ಕೃಷಿ ಕಾಯಿದೆ ನಂತರ ಸಿಎಎ, ಎನ್ಆರ್ಸಿ: ಹಿಂಪಡೆಯದಿದ್ದರೆ ರಕ್ತಪಾತದ ಎಚ್ಚರಿಕೆ
ಹೈದರಾಬಾದ್, ನ 23: ಕೇಂದ್ರದ ಮೂರು ವಿವಾದಾತ್ಮಕ ಕೃಷಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ, ದೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಘೋಷಣೆ ಮಾಡಿದ್ದರು. ಆದರೂ, ಸಂಸತ್ತಿನಲ್ಲಿ ಆಂಗೀಕಾರವಾಗುವವರೆಗೆ ಪ್ರತಿಭಟನೆ ಮುಂದುವರಿಯಲಿದೆ ಎಂದು ರೈತ ನಾಯಕರು ಹೇಳಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭದ ದಿನ ಅಂದರೆ ನವೆಂಬರ್ 29 ರಂದು, ಪೂರ್ವ ನಿಗದಿಯಂತೆ ಟ್ರಾಕ್ಟರ್ ಮಾರ್ಚ್ ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನಿನ ಮುಖ್ಯಸ್ಥ ರಾಕೇಶ್ ಟಿಕಾಯತ್ ಹೇಳಿದ್ದಾರೆ.
ಈ ನಡುವೆ, ಕೃಷಿ ಕಾಯಿದೆ ರದ್ದಾದಂತೆ, ಮೋದಿ ಸರಕಾರ ಅಧಿಕಾರಕ್ಕೆ ಬಂದ ನಂತರ ಜಾರಿಯಾಗಿರುವ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿ (ಎನ್ಆರ್ಸಿ) ಕೂಡಾ ಅದೇ ದಾರಿಯಲ್ಲಿ ಸಾಗಲಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ.
ಈ ಸಂಬಂಧ ಮಾತನಾಡಿರುವ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ನಿರ್ದಿಷ್ಟ ಅವಧಿಯೊಳಗೆ ಸಿಎಎ ಮತ್ತು ಎನ್ಆರ್ಸಿ ಕಾಯಿದೆಯನ್ನು ಕೇಂದ್ರ ಸರಕಾರ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಿರುವುದಿಲ್ಲ"ಎಂದು ಪ್ರಧಾನಿ ಮೋದಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಓವೈಸಿಯವರ ಎಚ್ಚರಿಕೆ ಚುನಾವಣೆಯ ಹೊಸ್ತಿಲಲ್ಲಿ ಇರುವ ಉತ್ತರ ಪ್ರದೇಶದಿಂದ ಬಂದಿದ್ದು, ಈ ವಿಚಾರವನ್ನು ಅವರ ಪಕ್ಷ ಚುನಾವಣೆಯ ಪ್ರಚಾರದಲ್ಲಿ ಬಳಸುವ ಸಾಧ್ಯತೆಯಿಲ್ಲದಿಲ್ಲ.

ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ
ಗುರುನಾನಕ್ ಜಯಂತಿಯ ದಿನ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, "ನೂತನವಾಗಿ ಜಾರಿಗೆ ತರಲಾಗಿರುವ ಮೂರು ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿದ್ದೇವೆ. ನಮ್ಮ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಅದರಲ್ಲೂ ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ , ದೇಶದ ಕೃಷಿ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ ಒಳ್ಳೆಯ ಉದ್ದೇಶದಿಂದ ಈ ಕಾನೂನನ್ನು ತಂದಿದ್ದೆವು" ಎಂದು ಪ್ರಧಾನಿ ಹೇಳಿದ್ದರು.

