IND Vs AFG: ರನ್ ಔಟ್ ಆದ ಬಳಿಕ ರೋಹಿತ್ ಶರ್ಮಾ ಹೇಳಿದ್ದೇನು? ರಹಸ್ಯ ಬಿಚ್ಚಿಟ್ಟ ನಾಯಕ ಶುಭ್ಮನ್ ಗಿಲ್
Shubman Gill: ಧರ್ಮಶಾಲಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಗೆಲುವು ಸಾಧಸಿತು. ಈ ಪಂದ್ಯದ ವೇಳೆ ಗಿಲ್ ಹಾಗೂ ರೋಹಿತ್ ಶರ್ಮಾ ನಡುವೆ ನಡೆದ ಗೊಂದಲ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಬಗ್ಗೆ ನಾಯಕ ಶುಭ್ಮನ್ ಗಿಲ್ ಪ್ರತಿಕ್ರಿಯಿಸಿದ್ದಾರೆ. ಹಾಗಾದ್ರೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಮತ್ತು ಹಿರಿಯ ಆಟಗಾರ ರೋಹಿತ್ ಶರ್ಮಾ ನಡುವೆ ಉಂಟಾದ ತಪ್ಪು ತಿಳುವಳಿಕೆಯಿಂದಾಗಿ ರೋಹಿತ್ ರನ್ ಔಟ್ ಆಗಿದ್ದರು. ಮೈದಾನದಲ್ಲಿ ಈ ಘಟನೆ ನಡೆದಾಗ ಹಿಟ್ಮ್ಯಾನ್ ತೀವ್ರ ನಿರಾಶೆ ಹಾಗೂ ಕೋಪಗೊಂಡಂತೆ ಕಂಡಿದ್ದರು. ಆದರೆ ಪಂದ್ಯ ಮುಗಿದ ಬಳಿಕ ಈ ಬಗ್ಗೆ ಗಿಲ್ ಪ್ರತಿಕ್ರಿಯಿಸಿ ರೋಹಿತ್ ತಮಗೆ ಏನು ಹೇಳಿದರು ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಮೈದಾನದಲ್ಲಿ ಭಾರತದ ನಾಯಕ ಶುಭ್ಮನ್ ಗಿಲ್ ಚೆಂಡಿನ ಕಡೆಗೆ ಓಡಿ ಬರುತ್ತಿದ್ದ ಬೌಲರ್ಗೆ ಬಹುತೇಕ ಡಿಕ್ಕಿ ಹೊಡೆಯುವಂತಾಗಿತ್ತು, ಇದರಿಂದಾಗಿ ಅವರಿಗೆ ಮಾಜಿ ನಾಯಕನ (ರೋಹಿತ್ ಶರ್ಮಾ) ಕರಕೆಗೆ ಸ್ಪಂದಿಸಲು ಸಾಧ್ಯವಾಗಲಿಲ್ಲ; ಹೀಗಾಗಿ ರೋಹಿತ್ ಶರ್ಮಾ ಅವರ ರನ್ ಔಟ್ ನಿಜಕ್ಕೂ ದುರದೃಷ್ಟಕರವಾಗಿತ್ತು ಎಂದು ಗಿಲ್ ಒಪ್ಪಿಕೊಂಡಿದ್ದಾರೆ.
ಮೈದಾನದಲ್ಲಿ ನಡೆದಿದ್ದೇನು?
ಭಾರತ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ ರೋಹಿತ್ ಶರ್ಮಾ ಚೆಂಡನ್ನು ಮಿಡ್-ಆನ್ ಕಡೆಗೆ ಹೊಡೆದು ರನ್ ಗಳಿಸಲು ಓಡಿದರು. ಆದರೆ ಬೌಲರ್ ರನ್ ಓಡುವಾಗ ಅಡ್ಡ ಬಂದಿದ್ದರಿಂದ ನಾನ್-ಸ್ಟ್ರೈಕರ್ ಎಂಡ್ನಲ್ಲಿದ್ದ ಶುಭ್ಮನ್ ಗಿಲ್ ರನ್ ಓಡಲು ನಿರಾಕರಿಸಿ, ಹಲವು ಬಾರಿ ನೋ ರನ್.. ನೋ ರನ್ ಎಂದು ಜೋರಾಗಿ ಕೂಗಿದರು.
