ರಾಘವ್ ಚಡ್ಡಾಗೆ ಒಲಿಯುತ್ತಾ ಕೇಂದ್ರ ಶಿಕ್ಷಣ ಮಂತ್ರಿ ಸ್ಥಾನ? ಮೋದಿ ಸಂಪುಟ ಸರ್ಜರಿಯಲ್ಲಿ ಯುವ ನಾಯಕನ ಹೆಸರು ಮುಂಚೂಣಿ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟದಲ್ಲಿ ಶೀಘ್ರದಲ್ಲೇ ಭಾರಿ ಮಹತ್ವದ ಬದಲಾವಣೆಗಳು ಆಗಲಿವೆ ಎಂದು ದೆಹಲಿಯ ರಾಜಕೀಯ ಮೂಲಗಳು ವರದಿ ಮಾಡಿವೆ. ಜುಲೈ 20ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನವೇ ಈ ಖಾತೆ ಬದಲಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಮುಂಬರುವ 2029ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಂಪುಟಕ್ಕೆ ಯುವ ನಾಯಕರನ್ನು ಸೇರ್ಪಡೆಗೊಳಿಸುವುದು ಹಾಗೂ ಇತ್ತೀಚೆಗೆ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿರುವ ಹೊಸ ರಾಜಕೀಯ ಮಿತ್ರರಿಗೆ ಸೂಕ್ತ ಸ್ಥಾನಮಾನ ಕಲ್ಪಿಸುವುದು ಈ ಮಹತ್ವದ ಬದಲಾವಣೆಯ ಮುಖ್ಯ ಉದ್ದೇಶ ಎನ್ನಲಾಗಿದೆ.
ಈ ಪುನಾರಚನೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೃಹ ಸಚಿವ ಅಮಿತ್ ಶಾ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಂತಹ ಪ್ರಮುಖ ನಾಯಕರ ಖಾತೆಗಳು ಬದಲಾಗಲಿವೆ ಅಥವಾ ಕೆಲವರನ್ನು ಸಂಪುಟದಿಂದ ಕೈಬಿಡಲಾಗುವುದು ಎಂಬ ಚರ್ಚೆಗಳು ಜೋರಾಗಿವೆ. ಮೋದಿ ಅವರ ಸಂಪುಟ ಪುನಾರಚನೆಯ ಪೈಕಿ ದೇಶಾದ್ಯಂತ ಅತ್ಯಂತ ಹೆಚ್ಚು ಚರ್ಚೆಯಾಗುತ್ತಿರುವುದು ಶಿಕ್ಷಣ ಇಲಾಖೆಯ ಉಸ್ತುವಾರಿ ಯಾರ ಹೆಗಲೇರಲಿದೆ ಎಂಬುದು. ಸದ್ಯದ ಮಾಹಿತಿ ಪ್ರಕಾರ, ಇತ್ತೀಚೆಗಷ್ಟೇ ಆಮ್ ಆದ್ಮಿ ಪಾರ್ಟಿ (AAP) ತೊರೆದು ಬಿಜೆಪಿ ಸೇರಿರುವ ಯುವ ನಾಯಕ, ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಅವರಿಗೆ ದೇಶದ ಹೊಸ ಶಿಕ್ಷಣ ಸಚಿವ ಸ್ಥಾನ ಸಿಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ನೀಟ್ ಹಗರಣದಿಂದ ಮುಖಭಂಗ
ಪ್ರಸ್ತುತ ಕೇಂದ್ರ ಶಿಕ್ಷಣ ಸಚಿವರಾಗಿರುವ ಧರ್ಮೇಂದ್ರ ಪ್ರಧಾನ್ ಅವರ ಭವಿಷ್ಯ ಈಗ ಸಂಕಷ್ಟದಲ್ಲಿದೆ. ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ನೀಟ್ (NEET) ಪೇಪರ್ ಲೀಕ್ ಹಗರಣ ಪ್ರಧಾನ್ ಅವರ ಸಚಿವ ಸ್ಥಾನಕ್ಕೆ ಕುತ್ತು ತಂದಿದೆ. ಪ್ರತಿಪಕ್ಷಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ನಿರಂತರವಾಗಿ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದರಿಂದ ಸರ್ಕಾರದ ಮೇಲಿನ ಒತ್ತಡ ಹೆಚ್ಚಾಗಿದೆ. ಮುಂಬರುವ ಚುನಾವಣೆಗಳಲ್ಲಿ ಯುವ ಮತದಾರರನ್ನು ಎದುರು ಹಾಕಿಕೊಳ್ಳಲು ಇಷ್ಟಪಡದ ಬಿಜೆಪಿ ಹೈಕಮಾಂಡ್, ಧರ್ಮೇಂದ್ರ ಪ್ರಧಾನ್ ಅವರನ್ನು ಶಿಕ್ಷಣ ಇಲಾಖೆಯಿಂದ ಕೈಬಿಡಲು ಗಂಭೀರ ಚಿಂತನೆ ನಡೆಸಿದೆ.
