ಲಾಲೂಜಿ ಒಬ್ಬ ಹೀರೋ, ಹೀರೋ ಆಗೇ ಇರ್ತಾರೆ!
ಪಟ್ನಾ, ಅ. 3 : "ಲಾಲೂಜಿ ಒಬ್ಬ ಹೀರೋ, ಅವರು ಹೀರೋ ಆಗಿಯೇ ಇರುತ್ತಾರೆ. ಬಡವರಿಗಿಂತ ಬಡವರ, ತುಳಿತಕ್ಕೊಳಗಾದವರ, ಜಾತ್ಯತೀತವಾದದ ಚಾಂಪಿಯನ್ ಅವರಾಗಿದ್ದು, ಬಿಹಾರ ಮಾತ್ರವಲ್ಲ, ಇಡೀ ದೇಶದ ಮತ್ತು ಇಡೀ ಜಗತ್ತಿನ ಜನರೆಲ್ಲರೂ ಅವರನ್ನು ಇಂದಿಗೂ ಪ್ರೀತಿಸುತ್ತಾರೆ..."
ಹೀಗೆಂದು ಹೇಳಿದ್ದು ಮತ್ತಾರೂ ಅಲ್ಲ, 950 ಕೋಟಿ ರು. ಮೇವು ಹಗರಣದಲ್ಲಿ 5 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಧರ್ಮಪತ್ನಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರು.
ಲಾಲೂ ಅವರಿಗೆ ಈ ಪ್ರಕರಣದಲ್ಲಿ ಶಿಕ್ಷೆ ಪ್ರಕಟವಾಗುತ್ತಿದ್ದಂತೆ ಭಾವುಕರಾಗಿ ಮೇಲಿನಂತೆ ನುಡಿದಿರುವ ರಾಬ್ಡಿ ದೇವಿ ಅವರು, "ಲಾಲೂ ಅವರ ವಿರುದ್ಧ ಯಾವುದೇ ಸಾಕ್ಷಿ ಇಲ್ಲ. ರಾಜಕೀಯ ಷಡ್ಯಂತ್ರದ ಬಲಿಪಶು ಅವರಾಗಿದ್ದಾರೆ. ಲಾಲೂಜಿ ಅವರು ಹೀರೋ ಆಗಿರದೇ ಇದ್ದರೆ ಮಾಧ್ಯಮ ಅವರ ಮೇಲೆ ಏಕಿಷ್ಟು ಗಮನ ಹರಿಸಬೇಕಿತ್ತು" ಎಂದು ಪ್ರಶ್ನಿಸಿದ್ದಾರೆ.
"ಅವರ ಬಂಧನದಿಂದ ನಾನು ಮಾತ್ರ ದುಃಖಿಯಾಗಿಲ್ಲ, ಇಡೀ ದೇಶವೇ ದುಃಖಿಯಾಗಿದೆ. ಅವರ ವಿರುದ್ಧ ಒಂದೇ ಒಂದು ಸಾಕ್ಷಿ ಇರುವುದನ್ನು ತೋರಿಸಿ ನೋಡೋಣ" ಎಂದು ಭಾವುಕರಾಗಿ ಸವಾಲು ಎಸೆದಿದ್ದಾರೆ ರಾಬ್ಡಿ ದೇವಿ. ಲಾಲೂ ಜೈಲು ಸೇರಿರುವುದರಿಂದ ರಾಬ್ಡಿ ದೇವಿ ಮೇಲೆ ರಾಷ್ಟ್ರೀಯ ಜನತಾದಳದ ಭಾರ ಹೊರುವ ಬವಾಬ್ದಾರಿ ಬಿದ್ದಿದೆ.
ಪೊಲೀಸರು ಮತ್ತು ಸಿಬಿಐನವರು ನನ್ನ ಮನೆ, ನನ್ನ ಸಂಬಂಧಿಗಳ ಮನೆ ಹುಡುಕಾಡಿ ಜಾಲಾಡಿದರು. ಅವರಿಗೆ ಮೇವು ಹಗರಣಕ್ಕೆ ಸಂಬಂಧಿಸಿದ ಯಾವುದೇ ಹಣ ಸಿಕ್ಕಿತಾ? ಲಾಲೂ ಅವರಿಗೆ ನ್ಯಾಯ ದೊರಕಿಸಿಕೊಡಲು ನಾನು ಹೈಕೋರ್ಟ್ ಮತ್ತು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇನೆ ಎಂದು ನುಡಿದರು.
ರಾಜಕೀಯ ಷಡ್ಯಂತ್ರ ನಡೆಸಿದ್ದು ಯಾರು ಎಂದು ಪ್ರಶ್ನಿಸಿದಾಗ, ಬಿಹಾರದ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರ ಹೆಸರನ್ನು ಪ್ರಸ್ತಾಪಿಸಿದ ಅವರು, ಮೇವು ಹಗರಣದಲ್ಲಿ ನಿತಿಶ್ ಕುಮಾರ್ ಅವರು ಕೂಡ ಹಣ ಪಡೆದಿದ್ದಾರೆ ಎಂದು ಹೇಳಿದರು. ಅಲ್ಲದೆ, ಲಾಲೂ ಅವರು ಎಲ್ಲೇ ಇರಲಿ, ಅಲ್ಲಿಂದಲೇ ಪಕ್ಷವನ್ನು ನಡೆಸುತ್ತಾರೆ ಎಂದು ನುಡಿದರು.
ಲಾಲೂ ಅವರನ್ನು ಹೀರೋ ಎಂದಿರುವ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಪೊಲೀಸ್ ಅಧಿಕಾರಿ ಕಿರಣ್ ಬೇಡಿ ಅವರು, ಹೀರೋ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರು ಅನೇಕ ಜೀರೋಗಳನ್ನು (ಹಲವು ಕೋಟಿಗಳ ಮೇವು ಹಗರಣ) ಕದ್ದಿದ್ದಾರೆ ಎಂದು ಮಾರ್ಮಿಕವಾಗಿ ಟ್ವೀಟ್ ಮಾಡಿದ್ದಾರೆ.
(Indeed. But the hero stole many zeros)@EconomicTimes: Lalu Prasad is a hero and will remain a hero, says Rabri Devi http://t.co/OYPDAIFzTs”
— Kiran Bedi (@thekiranbedi) October 3, 2013