್ ಪ್ರಶ್ನೆಗೆ ಇದೀಗ ಉತ್ತರಿಸಿರುವ ಮಹಾರಾಷ್ಟ್ರ ಸರ್ಕಾರ, ಸಂಜಯ್ ದತ್ ಒಬ್ಬ ಗಣ್ಯ ವ್ಯಕ್ತಿ ಎಂಬ ಕಾರಣಕ್ಕೇ ಅವರ ವಿಚಾರದಲ್ಲಿ ಪರೋಲ್ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ಸಾಬೀತಾದರೆ, ಸಂಜಯ್ ದತ್ ಅವರನ್ನು ಪುನಃ ಜೈಲಿಗೆ ಕಳುಹಿಸುವುದಾಗಿ ಹೇಳಿದೆ.
ಸಂಜು ಪಾತ್ರದಲ್ಲಿ ರಣಬೀರ್
ಸಿನಿಮಾ ರಂಗದಲ್ಲಿ ಸಂಜಯ್ ದತ್ ಅವರ ಏರಿಕೆ, ಜೈಲು ವಾಸ ಮುಂತಾದ ಅಂಶಗಳನ್ನೊಳಗೊಂಡ ಚಿತ್ರವೊಂದು ನಿರ್ಮಾಣಗೊಳ್ಳುತ್ತಿದ್ದು ಅದರಲ್ಲಿ ನಟ ರಣಬೀರ್ ಕಪೂರ್ ಅವರು ಸಂಜಯ್ ದತ್ ಅವರ ಪಾತ್ರ ಮಾಡುತ್ತಿದ್ದಾರೆ.