ಪ್ರಧಾನಿ ಮೋದಿಗೆ ದೇವರನ್ನೂ ಯಾಮಾರಿಸುವ ಶಕ್ತಿಯಿದೆ!
ಪಾಟ್ನಾ, ಆಗಸ್ಟ್ 21: ಬಿಹಾರ ಚುನಾವಣೆಗೆ ಇನ್ನೂ ಆಯೋಗ ದಿನಾಂಕ ಘೋಷಿಸ ಬೇಕಷ್ಟೇ, ಆದರೆ ಪ್ರಮುಖ ರಾಜಕೀಯ ಮುಖಂಡರ ಆರೋಪ, ಪ್ರತ್ಯಾರೋಪ ದಿನದಿಂದ ದಿನಕ್ಕೆ ಪ್ರಖರವಾಗುತ್ತಿದೆ.
ಮೋದಿ ಶಕ್ತಿಯನ್ನು ಬಿಹಾರದಲ್ಲಿ ಶತಾಯುಗತಾಯು ಮಟ್ಟಹಾಕಲೇ ಬೇಕೆಂದು ಮೂರು ಪಕ್ಷವನ್ನು ಚುನಾವಣೆಗೆ ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಆರ್ಜೆಡಿ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್, ಮೋದಿಯವರನ್ನು ಸರಿಯಾಗಿ ಚೇಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬರೀ ಮಾತಿನ ಮೋಡಿಗಾರ, ದೇವರನ್ನೇ ಯಾಮಾರಿಸುವ ಅಸಮಾನ್ಯ ಶಕ್ತಿಯನ್ನು ಅವರು ಹೊಂದಿದ್ದಾರೆಂದು ಲಾಲೂ ಲೇವಡಿ ಮಾಡಿದ್ದಾರೆ. (ಬಿಹಾರ ಹಣೆಬರಹ ಬದಲಿಸಲು ಮೋದಿ ಪ್ಯಾಕೇಜ್)
ಗಲ್ಫ್ ಪ್ರವಾಸದಿಂದ ಸ್ವದೇಶಕ್ಕೆ ಹಿಂದಿರುಗಿದ ದಿನವೇ ಬಿಹಾರದ ಅರ್ರಾ ನಗರದಲ್ಲಿ ಭಾರೀ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಧಾನಿ ಮೋದಿ, ಬಿಹಾರಕ್ಕೆ 1.25 ಲಕ್ಷ ರೂಪಾಯಿಯ ವಿಶೇಷ ಪ್ಯಾಕೇಜ್ ನೀಡುವುದಾಗಿ ಘೋಷಿಸಿದ್ದರು.
ಈ ಬಗ್ಗೆ, ಮಿಮಿಕ್ರಿ ಶೈಲಿಯಲ್ಲಿ ಮೋದಿ ವಿರುದ್ದ ತೀವ್ರವಾಗಿ ಕಿಡಿಕಾರಿರುವ ಲಾಲೂ, ಜನರನ್ನು ಮೂರ್ಖರನ್ನಾಗಿ ಮಾಡುವ ಕಲೆಯನ್ನು ಪ್ರಧಾನಿ ಮೋದಿ ಕರಗತ ಮಾಡಿಕೊಂಡಿದ್ದಾರೆ.
ಬಿಹಾರದ ಜನತೆ ಇವರ ಮಾತನ್ನು ಕೇಳುವಷ್ಟು ದಡ್ಡರಲ್ಲ, ಇವರೂ ಒಬ್ಬರು ಪ್ರಧಾನಿಯಾ ಎಂದು ಲಾಲೂ ಕುಚೋದ್ಯವಾಡಿದ್ದಾರೆ. ಮುಂದೆ ಓದಿ..
ಕೋಮುವಾದಿಗಳನ್ನು ಬಿಹಾರಕ್ಕೆ ಸೇರಿಸುವುದಿಲ್ಲ
ನನ್ನ ಜೀವವಿರುವವರೆಗೆ ಕೋಮುವಾದಿಗಳನ್ನು ಬಿಹಾರದಲ್ಲಿ ಅಧಿಕಾರ ನಡೆಸಲು ಬಿಡುವುದಿಲ್ಲ. ಬಿಹಾರದಲ್ಲಿ ಬಿಜೆಪಿಯನ್ನು ತಡೆಯಲು ನನ್ನ ರಾಜಕೀಯ ಜೀವನವನ್ನೇ ಮುಡಿಪಾಗಿಡುತ್ತೇನೆಂದು ಲಾಲೂ ಆರ್ಭಟಿಸಿದ್ದಾರೆ.
