3 ಬಾರಿ ಮಕರ ಜ್ಯೋತಿ ದರ್ಶನ: ಸ್ವಾಮಿಯೇ ಶರಣಂ ಅಯ್ಯಪ್ಪ!
ಉತ್ತರಾಯಣ ಪರ್ವಕಾಲ ಮಕರ ಸಂಕ್ರಾತಿಯ ದಿನವಾದ ಶನಿವಾರ (ಜ 14) ಸಂಜೆ 6.38ಕ್ಕೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಕರಜ್ಯೋತಿಯ ದರ್ಶನವಾಗಿದೆ.
ಶಬರಿಮಲೆ, ಜ 14: ಹಿಂದೂ ಪುರಾಣಪ್ರಸಿದ್ದ ದೇವಾಲಯ ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಉತ್ತರಾಯಣ ಪರ್ವಕಾಲ ಮಕರಸಂಕ್ರಾತಿಯ ದಿನವಾದ ಶನಿವಾರ (ಜ 14) ಮಕರಜ್ಯೋತಿಯ ದರ್ಶನವಾಗಿದೆ.
ಸಂಜೆ 6.38ಕ್ಕೆ ನೆರೆದಿದ್ದ ಲಕ್ಷಾಂತರ ಅಯ್ಯಪ್ಪ ಮಾಲಾಧಾರಿಗಳಿಗೆ ಮಕರಜ್ಯೋತಿಯ ದರ್ಶನವಾಗಿದ್ದು, 'ಸ್ವಾಮಿಯೇ ಶರಣಂ ಅಯ್ಯಪ್ಪ' ಘೋಷಣೆ ಮುಗಿಲು ಮುಟ್ಟಿತ್ತು. (ಶಬರಿಮಲೆಯ ಮಕರ ಜ್ಯೋತಿ ಎಂದರೇನು)
ಸಾಯಂಕಾಲದ ದೀಪಾರಾಧನೆಯ ಬಳಿಕ ಪೊನ್ನಂಬಲಮೇಡುವಿನಲ್ಲಿ ಮೂರು ಬಾರಿ ಮಕರ ಜ್ಯೋತಿಯ ದರ್ಶನವಾಗಿದ್ದು, ಜ್ಯೋತಿ ದರ್ಶನ ಪಡೆದ ಭಕ್ತಾದಿಗಳು ಪುನೀತರಾಗಿದ್ದಾರೆ.
ಕಳೆದ ವರ್ಷಕ್ಕಿಂತ ಅಧಿಕ ಸಂಖ್ಯೆಯಲ್ಲಿ ಭಕ್ತಾದಿಗಳು ಶಬರಿಮಲೆಗೆ ಬಂದಿದ್ದರು. ಕೇರಳ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಭಾರೀ ಬಂದೋಬಸ್ತ್ ಮಾಡಿತ್ತು.
ಶಬರಿಮಲೆ ದೇವಾಲಯದ ವಿರುದ್ಧ ದಿಕ್ಕಿನಲ್ಲಿರುವ ಪೊನ್ನಂಬಲಮೇಡು ಗಿರಿಯಲ್ಲಿ, ಪ್ರತಿವರ್ಷ ಜನವರಿ 14ರಂದು ಅಯ್ಯಪ್ಪ ಸ್ವಾಮಿಗೆ ಸಂಜೆಯ ಮಹಾಮಂಗಳಾರತಿ ಬಳಿಕ ಮಕರ ಜ್ಯೋತಿಯ ದರ್ಶನವಾಗುತ್ತದೆ.
ಮಕರಜ್ಯೋತಿಯು ಮೂರು ಬಾರಿ ದೇದೀಪ್ಯಮಾನವಾಗಿ ಮಿಣುಗಿ ಅದೃಶ್ಯವಾಗುತ್ತದೆ. ಮಕರಜ್ಯೋತಿ ಕಾಣಿಸಿಕೊಳ್ಳುವ ಪೊನ್ನಂಬಲಮೇಡು ಗಿರಿಯು ದಟ್ಟ ಕಾಡಿನಿಂದ ಆವೃತವಾಗಿದೆ.