ಚೀನಾ ಬಂದರಿನಿಂದ ನಾವಿಕರನ್ನು ಕರೆತರಲು ವಿವಿಧ ಆಯ್ಕೆಗಳ ಪರಿಶೀಲನೆ
ನವದೆಹಲಿ, ಜನವರಿ 1: ಚೀನಾದ ಬಂದರಿನಲ್ಲಿ ಹಲವು ತಿಂಗಳಿನಿಂದ ಸಿಲುಕಿರುವ ಭಾರತದ 39 ನಾವಿಕರನ್ನು ಮರಳಿ ತಾಯ್ನಾಡಿಗೆ ಕರೆತರಲು ವಿವಿಧ ಆಯ್ಕೆಗಳನ್ನು ಪರಿಶೀಲಿಸುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಆಸ್ಟ್ರೇಲಿಯಾದಿಂದ ಕಲ್ಲಿದ್ದಲು ತರುತ್ತಿದ್ದ ಎಂವಿ ಜಗ್ ಆನಂದ್ ಮತ್ತು ಎಂವಿ ಅನಸ್ತೇಷ್ಯಾ ಹಡಗಿನಲ್ಲಿರುವ ಭಾರತದ ನಾವಿಕರನ್ನು ಚೀನಾದ ಬಂದರಿನಲ್ಲಿಯೇ ಇರಿಸಲಾಗಿದೆ. ಅವರಿಗೆ ತಮ್ಮ ಸರಕನ್ನು ತೆರವುಗೊಳಿಸಲು ಕೂಡ ಅವಕಾಶ ನೀಡಿಲ್ಲ. ಚೀನಾ-ಆಸ್ಟ್ರೇಲಿಯಾ ವ್ಯಾಪಾರ ಬಿಕ್ಕಟ್ಟು ಮತ್ತು ಭಾರತ-ಚೀನಾ ಗಡಿ ಬಿಕ್ಕಟ್ಟು ಎರಡೂ ಅಂಶಗಳು ಇದಕ್ಕೆ ಕಾರಣ ಎನ್ನಲಾಗಿದೆ.
ಈ ವಿಚಾರವನ್ನು ಚೀನಾ ರಾಯಭಾರ ಕಚೇರಿ ಮತ್ತು ಸ್ಥಳೀಯ ಪ್ರಾಂತ್ಯ ಅಧಿಕಾರಿಗಳೊಂದಿಗೆ ಪ್ರಸ್ತಾಪಿಸಲಾಗಿದ್ದು, ಹಡಗನ್ನು ಬಂದರಿನಲ್ಲಿ ನಿಲ್ಲಿಸಲು ಅಥವಾ ಸಿಬ್ಬಂದಿಯನ್ನು ಬದಲಿಸಲು ಅವಕಾಶ ನೀಡುವಂತೆ ಕೋರಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

'ಸರಗು ಸಾಗಣೆ ಕಂಪೆನಿಗಳು ಹಡಗುಗಳು ಈಗಿರುವ ಸ್ಥಳದಿಂದ ಸರಕುಗಳನ್ನು ಬೇರೆಡೆಗೆ ಸಾಗಿಸುವ ಕುರಿತು ಪರಿಶೀಲನೆ ನಡೆಸುತ್ತಿವೆ. ನಮ್ಮ ರಾಯಭಾರ ಕಚೇರಿಯು ಸಿಬ್ಬಂದಿ ಬದಲಾವಣೆಗೆ ಅನುಮತಿ ನೀಡುವಂತೆ ಟಿಯಾಂಜಿನ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದೆ' ಎಂದು ಅವರು ಹೇಳಿದ್ದಾರೆ.
ವಿಭಿನ್ನ ದೇಶಗಳ ಅನೇಕ ಹಡಗುಗಳು ಕೂಡ ತಮ್ಮ ಸರಕುಗಳನ್ನು ಚೀನಾ ಬಂದರಿನಲ್ಲಿ ಇಳಿಸಲು ತಮ್ಮ ಸರದಿಗಾಗಿ ಕಾಯುತ್ತಿವೆ. ಅಲ್ಲಿಂದ ತೆರಳಲು ಅನುಮತಿ ನೀಡದ ಕಾರಣ ವಿಳಂಬವಾಗುತ್ತಿರುವುದು ನಾವಿಕರ ಮೇಲೆ ಒತ್ತಡ ಹೆಚ್ಚಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications