ಐಎಸ್ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ
ಮುಂಬೈ, ನ. 25: ಯಾವುದೋ ಸೆಳೆತಕ್ಕೆ ಸಿಕ್ಕು ಮನೆ ತೊರೆದು ಉಗ್ರಗಾಮಿ ಸಂಘಟನೆ ಸೇರಿಕೊಂಡಿದ್ದ ಮಹಾರಾಷ್ಟ್ರದ ಮೂವರು ಯುವಕರು ಮತ್ತೆ ದೇಶಕ್ಕೆ ಹಿಂದಿರುಗುವ ಇಂಗಿತ ವ್ಯಕ್ತಪಡಿಸಿದ್ದಾರೆ.
ಇರಾಕ್ ಮತ್ತು ಸಿರಿಯಾದಲ್ಲಿನ ಐಎಸ್ ಐಎಸ್ ನ ಘಟಕ ಸೇರಿಕೊಂಡಿದ್ದ ಯುವಕರು ಕಳೆದ ಸಪ್ಟೆಂಬರ್ ನಿಂದ ತಮ್ಮ ಕುಟುಂಬದ ಸಂಪರ್ಕಕ್ಕೆ ಬಂದಿದ್ದಾರೆ. ಅಲ್ಲದೇ ಅಲ್ಲಿನ ಕರಾಳ ಪರಿಸ್ಥಿತಿಯನ್ನು ವಿವರಿಸಿದ್ದು ದೇಶಕ್ಕೆ ಹಿಂದಿರುಗುತ್ತೇವೆ ಎಂದು ಹೇಳಿದ್ದಾರೆ.[ಸೌದಿಯಲ್ಲೂ ಐಎಂ ನಿಷೇಧ: ಅಡಗುತ್ತಾ ಉಗ್ರರ ಸದ್ದು?]
ಗೃಹ ಇಲಾಖೆ ಸಚಿವಾಲಯದ ಮೂಲಗಳು 'ಒನ್ ಇಂಡಿಯಾ'ಕ್ಕೆ ಈ ಬಗ್ಗೆ ಮಾಹಿತಿ ನೀಡಿದ್ದು, ಒಂದು ಕಪ್ ಚಹಾಕ್ಕಾಗಿ ಹೊಡೆದಾಡುವ ಪರಿಸ್ಥಿತಿಯಿದೆ. ಮನುಷ್ಯರ ನಡುವಿನ ನಂಬಿಕೆ ವಿಶ್ವಾಸಕ್ಕೆ ಬೆಲೆ ಇಲ್ಲ. ದೇಶಕ್ಕೆ ಹಿಂದಿರುಗುವ ಇರಾದೆ ಇದೆ ಎಂದು ಯುವಕರು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದೆ.
ಸಿರಿಯಾಕ್ಕೆ ತೆರಳಿದ್ದ ಯುವಕ ಶಹೀನ್ ಥಕ್ಕಿ ಕಳೆದ ಸಪ್ಟೆಂಬರ್ ನಲ್ಲಿ ತನ್ನ ತಾಯಿಗೆ ಕರೆ ಮಾಡಿದ್ದ. ತನ್ನ ಸ್ನೇಹಿತ ಮಜೀದ್ ಬಾಂಬ್ ಸ್ಫೋಟವೊಂದರಲ್ಲಿ ಸಾವನ್ನಪ್ಪಿದ್ದನ್ನು ತಿಳಿಸಲು ಕರೆ ಮಾಡಿದ್ದ. ಉಳಿದಂತೆ ಎಲ್ಲವೂ ಸರಿಯಾಗಿದೆ ಎಂದು ತಿಳಿಸಿದ್ದ.[ಮತ್ತೆ ವ್ಯಾಪಾರಕ್ಕೆ ತೆರೆದುಕೊಂಡ ವಿಶ್ವ ವಾಣಿಜ್ಯ ಕೇಂದ್ರ]
ಭಾರತ ಸರ್ಕಾರ ಸಹ ಈ ಬಗ್ಗೆ ಹೊಸ ರೀತಿಯ ಕ್ರಮ ತೆಗೆದುಕೊಂಡಿದೆ. ಉಗ್ರಗಾಮಿ ಸಂಘಟನೆಗೆ ಸೇರಿದ್ದರೂ ಎಲ್ಲವನ್ನೂ ತೊರೆದು ದೇಶಕ್ಕೆ ಹಿಂದಿರುಗಯತ್ತೆವೆ ಎಂದರೆ ಅವರ ಮೇಲೆ ಪ್ರಕರಣ ದಾಖಲು ಮಾಡುವುದನ್ನು ಪರಿಶೀಲಿಸಲಾಗುವುದು ಎಂದಿದೆ.
ಕಳೆದ ಸಪ್ಟೆಂಬರ್ ತಿಂಗಳೊಂದರಲ್ಲೇ ಸುಮಾರು 300 ಯುವಕರು ದೇಶ ಬಿಟ್ಟು ಹೋಗಿದ್ದರು ಎಂದು ಹೇಳಲಾಗಿದ್ದರೂ ಕೇವಲ 10 ಜನ ಉಗ್ರಗಾಮಿ ಸಂಘಟನೆಗೆ ಸೇರಿಕೊಂಡಿದ್ದಾರೆ ಎಂದು ರಾಷ್ಟ್ರೀಯ ಸುರಕ್ಷತಾ ವಿಭಾಗದ ಅಜಿತ್ ಡೊವೆಲ್ ಹೇಳಿದ್ದಾರೆ.
ಆದರೆ ಭಾರತದ ಗುಪ್ತಚರದಳ ಈ ಬಗ್ಗೆ ಸಂಪೂರ್ಣ ಭಿನ್ನವಾದ ವರದಿಯನ್ನೇ ನೀಡಿದೆ, ಒಮ್ಮೆ ಐಎಸ್ ಐಎಸ್ ಅಂಥ ಸಂಘಟನೆಗೆ ಸೇರಿಕೊಂಡವರ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಲಾಗುತ್ತದೆ. ಅವರಲ್ಲಿ ದೇಶಭಕ್ತಿ ಮಾಯವಾಗಿರುತ್ತದೆ. ಇಂಥ ಕ್ರಮ ತೆಗೆದುಕೊಳ್ಳಬೇಕಾದರೆ ಸರ್ಕಾರ ಎಚ್ಚರಿಕೆ ವಹಿಸಬೇಕಾದ್ದು ಅಗತ್ಯ ಎಂದಿದೆ.
ಒಟ್ಟಿನಲ್ಲಿ ಉಗ್ರಗಾಮಿ ಸಂಘಟನೆ ಸೇರಿದ ಯುವಕರು, ಭಾರತ ಸರ್ಕಾರ, ಗುಪ್ತಚರ ದಳ, ಐಎಸ್ ಐಎಸ್ ಸಂಘಟನೆ ಎಲ್ಲರಿಗೂ ಸಮಾನವಾದ ತತ್ವ ಸಿದ್ಧಪಡಿಸಲು ಸಾಧ್ಯವಿಲ್ಲ. ದೇಶ ಬಿಟ್ಟು ಹೋದವರು ಅಮೆರಿಕ ವಿರೋಧಿ ಸಂಘಟನೆಗೆ ಸೇರಿಕೊಂಡಿದ್ದಾರೋ ಅಥವಾ ದೇಶಕ್ಕೆ ಮಾರಕವಾದ ರೀತಿ ವರ್ತಿಸುತ್ತಿದ್ದಾರೋ ಕಂಡುಹಿಡಿಯುವುದು ಸುಲಭ ಸಾಧ್ಯವಲ್ಲ.