ದೆಹಲಿಯ ಶಹೀನ್ ಬಾಗ್ನಲ್ಲಿ ನಡೆದ ಘಟನೆಗಳು ನಮ್ಮ ಮುಂದಿವೆ
ಲಕ್ನೋದಲ್ಲಿ ಮಾತನಾಡುತ್ತಿದ್ದ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ, "ಕೃಷಿ ಕಾಯಿದೆ ಹಿಂದಕ್ಕೆ ಪಡೆದಂತೆ, ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೊಂದಣಿಯನ್ನೂ ಹಿಂದಕ್ಕೆ ಪಡೆಯಬೇಕು. ಸಿಎಎ ರದ್ದತಿ ಸಂಬಂಧಿಸಿದಂತೆ ದೆಹಲಿಯ ಶಹೀನ್ ಬಾಗ್ ನಲ್ಲಿ ನಡೆದ ಘಟನೆಗಳು ನಮ್ಮ ಮುಂದಿವೆ. ಅದು ಪುನರಾವರ್ತನೆ ಆಗದಂತೆ ನೋಡಿಕೊಳ್ಳುವುದು ಕೇಂದ್ರ ಸರಕಾರದ ಕರ್ತವ್ಯ"ಎಂದು ಹೇಳಿದ್ದಾರೆ.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಎಚ್ಚರಿಕೆ
"ನರೇಂದ್ರ ಮೋದಿ ಬಹುದೊಡ್ಡ ನಾಟಕಕಾರ. ಅಪ್ಪಿತಪ್ಪಿ ರಾಜಕೀಯಕ್ಕೆ ಅವರು ಬಂದಿದ್ದಾರೆ, ಇಲ್ಲದಿದ್ದರೆ ಸಿನಿಮಾ ರಂಗದಲ್ಲಿ ದೊಡ್ಡ ಹೆಸರನ್ನು ಮಾಡುತ್ತಿದ್ದರು. ಅವರ ಕೃಷಿ ಕಾಯಿದೆ ಹಿಂದಕ್ಕೆ ಪಡೆದ ನಿರ್ಧಾರದ ಹಿಂದೆ ಬೇರೊಂದು ಆಲೋಚನೆ ಇದ್ದರೂ ಇರಬಹುದು. ಇನ್ನೆರಡು ವಿವಾದೀತ ಸಿಎಎ ಮತ್ತು ಎನ್ ಆರ್ ಸಿ ಕಾಯಿದೆಯನ್ನು ಹಿಂದಕ್ಕೆ ಪಡೆಯದಿದ್ದರೆ, ರಸ್ತೆರಸ್ತೆಯಲ್ಲಿ ರಕ್ತಪಾತವಾಗಬಹುದು, ಎಲ್ಲದಕ್ಕೂ ಮೋದಿ ಜವಾಬ್ದಾರಿಯುತರಾಗುತ್ತಾರೆ"ಎಂದು ಅಸಾದುದ್ದೀನ್ ಓವೈಸಿ, ಪ್ರಧಾನಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ಪ್ರತಿಭಟನಾಕಾರರು ರಸ್ತೆಯಲ್ಲಿ ಹಿಂಸಾಚಾರ ನಡೆಸುತ್ತಾರೆ, ಎಚ್ಚರ
"ಸರಕಾರ ಎರಡು ಕಾಯಿದೆಯನ್ನು ಹಿಂದಕ್ಕೆ ಪಡೆಯದಿದ್ದರೆ, ಪ್ರತಿಭಟನಾಕಾರರು ರಸ್ತೆಯಲ್ಲಿ ಹಿಂಸಾಚಾರ ನಡೆಸುತ್ತಾರೆ. ಈ ಎರಡೂ ಕಾಯಿದೆಗಳು ಸಂವಿಧಾನಕ್ಕೆ ವಿರುದ್ದವಾದದ್ದು, ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಈ ಕಾಯಿದೆಯನ್ನು ವಾಪಸ್ ಪಡೆಯಬೇಕು. ಇಲ್ಲದಿದ್ದರೆ, ನಾವೇ ಬೀದಿಗಿಳಿಯಬೇಕಾಗುತ್ತದೆ"ಎಂದು ಅಸಾದುದ್ದೀನ್ ಓವೈಸಿ ಕೇಂದ್ರ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ. ಆ ಮೂಲಕ, ಈ ಎರಡೂ ಕಾಯಿದೆ ರದ್ದತಿಗೂ ಮುಂದಿನ ದಿನಗಳಲ್ಲಿ ಪ್ರತಿಭಟನೆ ಆರಂಭವಾಗಬಹುದು ಎನ್ನುವ ಎಚ್ಚರಿಕೆಯನ್ನು ಓವೈಸಿ ನೀಡಿದಂತಿದೆ.











Click it and Unblock the Notifications