ಆದರೆ ರೋಹಿತ್ ಶರ್ಮಾ ಅದನ್ನು ಗಮನಿಸದೆ ಹೆಚ್ಚು ದೂರ ಓಡಿ ಬಂದಿದ್ದರು. ಗಿಲ್ ತಮ್ಮ ಕ್ರೀಸ್ನಿಂದ ಕದಲದ ಕಾರಣ, ರೋಹಿತ್ ತರಾತುರಿಯಲ್ಲಿ ವಾಪಸ್ ಓಡಲು ಪ್ರಯತ್ನಿಸಿದರು. ಆದರೂ ಅಫ್ಘಾನ್ ಫೀಲ್ಡರ್ನ ಉತ್ತಮ ಫೀಲ್ಡಿಂಗ್ನಿಂದಾಗಿ ಕ್ರೀಸ್ ತಲುಪಲಾಗದೆ 16 ರನ್ಗಳಿಗೆ ರನ್ ಔಟ್ ಆದರು. ಘಟನೆ ಬಳಿಕ ಹಿಟ್ಮ್ಯಾನ್ ತಲೆ ಅಲ್ಲಾಡಿಸುತ್ತಾ ಅಸಮಾಧಾನ ವ್ಯಕ್ತಪಡಿಸುತ್ತಲೇ ಪೆವಿಲಿಯನ್ ಕಡೆ ನಡೆದುಕೊಂಡು ಹೋಗುವುದು ಕಂಡುಬಂದಿತು.
ಪಂದ್ಯದ ಬಳಿಕ ಗಿಲ್ ಸ್ಪಷ್ಟನೆ
ಪಂದ್ಯ ಮುಗಿದ ನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ ಶುಭ್ಮನ್ ಗಿಲ್ ಅವರಿಗೆ ಈ ವಿಚಿತ್ರ ರನ್ ಔಟ್ ಬಗ್ಗೆ ಪ್ರಶ್ನೆ ಕೇಳಲಾಯಿತು. ಅದಕ್ಕೆ ನಗುಮುಖದಿಂದಲೇ ಉತ್ತರಿಸಿದ ಅವರು, 'ರೋಹಿತ್ ಭಾಯ್ ಡ್ರೆಸ್ಸಿಂಗ್ ರೂಮ್ಗೆ ಹೋದ ಬಳಿಕ ಟಿವಿಯಲ್ಲಿ ಅದರ ರೀಪ್ಲೇ ನೋಡಿದ್ದಾರೆ ಎಂದು ನನಗೆ ಗೊತ್ತು. ನಂತರ ಅವರು ನನ್ನ ಬಳಿ ಬಂದು ಏನೂ ತೊಂದರೆಯಿಲ್ಲ ಎಂದು ಹೇಳಿದರು. ಕಳೆದ ಬಾರಿ ನಾವು ಅಫ್ಘಾನಿಸ್ತಾನ ವಿರುದ್ಧ ಟಿ20 ಪಂದ್ಯ ಆಡಿದಾಗಲೂ ಅವರು ಇದೇ ರೀತಿ ರನ್ ಔಟ್ ಆಗಿದ್ದರು,' ಎಂದು ಹಳೆಯ ನೆನಪನ್ನು ಹಂಚಿಕೊಂಡು ನಕ್ಕರು.
ಭಾರತಕ್ಕೆ ಭರ್ಜರಿ ಜಯ
ಈ ರನ್ ಔಟ್ ಆಘಾತದ ಹೊರತಾಗಿಯೂ ನಾಯಕ ಶುಭ್ಮನ್ ಗಿಲ್ ತಮ್ಮ ಗಮನವನ್ನು ಬೇರೆಡೆಗೆ ಸೆಳೆಯದೆ ಜವಾಬ್ದಾರಿಯುತ ಆಟವಾಡಿದರು. ಕೇವಲ 66 ಎಸೆತಗಳಲ್ಲಿ 11 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ಗಳ ನೆರವಿನಿಂದ ಅಜೇಯ 84 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ತಲುಪಿಸಿದರು.
ಮಳೆಯಿಂದಾಗಿ ತಲಾ 25 ಓವರ್ಗಳಿಗೆ ಸೀಮಿತವಾಗಿದ್ದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ನೀಡಿದ್ದ 195 ರನ್ಗಳ ಗುರಿಯನ್ನು ಭಾರತ ತಂಡ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಗಿಲ್ ಅವರಿಗೆ ಕನ್ನಡಿಗ ಕೆ.ಎಲ್. ರಾಹುಲ್ (ಅಜೇಯ 39 ರನ್, 19 ಎಸೆತ) ಉತ್ತಮ ಸಾಥ್ ನೀಡಿದರು. ಈ ಮೂಲಕ ಭಾರತ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.












Click it and Unblock the Notifications