2 ವರ್ಷಗಳ ನಂತರ ಜೈಲಿನಿಂದ ಹೊರಬಂದ ಕೇರಳ ಪತ್ರಕರ್ತ ಸಿದ್ದಿಕ್ ಕಪ್ಪನ್
ಎರಡು ವರ್ಷಗಳ ಹಿಂದೆ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವರದಿ ಮಾಡಲು ಯುಪಿಯ ಹತ್ರಾಸ್ಗೆ ತೆರಳುತ್ತಿದ್ದಾಗ ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಕೊನೆಗೂ ಜೈಲಿನಿಂದ ಹೊರಬಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ ಎರಡು ವರ್ಷಗಳ ನಂತರ ಗುರುವಾರ ಲಕ್ನೋ ಜೈಲಿನಿಂದ ಹೊರಬಂದಿದ್ದಾರೆ. ಎರಡು ವರ್ಷಗಳ ಹಿಂದೆ ಕಪ್ಪನ್ ಅವರನ್ನು ಉತ್ತರ ಪ್ರದೇಶದ ಹತ್ರಾಸ್ಗೆ ತೆರಳುತ್ತಿದ್ದಾಗ ಬಂಧಿಸಲಾಗಿತ್ತು.
ಸಿದ್ದಿಕ್ ಮತ್ತು ಇತರ ಮೂವರು ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಹಿಂಸಾಚಾರವನ್ನು ಪ್ರಚೋದಿಸುವ ಪಿತೂರಿಯ ಭಾಗವಾಗಿದ್ದಾರೆ ಎಂಬ ಆರೋಪವನ್ನು ಹೊತ್ತಿದ್ದಾರೆ. ಹತ್ರಾಸ್ ನಲ್ಲಿ ದಲಿತ ಮಹಿಳೆಯೊಬ್ಬರು ಅತ್ಯಾಚಾರಕ್ಕೊಳಗಾದ ನಂತರ ಸಾವನ್ನಪ್ಪಿದ್ದರು. ಈ ಘಟನೆಯ ವರದಿ ಮಾಡಲು ಸಿದ್ದಿಕ್ ಹತ್ರಾಸ್ಗೆ ತೆರಳುತ್ತಿದ್ದ ವೇಳೆ ಸಿದ್ದಿಕ್ ಅವರನ್ನು ಬಂಧಿಸಲಾಗಿತ್ತು.
ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಸಿದ್ದಿಕ್ ಅವರಿಗೆ ಜಾಮೀನು ನೀಡಿತ್ತು. ಆದರೆ ಜಾರಿ ನಿರ್ದೇಶನಾಲಯದ ಅಕ್ರಮ ಹಣ ವರ್ಗಾವಣೆ ಪ್ರಕರಣದಿಂದಾಗಿ ಅವರು ಜೈಲಿನಲ್ಲೇ ಮುಂದುವರಿದರು. ಜಾಮೀನಿನ ಮೇಲೆ ಕಪ್ಪನ್ ಬಿಡುಗಡೆಗೆ ಅಗತ್ಯವಾದ ಶ್ಯೂರಿಟಿಗಳನ್ನು ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ಇದರ ಬೆನ್ನಲ್ಲೆ ಇಂದು ಅವರು ಜೈಲಿನಿಂದ ಹೊರಬಂದಿದ್ದಾರೆ.
ಡಿಸೆಂಬರ್ನಲ್ಲಿ ಜಾಮೀನು ಪಡೆದಿದ್ದ ಸಿದ್ದಿಕ್
ಎರಡು ವರ್ಷಗಳ ಹಿಂದೆ ದಲಿತ ಯುವತಿಯ ಮೇಲಿನ ಅತ್ಯಾಚಾರ ಮತ್ತು ಹತ್ಯೆಯ ವರದಿ ಮಾಡಲು ಯುಪಿಯ ಹತ್ರಾಸ್ಗೆ ತೆರಳುತ್ತಿದ್ದಾಗ ಭಯೋತ್ಪಾದನೆ ಆರೋಪದ ಮೇಲೆ ಬಂಧಿತರಾಗಿದ್ದ ಕೇರಳದ ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಕಳೆದ ವರ್ಷ ಡಿಸೆಂಬರ್ನಲ್ಲಿ ಹೈಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಅವರು ಈಗಾಗಲೇ ಸೆಪ್ಟೆಂಬರ್ನಲ್ಲಿ ಸುಪ್ರೀಂ ಕೋರ್ಟ್ನಿಂದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಇತರ ಸಂಬಂಧಿತ ಕಾನೂನುಗಳ ಅಡಿಯಲ್ಲಿ ದಾಖಲಾದ ಭಯೋತ್ಪಾದನಾ ಪ್ರಕರಣದಲ್ಲಿ ಜಾಮೀನು ಪಡೆದಿದ್ದರು. ಆದರೆ, ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇದುವರೆಗೆ ಯಾವುದೇ ಪರಿಹಾರ ಸಿಗದ ಕಾರಣ ಲಕ್ನೋ ಜೈಲಿನಲ್ಲಿಯೇ ಇದ್ದರು. ಇದು ಜಾರಿ ನಿರ್ದೇಶನಾಲಯ ದಾಖಲಿಸಿದ ಪ್ರಕರಣವಾಗಿದೆ.
ಜಾಮೀನು ಪಡೆದರೂ ಸಿದ್ದಿಕ್ ಬಿಡುಗಡೆಗೆ ತಡ
ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಅವರ ವಿರುದ್ಧ ಯುಎಪಿಎ (ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ ಅಡಿಯಲ್ಲಿ ಕೂಡಾ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಅವರಿಗೆ 2022ರ ಸೆಪ್ಟೆಂಬರ್ನಲ್ಲಿ ಜಾಮೀನು ನೀಡಿತ್ತು. ಜಾರಿ ನಿರ್ದೇಶನಾಲಯ (ಇಡಿ) ಆರಂಭಿಸಿದ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವು ಪತ್ರಕರ್ತ ಸಿದ್ದಿಕ್ ಕಪ್ಪನ್ಗೆ ಜಾಮೀನು ನೀಡಿತ್ತು. ಆದರೆ, ಕೋರ್ಟ್ ಅವರಿಗೆ ಜಾಮೀನು ನೀಡಿ ವಾರಗಳು ಕಳೆದರೂ ಅವರು ಇನ್ನೂ ಜೈಲಿನಲ್ಲೇ ಇದ್ದರು. 2022ರ ಡಿಸೆಂಬರ್ 23ರಂದು ಜಾಮೀನು ಆದೇಶವನ್ನು ಅಂಗೀಕರಿಸಲಾಗಿದ್ದರೂ, ಅವರ ಜಾಮೀನು ಶ್ಯೂರಿಟಿಯನ್ನು ಇನ್ನೂ ಪರಿಶೀಲಿಸಲಾಗಿಲ್ಲ ಎನ್ನುವ ಆರೋಪಗಳು ಹೇಳಿಬಂದಿದ್ದವು.
ವೈಯಕ್ತಿಕ ಬಾಂಡ್
ಯುಎಪಿಎ ಪ್ರಕರಣದಲ್ಲಿ ಜಾಮೀನು ಪಡೆದಾಗ ಸಿದ್ದಿಕ್ ಕಪ್ಪನ್ ಅವರಿಗೆ ತಲಾ 1 ಲಕ್ಷ ರೂ.ಗಳ ಎರಡು ಶ್ಯೂರಿಟಿ ಮತ್ತು ಅಷ್ಟೆ ಮೊತ್ತದ ವೈಯಕ್ತಿಕ ಬಾಂಡ್ ನೀಡುವಂತೆ ಕೇಳಲಾಗಿತ್ತು. ಪ್ರಸ್ತುತ ಪ್ರಕರಣವು ಸಹ ಇದೇ ರೀತಿಯಲ್ಲಿ ಇದ್ದು, ಕಪ್ಪನ್ ಅವರು ತಲಾ 1 ಲಕ್ಷ ರೂಪಾಯಿಗಳ ಎರಡು ಸ್ಥಳೀಯ ಶ್ಯೂರಿಟಿಗಳು ಮತ್ತು ವೈಯಕ್ತಿಕ ಬಾಂಡ್ ಅನ್ನು ಕೇಳಲಾಗಿತ್ತು.
ಕೇರಳದ ಪತ್ರಕರ್ತ ಸಿದ್ದಿಕ್ ಬಂಧನವಾಗಿದ್ದು ಹೇಗೆ?
ದಲಿತ ಯುವತಿಯ ಮೇಲೆ ಅತ್ಯಾಚಾರ ನಡೆಸಿ, ಹತ್ಯೆ ಮಾಡಿದ್ದ ಪ್ರಕರಣವನ್ನು ಸುದ್ದಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ಗೆ ತೆರಳುತ್ತಿದ್ದಾಗ ಸಿದ್ದಿಕ್ ಕಪ್ಪನ್ ಮತ್ತು ಇತರ ನಾಲ್ವರನ್ನು 2020ರ ಅಕ್ಟೋಬರ್ನಲ್ಲಿ ಬಂಧಿಸಲಾಗಿತ್ತು. ಈ ವೇಳೆ ಅವರ ವಿರುದ್ಧ, 'ಕೋಮು ಗಲಭೆಗಳ ಕುರಿತು ವರದಿ ಮಾಡಿದ್ದಾರೆ' ಮತ್ತು ಬಲಪಂಥೀಯ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ನೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು.ಪ್ರಕರಣದ ತನಿಖೆ ನಡೆಸುತ್ತಿರುವ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯು ಅವರ ವಿರುದ್ಧ ಪ್ರಕರಣದಲ್ಲಿ 5,000 ಪುಟಗಳ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದು, "ಅವರು ಮುಸ್ಲಿಮರ ಬಗ್ಗೆ ಮಾತ್ರ ವರದಿ ಮಾಡಿದ್ದಾರೆ" ಎಂದು ಹೇಳಿದ್ದರು. ಜೊತೆಗೆ ಸೆಕ್ಷನ್ 124A (ದೇಶದ್ರೋಹ), 153A (ಹಗೆತನವನ್ನು ಉತ್ತೇಜಿಸುವುದು), 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ), UAPA, PMLA, ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಜೊತೆಗೆ ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಪೊಲೀಸರು ಆರೋಪ ಹೊರಿಸಿದ್ದಾರೆ.