ಗುಜರಾತ್ ಬಂದ್ ಗೆ ಕರೆ ನೀಡಿದ 22 ವರ್ಷದ ಹಾರ್ದಿಕ್
ಅಹಮದಾಬಾದ್, ಆಗಸ್ಟ್ 26: ಆತನಿಗೆ 22 ವರ್ಷ ವಯಸ್ಸು, ಅದರೆ, ಇಡೀ ಗುಜರಾತ್ ಸರ್ಕಾರವನ್ನೇ ಅಲುಗಾಡಿಸುತ್ತಿದ್ದಾರೆ. ಪಟೇಲ್ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವವರ ಮುಂದಾಳತ್ವ ವಹಿಸಿಕೊಂಡಿರುವ ಹಾರ್ದಿಕ್, ಗುಜರಾತ್ ಬಂದ್ ಗೆ ಕರೆ ನೀಡಿದ್ದಾರೆ.
ಒಬಿಸಿ ಮೀಸಲಾತಿಗೆ ಒತ್ತಾಯಿಸಿ ಗುಜರಾತ್ನ ಪಟೇಲ್ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ಮಂಗಳವಾರ ಹಿಂಸೆಗೆ ತಿರುಗಿದ್ದು, ಅಹ್ಮದಾಬಾದ್ ಬೇರೆಬೇರೆ ಭಾಗಗಳಲ್ಲಿ ಘರ್ಷಣೆಗಳು ವರದಿಯಾಗಿತ್ತು. ಅದರೆ, ಬುಧವಾರದಂದು ಹಿಂಸಾಚಾರ ಕೈಬಿಟ್ಟು ಶಾಂತಿಯುತ ಪ್ರತಿಭಟನೆ ಕೈಗೊಳ್ಳುವಂತೆ ಹಾರ್ದಿಕ್ ಪಟೇಲ್ ಕರೆ ನೀಡಿದ್ದಾರೆ.[ಮೋದಿ ನಾಡಲ್ಲಿ ಮೋಡಿ ಮಾಡಿರುವ ಹಾರ್ದಿಕ್ ಪಟೇಲ್]
ಬೃಹತ್ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಪಟೇಲ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ಅವರನ್ನು ಮುನ್ನಚ್ಚರಿಕೆಯ ಹಿನ್ನಲೆಯಲ್ಲಿ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅಹಮದಾಬಾದಿನ ವಡಾಜ್, ವಸ್ತ್ರಪುರ್, ನಿಕೊಲ್ ಮತ್ತು ಪಲ್ದಿ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳು ಮತ್ತು ಪಟೇಲ್ ಸಮುದಾಯದ ಸದಸ್ಯರ ನಡುವೆ ಘರ್ಷಣೆಗಳು ನಡೆದಿತ್ತು.[ಇಷ್ಟಕ್ಕೂ ನರೇಂದ್ರ ಮೋದಿ ಜಾತಿ ಯಾವುದು?]
ವಡಾಜ್ ಪ್ರದೇಶದಲ್ಲಿ ಸ್ಕೂಟರ್ ಮತ್ತು ಬೈಕ್ಗಳಲ್ಲಿ ಬಂದ ಪಟೇಲ್ ಸಮುದಾಯದ ಯುವಕರು ಬಲವಂತವಾಗಿ ಅಂಗಡಿಗಳು, ಇನ್ನಿತರ ವ್ಯಾಪಾರ ವ್ಯವಹಾರ ಸಂಸ್ಥೆಗಳನ್ನು ಮುಚ್ಚಿಸಿದರು. ದಲಿತ ಸಮುದಾಯಕ್ಕೆ ಸೇರಿದ ಸ್ಥಳೀಯರು ಇದನ್ನು ವಿರೋಧಿಸಿದರು. ತದನಂತರ ಎರಡೂ ಸಮುದಾಯದ ಜನರು ಪರಸ್ಪರ ಕಲ್ಲು ತೂರಾಟ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಲಾಠಿ ಪ್ರಹಾರ, ಅಶ್ರುವಾಯು, ಬಸ್ಗಳಿಗೆ ಕಲ್ಲು
ಘರ್ಷಣೆಯಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಜೊತೆಗೆ ಅಶ್ರುವಾಯು ಶೆಲ್ಗಳನ್ನು ಸಿಡಿಸಿದರು. ವಡಾಜ್ ಪೊಲೀಸ್ ಚೌಕದಲ್ಲಿ ಪ್ರತಿಭಟನಾಕಾರರು ಅಂಗಡಿಗಳಿಗೆ ಹಾನಿ ಮಾಡಿದ್ದಾರೆ. ಬಸ್ಗಳಿಗೆ ಕಲ್ಲು ತೂರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಅನೇಕ ಕಡೆಗಳಲ್ಲಿ ಇಂಟರ್ನೆಟ್ ಸಂಪರ್ಕ್ ಕಿತ್ತು ಹಾಕಲಾಗಿದೆ. ವಾಟ್ಸಪ್ ಸಂದೇಶಗಳನ್ನು ನಿರ್ಬಂಧಿಸಲಾಗಿದೆ.
ಗುಜರಾತಿನೆಲ್ಲೆಡೆ ಪ್ರತಿಭಟನೆ
ಅಹಮದಾಬಾದ್ ಅಲ್ಲದೆ ಸೂರತ್, ಮೆಹ್ಸಾನ, ರಾಜ್ ಕೋಟ್ ಹಾಗೂ ಇನ್ನಿತರ ಭಾಗಗಳಲ್ಲೂ ಪ್ರತಿಭಟನೆ ಬುಧವಾರ ಕೂಡಾ ಮುಂದುವರೆದಿದೆ. ಪಟೇಲ್ ಸಮುದಾಯ ರಾಜ್ಯವ್ಯಾಪಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸುತ್ತಿದ್ದರೂ, ಮೀಸಲಾತಿ ನೀಡಲು ರಾಜ್ಯ ಸರ್ಕಾರ ಸ್ಪಷ್ಟವಾಗಿ ನಿರಾಕರಿಸಿದೆ
ಜಾಹೀರಾತಿನ ಮೂಲಕ ಸ್ಪಷ್ಟನೆ
ಸಿಎಂ ಆನಂದಿಬೆನ್ ವಿಡಿಯೋ-ಆಡಿಯೋ ಧ್ವನಿಮುದ್ರಣ ನೀಡಿ ಮನವರಿಕೆ ಮಾಡಿದ್ದಾರೆ. 1992ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ, ಯಾವುದೇ ರಾಜ್ಯವು ಶೇ.50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ. ರಾಜ್ಯದಲ್ಲಿ ಒಬಿಸಿ ಶೇ.27, ಎಸ್ಟಿ-15 ಹಾಗೂ ಎಸ್ಸಿ -7 ಮೀಸಲಾತಿ ಹೊಂದಿದ್ದು, ಹೀಗಾಗಿ ನೀಡಲು ಸಾಧ್ಯವಿಲ್ಲ ಎಂದಿದೆ.
ಮೂಲತಃ ಕೃಷಿಕರಾದ ಪಟೇಲ್ ಸಮುದಾಯ
ಮೂಲತಃ ಕೃಷಿಕರಾದ ಪಟೇಲ್ ಸಮುದಾಯದವರು ಕಾಲಕ್ರಮೇಣ ಜವಳಿ, ವಜ್ರ ಹಾಗೂ ಔಷಧ ತಯಾರಿಕ ಕ್ಷೇತ್ರದ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದರು. 70ರ ದಶಕಕ್ಕೂ ಮುನ್ನ ಕಾಂಗ್ರೆಸ್ ಬೆಂಬಲಿಸುತ್ತಿದ್ದ ಈ ಸಮುದಾಯ, 81ಹಾಗೂ 85ರಲ್ಲಿ ದಲಿತ- ಹಿಂದುಳಿದ ವರ್ಗಕ್ಕೆ ಮೀಸಲಾತಿ ವಿರೋಧಿಸಿ ಹೋರಾಟ ನಡೆಸಿದ್ದಾರೆ.