ರಾಘವ್ ಚಡ್ಡಾ ದೇಶದ ಅತ್ಯಂತ ಜನಪ್ರಿಯ ಯುವ ರಾಜಕಾರಣಿಗಳಲ್ಲಿ ಒಬ್ಬರು. ಯುವ ಪೀಳಿಗೆಯಲ್ಲಿ ಅವರಿಗಿರುವ ಇಮೇಜ್ ದೇಶದ ಶಿಕ್ಷಣ ಇಲಾಖೆಗೆ ಹೊಸ ಚೈತನ್ಯ ನೀಡಬಲ್ಲದು ಎಂದು ಬಿಜೆಪಿ ಭಾವಿಸಿದೆ. ರಾಜ್ಯಸಭೆಯಲ್ಲಿ ಅತ್ಯಂತ ಚುರುಕಾಗಿ, ಅಂಕಿ-ಅಂಶಗಳ ಸಮೇತ ವಾದ ಮಂಡಿಸುವ ಅವರ ಶೈಲಿ ಮತ್ತು ಸಂಸದೀಯ ನಡೆ ಪಕ್ಷದ ನಾಯಕರ ಗಮನ ಸೆಳೆದಿದೆ. ಆಮ್ ಆದ್ಮಿ ಪಾರ್ಟಿಯಿಂದ ದೊಡ್ಡ ಮಟ್ಟದ ಸಂಸದರ ಬಣದೊಂದಿಗೆ ಬಿಜೆಪಿಗೆ ಸೇರ್ಪಡೆಯಾಗಿರುವ ರಾಘವ್ ಚಡ್ಡಾಗೆ ದೊಡ್ಡ ಜವಾಬ್ದಾರಿ ನೀಡುವ ಮೂಲಕ ಪಂಜಾಬ್ ಮತ್ತು ದೆಹಲಿ ರಾಜಕಾರಣದಲ್ಲಿ ಹೊಸ ಮೈಲೇಜ್ ಪಡೆಯಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದೆ.
ಸದ್ಯ ಇಲಾಖೆಗೆ ಕಂಟಕವಾಗಿರುವ 'ನೀಟ್ ಪೇಪರ್ ಲೀಕ್' ವಿವಾದವನ್ನು ತಣ್ಣಗಾಗಿಸಲು ಮತ್ತು ವಿದ್ಯಾರ್ಥಿಗಳಲ್ಲಿ ವಿಶ್ವಾಸ ಮೂಡಿಸಲು ರಾಘವ್ ಚಡ್ಡಾ ಅವರಂತಹ ಸುಶಿಕ್ಷಿತ ಮತ್ತು ಯುವ ಮುಖವನ್ನು ಮುನ್ನೆಲೆಗೆ ತರುವುದು ಮೋದಿ ಸರ್ಕಾರದ ಪ್ರಮುಖ ತಂತ್ರಗಾರಿಕೆ. ಮುಂಗಾರು ಅಧಿವೇಶನಕ್ಕೂ ಮುನ್ನ ನಡೆಯಲಿರುವ ಈ ಸಂಪುಟ ಸರ್ಜರಿಯಲ್ಲಿ ರಾಘವ್ ಚಡ್ಡಾಗೆ ದೇಶದ ಶಿಕ್ಷಣ ಇಲಾಖೆಯ 'ಜಾಕ್ಪಾಟ್' ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮನ್ ಸಂಪುಟದಿಂದ ಹೊರಕ್ಕೆ?
ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿ ಎಂದರೆ ಹಿರಿಯ ನಾಯಕರಾದ ರಾಜನಾಥ್ ಸಿಂಗ್ ಮತ್ತು ನಿರ್ಮಲಾ ಸೀತಾರಾಮನ್ ಅವರ ನಿರ್ಗಮನದ ಸಾಧ್ಯತೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಚಿವ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ದಟ್ಟವಾಗಿದೆ. ಆದರೆ, ಇದು ಪಕ್ಷದ ನಾಯಕತ್ವದೊಂದಿಗಿನ ಭಿನ್ನಾಭಿಪ್ರಾಯದ ಕಾರಣಕ್ಕಲ್ಲ ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಅವರ ಇಬ್ಬರು ಪುತ್ರರಾದ ಪಂಕಜ್ ಸಿಂಗ್ (ನೋಯ್ಡಾ ಶಾಸಕ) ಹಾಗೂ ನೀರಜ್ ಸಿಂಗ್ (ಯುಪಿ ಬಿಜೆಪಿಯ ಉಪಾಧ್ಯಕ್ಷ) ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ಸಿಕ್ಕಿರುವುದು ಇದಕ್ಕೆ ಕಾರಣ ಎನ್ನಲಾಗಿದೆ.