ಕಂಸ ಮತ್ತು ಕೃಷ್ಣ
ಕಳೆದ ಹದಿನೈದು ತಿಂಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ನೀಡಿದ ಒಂದು ಭರವಸೆಯನ್ನೂ ಮೋದಿ ಸರಕಾರಕ್ಕೆ ಪೂರೈಸಲು ಸಾಧ್ಯವಾಗಲಿಲ್ಲ. ಜೈಲಿನಲ್ಲಿ ಹುಟ್ಟಿ ದುಷ್ಟ ಮಾವ ಕಂಸನನ್ನು ಕೃಷ್ಣ ಕೊಂದಂತೆ ಧರ್ಮದ ಹೆಸರಲ್ಲಿ ಆಟವಾಡುವವರನ್ನು ನಾನು ನಾಶ ಮಾಡಿಯೇ ಸಿದ್ದ ಎಂದು ಲಾಲೂ ಎಚ್ಚರಿಕೆ ನೀಡಿದ್ದಾರೆ.
ಕೆಂಡಕಾರಿದ ನಿತೀಶ್
ಮೋದಿ ನೀಡಿರುವುದು ಸ್ಪೆಷಲ್ ಪ್ಯಾಕೇಜ್ ಅಲ್ಲ ಅದು ಇಲೆಕ್ಷನ್ ಗಿಮಿಕ್. ಲೋಕಸಭಾ ಚುನಾವಣೆಯ ವೇಳೆ ಪ್ರತೀ ಭಾರತೀಯರ ಬ್ಯಾಂಕ್ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿ ಜಮಾ ಮಾಡಿಸುತ್ತೇನೆಂದಿದ್ದರು. ಯಾರಿಗಾದರೂ ಒಂದು ರೂಪಾಯಿ ಆದರೂ ಬಂತಾ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಲೇವಡಿ ಮಾಡಿದ್ದಾರೆ.
ಬಿಜೆಪಿಯ ಚಾಣಾಕ್ಷ ತಂತ್ರ
ರಾಜಕೀಯದ ಚದುರಾಂಗದಾಟದಲ್ಲಿ ಮೋದಿ ಬಿಹಾರಕ್ಕೆ ಸ್ಪೆಷಲ್ ಪ್ಯಾಕೇಜ್ ಘೋಷಿಸಿದ್ದು ಹೊಸ ರಣತಂತ್ರ ಎನ್ನಲಾಗುತ್ತಿದೆ. ಪ್ರಧಾನಿ ಬಿಹಾರದ ಸಾರ್ವಜನಿಕ ಸಭೆಯಲ್ಲಿ ನೀಡಿದ ಈ ವಾಗ್ದಾನ ಬಿಜೆಪಿಗೆ ಹೊಸ ಶಕ್ತಿ ನೀಡಲಿದೆ ಎನ್ನುವುದು ರಾಜಕೀಯ ನಾಯಕರ ಲೆಕ್ಕಾಚಾರ. (ಚಿತ್ರ: ಪಿಟಿಐ)
ಕೇಜ್ರಿ, ನಿತೀಶ್ ಭಾಯಿ..ಭಾಯಿ.
ಆಮ್ ಆದ್ಮಿ ಪಕ್ಷದ ಬೆಂಬಲ ಜೆಡಿಯು ನೇತೃತ್ವದ ನಿತೀಶ್ ಕುಮಾರ್ ಒಕ್ಕೂಟಕ್ಕೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಿತೀಶ್ ಕುಮಾರ್ ಜೊತೆಗಿನ ಮಾತುಕತೆಯ ನಂತರ ಕೇಜ್ರಿವಾಲ್ ಈ ನಿರ್ಧಾರಕ್ಕೆ ಬಂದಿದ್ದಾರೆ. ಆಪ್ ಕಾರ್ಯಕರ್ತರು ಚುನಾವಣೆಯ ವೇಳೆ ನಿತೀಶ್ ಕುಮಾರ್ ಬೆಂಬಲಕ್ಕೆ ನಿಲ್ಲಲಿದ್ದಾರೆಂದು ಕೇಜ್ರಿವಾಲ್ ಹೇಳಿಕೆ ನೀಡಿದ್ದಾರೆ. (ಚಿತ್ರ: ಪಿಟಿಐ)