ಕಾಂಗ್ರೆಸ್ ಈಗ ಅಸ್ತಿತ್ವದ ಪ್ರಶ್ನೆ ಎದುರಿಸುತ್ತಿದೆ: ಜೈರಾಂ ರಮೇಶ್
ಕೊಚ್ಚಿ, ಆಗಸ್ಟ್ 7: ಕಾಂಗ್ರೆಸ್ ಪಕ್ಷ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಭಾರತ ಬದಲಾಗಿದೆ. ಆದರೆ ಕಾಂಗ್ರೆಸ್ ನ ಅದೇ ಹಳೇ ಘೋಷ ವಾಕ್ಯ, ಸೂತ್ರಗಳು ಕೆಲಸ ಮಾಡಲ್ಲ. ದೇಶವೇ ಬದಲಾಗಿದೆ, ಆದರೆ ಕಾಂಗ್ರೆಸ್ ಬದಲಾಗಿಲ್ಲ ಎಂದು ಕೇಂದ್ರದ ಮಾಜಿ ಸಚಿವ ಜೈರಾಂ ರಮೇಶ್ ಹೇಳಿದ್ದಾರೆ.
ರಾಹುಲ್ ಗಾಂಧಿ 2015ರಲ್ಲಿ ಕಾಂಗ್ರೆಸ್ ನ ಜವಾಬ್ದಾರಿ ವಹಿಸುತ್ತಾರೆ ಅಂದುಕೊಂಡಿದ್ದೆ. ಆದರೆ ಹಾಗೆ ಆಗಲಿಲ್ಲ. 2016ರಲ್ಲಿ ಅದಾಗುತ್ತದೆ ಅಂತ ಹೇಳಿದೆ. ಆಗಲೂ ಆಗಲಿಲ್ಲ. 2017ರ ಕೊನೆಯೊಳಗೆ ಆದರೂ ಅವರು ವಹಿಸಬಹುದು. ಮುಂದಿನ ಲೋಕಸಭಾ ಚುನಾವಣೆಗೆ ತಯಾರಿ ನಡೆಸಬಹುದು ಎಂದುಕೊಂಡಿದ್ದೇನೆ ಎಂದರು.

ರಾಹುಲ್ ಅಧ್ಯಕ್ಷರಾಗುವ ಯಾವ ಸೂಚನೆಗಳೂ ಇಲ್ಲ. ಇದು ನನ್ನ ನಿರೀಕ್ಷೆ ಅಷ್ಟೆ. ಮುಂದಿನ ವರ್ಷ ಹಾಗೂ ಅದರ ಮುಂದಿನ ವರ್ಷ ಪ್ರಮುಖ ರಾಜ್ಯಗಳ ಹಾಗೂ ಆನಂತರ ಲೋಕಸಭೆ ಚುನಾವಣೆ ಇದೆ. ಇಂಥ ಸನ್ನಿವೇಶದಲ್ಲಿ ಅನಿಶ್ಚಿತತೆ ಒಳ್ಳೆಯದಲ್ಲ. ರಾಹುಲ್ ಅಧ್ಯಕ್ಷರಾಗುವ ಮನಸ್ಸು ಮಾಡಬೇಕು ಎಂದಿದ್ದಾರೆ.
ಮೋದಿಯನ್ನು ಎದುರಿಸಲು ಕಾಂಗ್ರೆಸ್ ನಲ್ಲಿ ಯಾವ ನಾಯಕರಿದ್ದಾರೆ ಎಂಬ ಪ್ರಶ್ನೆಗೆ, ಇದು ಸಾಮೂಹಿಕ ನಾಯಕತ್ವದ ಪ್ರಶ್ನೆ. ಯಾವುದೋ ಒಬ್ಬ ವ್ಯಕ್ತಿಯ ಮಂತ್ರದಂಡದಿಂದ ಮೋದಿಯನ್ನು ಸೋಲಿಸ್ತೀವಿ ಅಂತಲ್ಲ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಗೆ ಅದರದೇ ಗುಡ್ ವಿಲ್ ಇದೆ. ಬೆಂಬಲ ಇದೆ. ಆದರೆ ಜನರು ಹೊಸ ಕಾಂಗ್ರೆಸ್ ನ ನೋಡಲು ಬಯಸುತ್ತಿದ್ದಾರೆ. ನಮ್ಮ ದೊಡ್ಡ ಸವಾಲನ್ನು ಗುರುತಿಸಬೇಕಾಗಿದೆ. ಮುಂದಿನ ವರ್ಷ ಕರ್ನಾಟಕದಲ್ಲಿ ಚುನಾವಣೆ ಇದ್ದು, ಕಾಂಗ್ರೆಸ್ ನ ಮರುಹುಟ್ಟು ಆಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
1996-2004, 1977ರಲ್ಲಿ ಕಾಂಗ್ರೆಸ್ ಚುನಾವಣೆ ಬಿಕ್ಕಟ್ಟುಗಳನ್ನು ಎದುರಿಸಿತು. ಆದರೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಮೋದಿ-ಶಾ ಜೋಡಿ ಬೇರೆಯ ರೀತಿ ಆಲೋಚನೆ ಮಾಡುತ್ತಾರೆ, ವರ್ತನೆ ಬೇರೆ ರೀತಿ ಇರುತ್ತದೆ. ನಾವು ಸಹ ಆಲೋಚನೆಯಲ್ಲಿ ಬದಲಾವಣೆಗಳನ್ನು ತಂದುಕೊಳ್ಳಲಿಲ್ಲ್ ಅಂದರೆ ಅಪ್ರಸ್ತುತರಾಗುತ್ತೀವಿ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications