ತಮಿಳುನಾಡು, ಕೇರಳ ಮೊದಲಾದೆಡೆ ಬಿಜೆಪಿ ಅಧಿಕಾರ: ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ
ಹೈದರಾಬಾದ್, ಜುಲೈ 3: ದೇಶದ ಪ್ರತಿಯೊಂದು ರಾಜ್ಯದಲ್ಲೂ ಅಧಿಕಾರ ಹಿಡಿಯಲು ಪಣತೊಟ್ಟಿರುವ ಬಿಜೆಪಿಗೆ ಕೆಲ ರಾಜ್ಯಗಳು ಕೈಗೆಟುಕದೇ ದೂರವೇ ಇವೆ. ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ, ಪಂಜಾಬ್ ಮುಂತಾದವುಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲು ಕನಸು ಮನಸಿನಲ್ಲೂ ಎಣಿದಸಲು ಸಾಧ್ಯವಿಲ್ಲ ಎನ್ನುವಂಥ ಸ್ಥಿತಿ ಇತ್ತೀಚಿನವರೆಗೂ ಇತ್ತು. ಈಗ ಬದಲಾಗಿದೆ. ಬಿಜೆಪಿಗೆ ಅಭೇದ್ಯವಾದ ಕೋಟೆಗಳಲ್ಲಿ ಕಮಲ ಚಿಗುರತೊಡಗಿದೆ.
ಇಲ್ಲಿ ಭಾನುವಾರ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದೆ. ಗೆಲ್ಲಲು ಕಷ್ಟಸಾಧ್ಯವೆನಿಸಿದ ರಾಜ್ಯಗಳನ್ನು ಗುರಿಯಾಗಿಸಿ ಕೆಲಸ ಮಾಡಲು ಬಿಜೆಪಿ ಪಣ ತೊಟ್ಟಿದೆ.
ಮೋದಿ, ಶಾ, ಯೋಗಿ ತಲೆ ಕಡಿಯುತ್ತೇನೆ ಎಂದು ಪೋಸ್ಟ್ ಹಾಕಿದವ ಬಂಧನ
ಹಾಗೆಯೇ, ಮುಂದಿನ 30-40 ವರ್ಷದಲ್ಲಿ ಭಾರತದಲ್ಲಿ ಬಿಜೆಪಿಯ ಯುಗ ಇರಲಿದೆ. ಭಾರತ ವಿಶ್ವ ಗುರು ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ರಾಜಕೀಯ ನಿರ್ಣಯ ಪ್ರಸ್ತಾವಿಸಿರುವುದು ತಿಳಿದುಬಂದಿದೆ.
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಮುಖ್ಯಾಂಶಗಳ ವಿವರ ನೀಡಿದರು.
ಗೋಧ್ರಾ ತೀರ್ಪು; 19 ವರ್ಷ ನೋವು ಅನುಭವಿಸಿದ್ದಾರೆ ಎಂದ ಅಮಿತ್ ಶಾ
ತಮಿಳುನಾಡು, ಕೇರಳದಲ್ಲಿ ಬಿಜೆಪಿ ಅಧಿಕಾರ
ಬಿಜೆಪಿಗೆ ಅಭೇದ್ಯದ ಕೋಟೆಗಳೆನಿಸಿದ ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲೇ ಸರಕಾರ ರಚಿಸುತ್ತೇವೆ ಎಂದೂ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ಹೊರಡಿಸಲಾಗಿದೆ.
ಒಡಿಶಾದಲ್ಲಿ ಹಿಂದೆ ಬಿಜೆಡಿ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿತ್ತು. ಆದರೆ, ಹಲವು ವರ್ಷಗಳಿಂದ ನವೀನ್ ಪಟ್ನಾಯಕ್ ನೇತೃತ್ವದ ಬಿಜೆಡಿ ಸತತವಾಗಿ ಅಧಿಕಾರಕ್ಕೆ ಬರುತ್ತಿದ್ದು, ಬಿಜೆಪಿ ವಿಪಕ್ಷದಲ್ಲಿ ಕೂರುವಂತಾಗಿದೆ. ಇನ್ನು, ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಳೆದ ಕೆಲ ವರ್ಷಗಳಲ್ಲಿ ಅಚ್ಚರಿ ರೀತಿಯಲ್ಲಿ ಬೆಳೆದಿದೆ. ಕೇರಳದಲ್ಲೂ ನಿಧಾನವಾಗಿ ಕಮಲ ಅರಳುತ್ತಿದೆ. ತಮಿಳುನಾಡಿನಲ್ಲಿ ಪೂರಕ ವಾತಾವರಣ ನಿರ್ಮಾಣದತ್ತ ಪಕ್ಷ ಗಮನ ಕೊಟ್ಟಿದೆ. ತೆಲಂಗಾಣದಲ್ಲೂ ಇತ್ತೀಚೆಗೆ ಬಿಜೆಪಿಯ ಶಕ್ತಿ ಹೆಚ್ಚಿರುವುದು ಕೆಲ ಸ್ಥಳೀಯ ಚುನಾವಣೆಗಳ ಫಲಿತಾಂಶ ಸುಳಿವು ನೀಡುತ್ತದೆ.
ಬಿಜೆಪಿ ಸಭೆಯಲ್ಲಿ ಅಮಿತ್ ಶಾ ಇದೇ ವಿಚಾರ ಪ್ರಸ್ತಾಪಿಸಿದರು. ಬಿಜೆಪಿಯ ಅಭಿವೃದ್ಧಿ ಮತ್ತು ಕಾರ್ಯಸಾಧನೆಯ ರಾಜಕಾರಣವನ್ನು ಜನರು ಒಪ್ಪಿಕೊಂಡಿದ್ದಾರೆ ಎಂದ ಅವರು, ಕುಟುಂಬ ರಾಜಕಾರಣ, ಜಾತಿ ರಾಜಕಾರಣ ಮತ್ತು ಆಮಿಷ ರಾಜಕಾರಣವನ್ನು ಅಂತ್ಯಗೊಳಿಸಬೇಕೆಂದು ಕರೆ ನೀಡಿದರು. ತೆಲಂಗಾಣ ಮತ್ತು ಪಶ್ಚಿಮ ಬಂಗಾದಂಥ ರಾಜ್ಯಗಳಲ್ಲಿ ಕುಟುಂಬ ರಾಜಕಾರಣಕ್ಕೆ ಬಿಜೆಪಿ ತೆರೆ ಎಳೆಯುತ್ತದೆ ಎಂದೂ ಅವರು ಸಭೆಯಲ್ಲಿ ಹೇಳಿದರೆನ್ನಲಾಗಿದೆ.
ಹಿಂದೂಗಳ ಹತ್ಯೆ ಬಗ್ಗೆ
ಮಹಾರಾಷ್ಟ್ರದ ಅಮರಾವತಿ ಮತ್ತು ರಾಜಸ್ಥಾನದ ಉದಯಪುರ್ನಲ್ಲಿ ಇಬ್ಬರು ಹಿಂದೂಗಳ ಹತ್ಯೆಯಾದ ಘಟನೆ ದೊಡ್ಡ ಸದ್ದು ಮಾಡುತ್ತಿದೆ. ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆಗಳ ಸಂಬಂಧ ಮುಸ್ಲಿಮ್ ಸಮುದಾಯದ ಕೆಲವರು ಹತ್ಯೆ ನಡೆಸಿದ್ದಾರೆ. ಅಮ್ರಾವತಿಯಲ್ಲಿ ಜೂನ್ ೨೧ರಂದು ಮೆಡಿಕಲ್ ಸ್ಟೋರ್ ಮಾಲೀಕನನ್ನು ಕೊಲ್ಲಲಾಗಿದೆ. ಜೂನ್ ೨೮ರಂದು ಉದಯಪುರ್ನಲ್ಲಿ ಟೈಲರ್ವೊಬ್ಬರನ್ನು ಕತ್ತು ಸೀಳಿ ಹತ್ಯೆ ಮಾಡಲಾಗಿದೆ.
ಈ ಎರಡು ಘಟನೆಗಳ ಬಗ್ಗೆ ಗೃಹ ಸಚಿವರು ಮಾತನಾಡಿ, ತುಷ್ಟೀಕರಣದ ರಾಜಕಾರಣ ಕೊನೆಗೊಂಡರೆ ಕೋಮುವಾದವೂ ಅಂತ್ಯವಾಗುತ್ತದೆ ಎಂದು ಹೇಳಿದರು ಹಿಮಂತ ಬಿಸ್ವ ಶರ್ಮಾ ಮಾಹಿತಿ ನೀಡಿದ್ದಾರೆ.
