ಬೋಟ್ ಸ್ಫೋಟ ಉಗ್ರರದ್ದೇ ಕೈವಾಡ: ಪರಿಕ್ಕರ್
ನವದೆಹಲಿ, ಜ. 5: ಸ್ಫೋಟಕಗಳಿಂದ ತುಂಬಿದ್ದ ಪಾಕಿಸ್ತಾನದ ದೋಣಿ ಅರಬ್ಬಿ ಸಮುದ್ರದಲ್ಲಿ ಬೆಂಕಿಗೆ ಆಹುತಿಯಾಗಿರುವ ಘಟನೆ ಹಿಂದೆ ಭಯೋತ್ಪಾದಕರ ಕೈವಾಡವಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ.
ಇದು ಕಳ್ಳಸಾಗಣೆದಾರರ ಕೃತ್ಯ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದರೂ ಉಗ್ರಗಾಮಿಗಳ ಕೈವಾಡವಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ. ಬೋಟ್ ನಲ್ಲಿ ಒಟ್ಟು ನಾಲ್ಕು ಜನರಿದ್ದರು. ಸೇನಾಪಡೆಯ ಕಣ್ಣಿಗೆ ಬೀಳುತ್ತಲೇ ಅವರು ಆತ್ಮಾಹುತಿ ಮಾಡಿಕೊಂಡಿದ್ದಾರೆ. ಅವರು ಮಾದಕ ವಸ್ತು ಸಾಗಿಸುವವರೇ ಆಗಿದ್ದರೆ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸೋಮವಾರ ಹೇಳಿದ್ದಾರೆ.[ಭಾರತದೊಳು ನುಗ್ಗುವ ಉಗ್ರರ ಯತ್ನ ವಿಫಲ, ಬೋಟ್ ಸ್ಫೋಟ]

ಭಾರತೀಯ ಜಲ ಸೇನೆ ಹಾಗೂ ಕರಾವಳಿ ಕಾವಲು ಪಡೆ ಸರಿಯಾದ ಸಮಯದಲ್ಲಿ ಎಚ್ಚೆತ್ತುಕೊಂಡು ಅವಘಡ ತಪ್ಪಿಸಿದೆ. ಗುಪ್ತಚರದಳ ಮಾಹಿತಿ ನೀಡಿರುವಂತೆ ಡಿಸೆಂಬರ್ 31 ರಂದು ಬೋಟ್ ಪೋರಬಂದರ್ ಸಮುದ್ರ ತೀರದಿಂದ ಸುಮಾರು 365 ಕಿಮೀ ವ್ಯಾಪ್ತಿಯಲ್ಲಿತ್ತು. ಕರಾಚಿಯಿಂದ ಹೊರಟ ಬೋಟ್ ಕೇವಲ 12 ಗಂಟೆ ಅವಧಿಯಲ್ಲಿ ಭಾರತದ ಗಡಿ ತಲುಪಿತ್ತು ಎಂದು ತಿಳಿಸಿದ್ದಾರೆ.[ಸುರಕ್ಷಿತ ಸ್ಥಳಕ್ಕಾಗಿ ಹುಡುಕುತ್ತಿದ್ದರೇ ಪಾಕ್ ದುರುಳರು?]

ಒಂದು ವೇಳೆ ಬೋಟ್ ನಲ್ಲಿದ್ದವರು ಮಾದಕ ವಸ್ತು ಸಾಗಣೆದಾರರೇ ಆಗಿದ್ದರೆ ಅವರೇಕೆ ಆತ್ಮಾಹುತಿ ಮಾಡಿಕೊಳ್ಳುತ್ತಿದ್ದರು? ಶಂಕಿತ ಉಗ್ರರೇ ಬೋಟ್ ನಲ್ಲಿ ಆಗಮಿಸಿದ್ದರು ಎಂಬುದಕ್ಕೆ ಇದಕ್ಕಿಂತ ಹೆಚ್ಚಿನ ಪುರಾವೆ ಬೇಕಿಲ್ಲ. ಅಲ್ಲದೇ ಬೋಟ್ ನಲ್ಲಿ ಸ್ಫೋಟಕಗಳು ತುಂಬಿದ್ದು ದಾಖಲೆಗಳಿಂದ ಬಹಿರಂಗವಾಗಿದೆ ಎಂದು ಪರಿಕ್ಕರ್ ಹೇಳಿದ್ದಾರೆ.
ಒಟ್ಟಿನಲ್ಲಿ ದೇಶಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿದ್ದ ಬೋಟ್ ಸ್ಫೋಟ ಘಟನೆ ಹಿಂದೆ ಉಗ್ರರ ಕೈವಾಡವಿರುವುದು ಸಾಂದರ್ಭಿಕ ಸಾಕ್ಷಿಗಳಿಂದ ವ್ಯಕ್ತವಾಗುತ್ತಿದೆ.












Click it and Unblock the Notifications