ಇತ್ತ ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಸಂಪುಟದಿಂದ ಹೊರಬೀಳುವ ಸಾಧ್ಯತೆಯಿದೆ. ಆದರೆ, ಪಕ್ಷದಲ್ಲಿ ಅವರ ಸ್ಥಾನ ಕುಸಿಯುವುದಿಲ್ಲ. ಬದಲಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಬಲಪಡಿಸಲು ಅವರಿಗೆ ದೊಡ್ಡ ಜವಾಬ್ದಾರಿಯನ್ನು ನೀಡಬಹುದು ಎನ್ನಲಾಗುತ್ತಿದೆ. ಮುಂದಿನ ಚುನಾವಣೆಗೂ ಮುನ್ನ ಸರ್ಕಾರ ಹೊಸ ಆರ್ಥಿಕ ಸುಧಾರಣೆಗಳನ್ನು ತರಲು ಬಯಸಿದ್ದು, ಹಣಕಾಸು ಇಲಾಖೆಗೆ ಹೊಸ ಮುಖದ ಹುಡುಕಾಟದಲ್ಲಿದೆ. ಹೀಗಾಗಿ ಆರ್ಬಿಐ ಮಾಜಿ ಗವರ್ನರ್ ಮತ್ತು ಪ್ರಸ್ತುತ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿರುವ ಶಕ್ತಿಕಾಂತ ದಾಸ್ ಅಥವಾ ಪ್ರಸ್ತುತ ವಾಣಿಜ್ಯ ಸಚಿವರಾಗಿರುವ ಪಿಯೂಷ್ ಗೋಯಲ್ ಅವರ ಹೆಸರು ಹಣಕಾಸು ಸಚಿವ ಸ್ಥಾನಕ್ಕೆ ಮುಂಚೂಣಿಯಲ್ಲಿದೆ.
ದೇಶದ ಉಪಪ್ರಧಾನಿಯಾಗ್ತಾರಾ ಅಮಿತ್ ಶಾ?
ದೆಹಲಿ ರಾಜಕೀಯದ ಮತ್ತೊಂದು ಬಿಗ್ ಅಪ್ಡೇಟ್ ಎಂದರೆ, ಪ್ರಸ್ತುತ ಗೃಹ ಸಚಿವರಾಗಿರುವ ಅಮಿತ್ ಶಾ ಅವರನ್ನು 'ಉಪಪ್ರಧಾನಿ' ಹುದ್ದೆಗೆ ಏರಿಸುವ ಲೆಕ್ಕಾಚಾರಗಳು ನಡೆಯುತ್ತಿವೆ. ಈ ಹುದ್ದೆಯಿಂದ ಸರ್ಕಾರದ ಒಳಗಿನ ಅವರ ಪ್ರಭಾವದಲ್ಲಿ ದೊಡ್ಡ ಬದಲಾವಣೆ ಆಗದಿದ್ದರೂ, ಬಿಜೆಪಿಯ ಮುಂದಿನ ಭವಿಷ್ಯದ ನಾಯಕ ಯಾರು ಎಂಬುದರ ಕುರಿತು ದೇಶಕ್ಕೆ ಸ್ಪಷ್ಟ ಸಂದೇಶ ರವಾನಿಸಲು ಹೈಕಮಾಂಡ್ ಈ ನಿರ್ಧಾರಕ್ಕೆ ಬರಬಹುದು ಎಂದು ರಾಜಕೀಯ ವಿಶ್ಲೇಷಕರು ಅಂದಾಜಿಸಿದ್ದಾರೆ. ಮುಂಗಾರು ಅಧಿವೇಶನಕ್ಕೂ ಮುನ್ನ ದೆಹಲಿಯಲ್ಲಿ ನಡೆಯಲಿರುವ ಈ ರಾಜಕೀಯ ಸರ್ಜರಿ ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕುತೂಹಲಕ್ಕೆ ಕಾರಣವಾಗಿದೆ.













Click it and Unblock the Notifications