ಸಿಂಘು ಗಡಿಯಲ್ಲಿ ಯುವಕನ ಹತ್ಯೆ ಮಾಡಿ ದೇಹ ಬ್ಯಾರಿಕೇಡ್ಗೆ ತೂಗುಹಾಕಿ ದುಷ್ಕೃತ್ಯ
ಸಿಂಘು, ಅಕ್ಟೋಬರ್ 15: ರೈತರ ಪ್ರತಿಭಟನೆ ನಡೆಯುತ್ತಿರುವ ಸಿಂಘು ಗಡಿಯಲ್ಲಿ ಯುವಕನೊಬ್ಬನ ಕೈಯನ್ನು ಕತ್ತರಿಸಿ ಬ್ಯಾರಿಕೇಡ್ಗೆ ತೂಗುಹಾಕಿರುವ ಘಟನೆ ನಡೆದಿದೆ.
ಸುಮಾರು 35 ವರ್ಷದ ವ್ಯಕ್ತಿಯ ದೇಹವನ್ನು ಕತ್ತರಿಸಿ ಬ್ಯಾರಿಕೇಡ್ಗಳಲ್ಲಿ ನೇತು ಹಾಕಲಾಗಿದೆ. ಇಂದು ಬೆಳಗಿನ ಜಾವ ಸಿಂಘು ಗಡಿಯಲ್ಲಿರುವ ರೈತರ ಪ್ರತಿಭಟನಾ ಮುಖ್ಯ ವೇದಿಕೆಯ ಬಳಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಚೂಪಾದ ಆಯುಧದಿಂದ ವ್ಯಕ್ತಿಯ ದೇಹದ ಮೇಲೆ ದಾಳಿ ಮಾಡಿದ ಗುರುತುಗಳಿವೆ. ಒಂದು ಕೈಯನ್ನು ಕತ್ತರಿಸಲಾಗಿದೆ. ಘಟನಾ ಸ್ಥಳದಲ್ಲಿ ಪ್ರತಿಭಟನಾನಿರತರು ಜಮಾಯಿಸಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದೆ. ಪೊಲೀಸರಿಗೂ ಸಹ ಮೃತದೇಹದ ಬಳಿ ಹೋಗಲು ಆಗದಷ್ಟು ಜನ ಕಿಕ್ಕಿರಿದಿದ್ದಾರೆ. ನಿಹಾಂಗ್ಗಳು ಈ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಯಾರು ಈ ನಿಹಾಂಗ್ಗಳು?:
ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಅಲಂಕೃತ ಪೇಟಗಳನ್ನು ಧರಿಸಿರುತ್ತಾರೆ.
ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಈ ನಿಹಾಂಗ್ಗಳು ಫತೇಹ್ ಸಿಂಗ್, ಗುರು ಹರಗೋಬಿಂದ್ ಆರಂಭಿಸಿದ "ಅಕಾಲಿ" ಯಿಂದ ಹುಟ್ಟಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ.
ಬೆಳಿಗ್ಗೆ 5 ಗಂಟೆ ಸುಮಾರಿಗೆ, ರೈತರ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿ (ಕುಂಡ್ಲಿ, ಸೋನಿಪತ್) ಕೈಗಳು, ಕಾಲುಗಳನ್ನು ಕತ್ತರಿಸಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಡಿಎಸ್ ಪಿ ಹನ್ಸ್ ರಾಜ್ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
"ಘಟನೆಯ ಹಿಂದೆ ನಿಹಾಂಗ್ ಕೈವಾಡವಿದೆ. ಅವರು ಅದನ್ನು ಒಪ್ಪಿಕೊಂಡಿದ್ದಾರೆ. ನಿಹಾಂಗ್ ಗಳು ನಮಗೆ ಮೊದಲಿನಿಂದಲೂ ತೊಂದರೆ ನೀಡುತ್ತಿದ್ದಾರೆ" ಎಂದು ಎಸ್ಕೆಎಂ ನಾಯಕ ಬಲಬೀರ್ ಸಿಂಗ್ ರಾಜೇವಾಲ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಎಸ್ಕೆಎಂ ಇಡೀ ಘಟನೆಯಿಂದ ತನ್ನನ್ನು ದೂರವಿರಿಸಿತು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಹರಿಯಾಣ ಸರ್ಕಾರದೊಂದಿಗೆ ಸಹಕರಿಸಲು ತಾನು ಸಿದ್ಧ ಎಂದು ಹೇಳಿದೆ. ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಈ ರಕ್ತಸಿಕ್ತ ಕೊಲೆಗೆ ರಾಕೇಶ್ ಟಿಕಾಯತ್ ಮತ್ತು ಯೋಗೇಂದ್ರ ಯಾದವ್ ಅವರನ್ನು ದೂಷಿಸಿದ್ದಾರೆ.
ಏತನ್ಮಧ್ಯೆ, ಸಂಯುಕ್ತ ಕಿಸಾನ್ ಮೋರ್ಚಾ , ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಆಂದೋಲನವನ್ನು ಮುನ್ನಡೆಸುತ್ತಿರುವ 40 ಕ್ಕೂ ಹೆಚ್ಚು ರೈತ ಸಂಘಗಳ ಒಂದು ಸಂಘಟನೆಯಾಗಿದ್ದು ನಿಹಾಂಗ್ಗಳು (ಶಸ್ತ್ರಗಳನ್ನು ಹೊಂದಿರುವ ಸಿಖ್ ಗುಂಪು) 35 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದರು. ರೈತನರ ಒಂದು ಕೈಯನ್ನು ಮಣಿಕಟ್ಟಿನಿಂದ ಕತ್ತರಿಸಲಾಗಿದೆ.
ಕೊಲೆಗೆ ಸಂಬಂಧಿಸಿದಂತೆ ಎಫ್ಐಆರ್ ಅನ್ನು ಅಪರಿಚಿತ ವ್ಯಕ್ತಿಗಳ ವಿರುದ್ಧ ದಾಖಲಿಸಲಾಗಿದೆ ಎಂದು ಹೇಳಿದ ಅವರು, "ಯಾರು ಹೊಣೆಗಾರರು ಎಂಬುದರ ಕುರಿತು ಯಾವುದೇ ಮಾಹಿತಿ ಇಲ್ಲ. ವೈರಲ್ ವಿಡಿಯೊ ತನಿಖೆಯ ವಿಷಯವಾಗಿದೆ, ವದಂತಿಗಳು ದೂರವಾಗುತ್ತದೆ ಎಂದು ಹೇಳಿದರು.












Click it and Unblock the Notifications