ಎನ್ ಡಿಎ ತೊರೆದ ಬಿಹಾರದ ಮಾಜಿ ಮುಖ್ಯಮಂತ್ರಿ
ಪಾಟ್ನಾ, ಫೆಬ್ರವರಿ 28: ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ತಾನಿ ಅವಾಮ್ ಮೋರ್ಚಾದ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರು ಎನ್ಡಿಎಗೆ ಗುಡ್ ಬೈ ಹೇಳಿದ್ದಾರೆ. ನರೇಂದ್ರ ಮೋದಿ ನೇತೃತ್ವದ ನ್ಯಾಷನಲ್ ಡೆಮೊಕ್ರಾಟಿಕ್ ಅಲೈಯನ್ಸ್(ಎನ್ಡಿಎ) ಮೈತ್ರಿಯನ್ನು ಕಡಿದುಕೊಂಡಿದ್ದಾರೆ.
ಜಿತಿನ್ ರಾಮ್ ಅವರು ಲಾಲೂ ಪ್ರಸಾದ್ ಯಾದವ್ ಅವರ ಆರ್ ಜೆ ಡಿ ನೇತೃತ್ವದ ಮಹಾ ಮೈತ್ರಿಕೂಟ ಸೇರಿಕೊಂಡಿದ್ದಾರೆ. ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಅವರು ಜೈಲು ಸೇರಿದ ಬಳಿಕ, ಲಾಲೂ ಅವರ ಪುತ್ರ ತೇಜಸ್ವಿ ಯಾದವ್ ಅವರು ಈ ಮಹಾಘಟಬಂಧನ್ ನ ನೇತೃತ್ವ ವಹಿಸಿಕೊಂಡಿದ್ದಾರೆ.
ಎನ್ಡಿಎ ತೊರೆಯಲು ಏನು ಕಾರಣ?: ಮುಂಬರುವ ರಾಜ್ಯಸಭೆ ಚುನಾವಣೆ ದೃಷ್ಟಿಯಿಂದ ಜಿತಿನ್ ರಾಮ್ ಅವರು ಈ ಹೆಜ್ಜೆ ಇಟ್ಟಿದ್ದಾರೆ. ಮಾರ್ಚ್ 23ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆ ಹಿನ್ನಲೆಯಲ್ಲಿ ಹಿಂದೂಸ್ತಾನ್ ಆವಾಮ್ ಮೋರ್ಚಾ(ಎಚ್ಎಡಬ್ಲ್ಯೂ) ಕ್ಕೆ ಹೆಚ್ಚಿನ ಮಹತ್ವ ಸಿಗುವ ನಿರೀಕ್ಷೆ ಹೊಂದಿದ್ದರು. ಆದರೆ, ಬಿಜೆಪಿಯಿಂದ ತಮ್ಮ ಪಕ್ಷಕ್ಕೆ ಸರಿಯಾದ ಮನ್ನಣೆ ಸಿಗದ ಕಾರಣ ಎನ್ಡಿಎ ಮೈತ್ರಿಕೂಟ ತೊರೆದಿದ್ದಾರೆ ಎಂದು ಪಕ್ಷದ ವಕ್ತಾರ ದಾನೀಶ್ ರಿಜ್ವಾನ್ ಹೇಳಿದ್ದಾರೆ.
ಇದು ಅಧಿಕೃತ, ಎನ್ ಡಿಎ ಮೈತ್ರಿಕೊಟದೊಳಗೆ ಜೆಡಿಯು ಸೇರ್ಪಡೆ
ಕನಿಷ್ಟ ಒಂದು ಸೀಟಾದರೂ ಸಿಗಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಬಿಜೆಪಿಯಿಂದ ನಿರಾಶೆಯಾಗಿದೆ. 2019ರ ಲೋಕಸಭೆ ಚುನಾವಣೆ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ನೀಡುವುದಿಲ್ಲ ಎಂದು ಪಕ್ಷದ ವಕ್ತಾರರು ಹೇಳಿದ್ದಾರೆ.
ಮಾರ್ಚ್ 11ರಂದು ಅರರಿಯಾ ಲೋಕಸಭಾ ಕ್ಷೇತ್ರ, ಜೆಹನಾಬಾದ್ ಹಾಗೂ ಭಾಬುವಾ ಅಸೆಂಬ್ಲಿ ಕ್ಷೇತ್ರಗಳಿಗೆ ಉಪ ಚುನಾವಣೆ ನಿಗದಿಯಾಗಿದೆ.
ಜೆಡಿಯು ತೊರೆದು ಎಚ್ಎಎಂಎಸ್ ಪಕ್ಷ ಕಟ್ಟಿದ ಮಾಂಝಿ ಅವರು 2015ರಲ್ಲಿ ಸಿಎಂ ಸ್ಥಾನ ತೊರೆಯುವಂತೆ ಜೆಡಿಯುನ ನಿತೀಶ್ ಕುಮಾರ್ ಅವರಿಂದ ಬಂದಿದ್ದ ಒತ್ತಡವನ್ನು ಸಹಿಸಿಕೊಂಡಿದ್ದರು. ನಂತರ ಎನ್ಡಿಎ ಸೇರಿ ಅಸೆಂಬ್ಲಿ ಚುನಾವಣೆ ಎದುರಿಸಿ ಸೋಲು ಕಂಡಿದ್ದರು. ಜೆಡಿಯು, ಆರ್ ಜೆಡಿ ಹಾಗೂ ಕಾಂಗ್ರೆಸ್ಸಿನ ಮಹಾ ಮೈತ್ರಿಕೂಟಕ್ಕೆ ಜಯ ಲಭಿಸಿತ್ತು.