ಈಶಾನ್ಯ ಮೂಲೆ ಸಮಸ್ಯೆ ನಿವಾರಣ
ಈಶಾನ್ಯ ರಾಜ್ಯಗಳಲ್ಲಿ ಮನೆ ಮಾಡಿರುವ ಎಲ್ಲಾ ಸಮಸ್ಯೆಗಳಿಗೂ ಇನ್ನೆರಡು ವರ್ಷದಲ್ಲಿ ಪರಿಹಾರ ಸಿಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಗೃಹ ಸಚಿವರು ಹೇಳಿದರು.
2024ರಲ್ಲಿ ಈಶಾನ್ಯ ರಾಜ್ಯಗಳ ಎಲ್ಲಾ ಸಮಸ್ಯೆಗಳೂ ಬಗೆಹರಿಯುತ್ತವೆ. ಮುಂದಿನ ದಿನಗಳಲ್ಲಿ ಯಾವ ಸಮಸ್ಯೆಯೂ ಉದ್ಭವಿಸುವುದಿಲ್ಲ ಎಂದು ಅವರು ತಿಳಿಸಿದರೆನ್ನಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಈಶಾನ್ಯ ರಾಜ್ಯಗಳಲ್ಲಿ ಕೆಲ ಮಹತ್ವದ ಬೆಳವಣಿಗೆಗಳಾಗಿವೆ. ಅಸ್ಸಾಮ್ ಮತ್ತು ಮೇಘಾಲಯ ಸರಕಾರಗಳು ತಮ್ಮ ಗಡಿ ವ್ಯಾಜ್ಯಗಳನ್ನು ಬಗೆಹರಿಸಿಕೊಂಡು ಐತಿಹಾಸಿಕ ಒಪ್ಪಂದಕ್ಕೆ ಸಹಿಹಾಕಿವೆ. ಹಾಗೆಯೇ, ನಾಗಾಲೆಂಡ್, ಮಣಿಪುರ ಮತ್ತು ಅಸ್ಸಾಮ್ನ ಹಲವೆಡೆ ಶಸ್ತ್ರಪಡೆ ವಿಶೇಷಾಧಿಕಾರ ಕಾಯ್ದೆ (ಎಎಫ್ಪಿಎಸ್ಎ) ಹಿಂಪಡೆಯಲಾಗಿದೆ.
ಸಿಎಎ ಜಾರಿಯಾಗದ ಬಗ್ಗೆ
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಮಾತನಾಡುತ್ತಾ, ಸಿಎಎ ಜಾರಿಯಾಗದೇ ಇರಲು ವಿಪಕ್ಷಗಳು ಕಾರಣ ಎಂದು ಬೊಟ್ಟು ಮಾಡಿದರೆನ್ನಲಾಗಿದೆ.
"ಸಿಎಎ ಒಳಗೊಂಡಂತೆ ಮೋದಿ ಸರಕಾರ ಜಾರಿಗೆ ತರಬೇಕೆಂದಿರುವ ಹಲವು ಸುಧಾರಣಾ ಕ್ರಮಗಳಿಗೆ ವಿಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಾ ಬಂದಿರುವುದು ನಿಮಗೆ ಗೊತ್ತು. ಸಿಎಎ ಜಾರಿಯಾಗುವುದು ವಿಳಂಬವಾಗಿದೆ. ಆದರೆ, ಈ ಕಾಯ್ದೆ ಜಾರಿಗೆ ಸರಕಾರ ಬದ್ಧವಾಗಿದೆ. ಶೀಘ್ರದಲ್ಲೇ ನಿಯಮ ರೂಪಿಸಲಾಗುವುದು" ಎಂದು ಹಿಮಂತ ಬಿಸ್ವ ಶರ್ಮಾ ಅವರು ಅಮಿತ್ ಷಾ ನೀಡಿದ ಹೇಳಿಕೆಯನ್ನು ವಿವರಿಸಿದ್ದಾರೆ.
(ಒನ್ಇಂಡಿಯಾ ಸುದ್ದಿ)
Recommended Video