ಐಎಸ್ಐಎಸ್ ಸೇರಿದ ಕೇರಳದ ಪತ್ರಕರ್ತ?
ಬೆಂಗಳೂರು, ಆಗಸ್ಟ್ 4 : ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್ಐಎಸ್) ಉಗ್ರ ಸಂಘಟನೆಯ ವಿಚಾರಧಾರೆಗಳಿಂದ ಆಕರ್ಷಿತನಾಗಿ ಕೇರಳದ ಪತ್ರಕರ್ತನೊಬ್ಬ ಉಗ್ರ ಸಂಘಟನೆ ಸೇರಿದ್ದಾನೆ. ಕೇಂದ್ರ ಗುಪ್ತಚರ ಇಲಾಖೆ ಈ ಬಗ್ಗೆ ಕೇರಳ ಪೊಲೀಸರಿಗೆ ಮಾಹಿತಿ ರವಾನಿಸಿದೆ.
ಪಾಲಕ್ಕಾಡ್ನಲ್ಲಿನ ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಸಿರಿಯಾದಲ್ಲಿರಬಹುದು ಎಂದು ಕೇರಳ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ. ಈತ ಕೇರಳದಿಂದ ನೇರವಾಗಿ ಸಿರಿಯಾಕ್ಕೆ ಹೋಗಿರುವ ಸಾಧ್ಯತೆ ಕಡಿಮೆ. ಗಲ್ಫ್ ರಾಷ್ಟ್ರದ ಪತ್ರಿಕೆಯಲ್ಲಿ ಕೆಲಸ ಪಡೆದ ಈತ ಅಲ್ಲಿಂದ ಸಿರಿಯಾಕ್ಕೆ ಹೋಗಿರಬಹುದು ಎಂದು ಶಂಕಿಸಲಾಗಿದೆ. [ಉಗ್ರರ ವಶದಲ್ಲಿದ್ದ ಕನ್ನಡಿಗರ ರಕ್ಷಣೆ]
ಸಿರಿಯಾಕ್ಕೆ ತೆರಳಿರುವ ಪತ್ರಕರ್ತ ಪಾಲಕ್ಕಾಡ್ನ ದಿನಪತ್ರಿಕೆಯಲ್ಲಿ ವರದಿಗಾರನಾಗಿ ಸೇರಿಕೊಂಡಿದ್ದ. ಒಂದು ವರ್ಷದ ಹಿಂದೆ ಐಎಸ್ಐಎಸ್ ವಿಚಾರಧಾರೆಗಳ ಕುರಿತು ಕುಟುಂಬದವರೊಂದಿಗೆ ಮಾತನಾಡಲು ಆರಂಭಿಸಿದ್ದ. ಮಗನ ವರ್ತನೆಯಿಂದ ಆತಂಕಗೊಂಡಿದ್ದ ತಂದೆ ಉಗ್ರ ಸಂಘಟನೆ ಸೇರದಂತೆ ಕಿವಿಮಾತು ಹೇಳಿದ್ದರು. [ಉಗ್ರರ ವಶದಲ್ಲಿರುವ ಶಿಕ್ಷಕರ ಬಿಡುಗಡೆ ಯಾವಾಗ?]
ಪಾಲಕ್ಕಾಡ್ನಲ್ಲಿನ ಉದ್ಯೋಗ ತೊರೆದ ಆತ ಗಲ್ಫ್ ರಾಷ್ಟ್ರಕ್ಕೆ ಕೆಲಸ ಮಾಡಲು ಹೋಗುವುದಾಗಿ ಹೇಳಿದ್ದ. 8 ತಿಂಗಳ ಹಿಂದೆ ಗಲ್ಫ್ನಲ್ಲಿ ಉದ್ಯೋಗ ಪಡೆದಿದ್ದ ಆತ. ಅಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಮನೆಯಲ್ಲಿ ಮತ್ತೆ ಐಎಸ್ಐಎಸ್ ಬಗ್ಗೆ ಮಾತನಾಡಿದ್ದ. ಆದರೆ, ಕುಟುಂಬದವರು ಆತನ ಮನವೊಲಿಸಿದ್ದರು.
ಮಾಹಿತಿ ಲಭ್ಯವಾಗಿತ್ತು : ಪಾಲಕ್ಕಾಡ್ನಿಂದ ಆತ ಗಲ್ಫ್ ರಾಷ್ಟ್ರಕ್ಕೆ ಹೋಗುತ್ತಿದ್ದಂತೆ ಐಎಸ್ಐಎಸ್ ಸಂಘಟನೆ ಜೊತೆ ಮಾತುಕತೆ ನಡೆಸಿದ ಬಗ್ಗೆ ಮಾಹಿತಿ ಗುಪ್ತಚರ ಇಲಾಖೆಗೆ ಲಭ್ಯವಾಗಿತ್ತು. ಗಲ್ಫ್ಗೆ ಹೋಗುತ್ತಿದ್ದಂತೆಯೇ ಆತ ಸಿರಿಯಾಕ್ಕೆ ಹೋಗುವ ಬಗ್ಗೆ, ಐಎಸ್ಐಎಸ್ ಸಂಘಟನೆ ನೇಮಕಾತಿ ಬಗ್ಗೆ ಇಂಟರ್ನೆಟ್ನಲ್ಲಿ ಮಾಹಿತಿ ಹುಡುಕಿದ್ದ.
ಕೇರಳದ ಗುಪ್ತಚರ ಇಲಾಖೆ ಪತ್ರಕರ್ತನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಣೆ ಮಾಡುತ್ತಿದೆ. ಸಿರಿಯಾದಲ್ಲಿರುವ ಆತ ಉಗ್ರರ ಯಾವುದೋ ಕ್ಯಾಂಪ್ನಲ್ಲಿರಬಹುದು ಎಂದು ಪೊಲೀಸರು ಹೇಳಿದ್ದಾರೆ.