ತಮಿಳುನಾಡಿನ ನೀಟ್ ವಿರೋಧಿ ಮಸೂದೆಗೆ ರಾಷ್ಟ್ರಪತಿ ಅಂಗೀಕಾರ ಸಿಗದು: ಅಣ್ಣಾಮಲೈ
ಚೆನ್ನೈ, ಮೇ 5: ಹಲವು ಹಗ್ಗಜಗ್ಗಾಟಗಳ ನಂತರ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರು ನೀಟ್ ವಿರೋಧಿ ಮಸೂದೆಯನ್ನು (Anti- NEET Bill) ರಾಷ್ಟ್ರಪತಿಗಳ ಅನುಮೋದನೆಗಾಗಿ ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ನಿನ್ನೆಯೇ ಈ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಿದ್ದರು. ಇದೀಗ ಕರ್ನಾಟಕದ ಮಾಜಿ ಪೊಲೀಸ್ ಅಧಿಕಾರಿ ಮತ್ತು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರೂ ನಿಟ್ ವಿರೋಧಿ ಮಸೂದೆಯನ್ನ ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿರುವುದು ಹೌದು ಎಂದು ದೃಢಪಡಿಸಿದ್ದಾರೆ. ಆದರೆ, ಈ ಮಸೂದೆಗೆ ರಾಷ್ಟ್ರಪತಿಗಳ ಅಂಗೀಕಾರ ಸಿಗದು ಎಂದೂ ಅಭಿಪ್ರಾಯಪಟ್ಟಿದ್ದಾರೆ.
"ಸಂವಿಧಾನದ ನಿಯಮಗಳನುಸಾರ ರಾಜ್ಯಪಾಲರು ನೀಟ್ ವಿರೋಧಿ ಮಸೂದೆಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿದ್ದಾರೆ. ಆದರೆ, ರಾಷ್ಟ್ರಪತಿಗಳು ಈ ಮಸೂದೆಯನ್ನ ತಿರಸ್ಕರಿಸಲಿದ್ದಾರೆ" ಎಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಕೆ ಅಣ್ಣಾಮಲೈ ಹೇಳಿದ್ದಾರೆ.

ನೀಟ್ಗೆ ಯಾಕೆ ವಿರೋಧ?
ವೈದ್ಯಕೀಯ ಶಿಕ್ಷಣ ಕೋರ್ಸ್ಗಳ ಪ್ರವೇಶಕ್ಕೆ ನಡೆಯುವ ಪರೀಕ್ಷೆಯೇ ನೀಟ್ (NEET- National Eligibility cum Entrance Test). ದೇಶಾದ್ಯಂತ ಈ ಕೋರ್ಸ್ಗಳಿಗೆ ಇದು ಇರುವ ಏಕೈಕ ಅರ್ಹತಾ ಪರೀಕ್ಷೆಯಾಗಿದೆ. ನೀಟ್ ಪರೀಕ್ಷೆಯನ್ನು ಎಲ್ಲಾ ರಾಜ್ಯಗಳಿಗೂ ಕಡ್ಡಾಯ ಮಾಡಲಾಗಿದೆ. ಆದರೆ, ತಮಿಳುನಾಡು ರಾಜ್ಯ ನೀಟ್ ಪರೀಕ್ಷೆಗೆ ಬಲವಾಗಿ ವಿರೋಧಿಸಿದೆ. ಇದು ಸ್ಟೇಟ್ ಬೋರ್ಡ್ನಲ್ಲಿ ಓದಿದ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತದೆ ಎಂಬುದು ತಮಿಳುನಾಡು ವಾದ. ಕಳೆದ ವರ್ಷ ನೀಟ್ ಪರೀಕ್ಷೆಗೆ ಮುನ್ನ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಅತ್ಮಹತ್ಯೆ ಮಾಡಿಕೊಂಡಿದ್ದಳು. ಆ ಘಟನೆ ನಡೆದ ಬಳಿಕ ತಮಿಳುನಾಡು ಸರಕಾರ ನೀಟ್ ಪರೀಕ್ಷೆ ಕಡ್ಡಾಯ ಮಾಡುವುದನ್ನು ರದ್ದುಗೊಳಿಸುವ ಕಾನೂನನ್ನು ರೂಪಿಸಲು ನಿರ್ಧರಿಸಿತೆನ್ನಲಾಗಿದೆ.
ನೀಟ್ ವಿರೋಧಿ ಮಸೂದೆಯಲ್ಲಿ ಏನಿದೆ?
ನೀಟ್ ಪರೀಕ್ಷೆಯನ್ನ ಒಳಗೊಳ್ಳುವ ವಿಚಾರದಲ್ಲಿ ತಮಿಳುನಾಡಿಗೆ ವಿನಾಯಿತಿ ನೀಡಬೇಕು ಎಂಬುದು ಬೇಡಿಕೆ. ತಮಿಳುನಾಡಿನಲ್ಲಿ ವೈದ್ಯಕೀಯ ಶಿಕ್ಷಣ ಕೋರ್ಸ್ ಪ್ರವೇಶಕ್ಕೆ ನೀಟ್ ಬದಲು 12ನೇ ತರಗತಿ ಪರೀಕ್ಷೆಯ ಅಂಕಗಳೇ ಮಾನದಂಡ ಆಗಬೇಕು ಎಂಬುದು ಈ ಮಸೂದೆಯಲ್ಲಿರುವ ಪ್ರಮುಖ ಅಂಶ.

ಕಳೆದ ಬಾರಿ ಬಿಲ್ ತಿರಸ್ಕರಿಸಿದ್ದ ರಾಜ್ಯಪಾಲರು:
ನೀಟ್ ವಿರೋಧಿ ಮಸೂದೆಯಲ್ಲಿ ರಾಜ್ಯ ಸರಕಾರ ಮತ್ತು ರಾಜ್ಯಪಾಲರ ಮಧ್ಯೆ ಹಗ್ಗ ಜಗ್ಗಾಟ ನಡೆಯುತ್ತಲೇ ಇತ್ತು. ತಮಿಳುನಾಡು ವಿಧಾನಸಭೆ ಕಳೆದ ವರ್ಷ ನೀಟ್ ವಿರೋಧಿ ಮಸೂದೆ ರೂಪಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗಿತ್ತು. ರಾಜ್ಯಪಾಲರು ಅದನ್ನು ತಿರಸ್ಕರಿಸಿದ್ದರು. ಮಸೂದೆಗೆ ಅನುಮೋದನೆ ಸಿಕ್ಕರೆ ತಮಿಳುನಾಡಿನ ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಅನ್ಯಾಯ ಆಗುತ್ತದೆ ಎಂಬುದು ರಾಜ್ಯಪಾಲ ರವಿ ಅವರು ಕೊಟ್ಟ ಕಾರಣವಾಗಿದೆ.
ಆದರೂ ತಮಿಳುನಾಡು ಸರಕಾರ ಬಿಡದೆ ಹಠ ತೊಟ್ಟು ಮೂರನೇ ಬಾರಿ ಮಸೂದೆ ರಚಿಸಿ ರಾಜ್ಯಪಾಲರಿಗೆ ಕಳುಹಿಸಿದೆ. ಈಗ ರಾಜ್ಯಪಾಲರು ಕೇಂದ್ರ ಗೃಹ ಇಲಾಖೆಗೆ ಅದನ್ನು ಕಳುಹಿಸಿಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ತಮಿಳುನಾಡಿನ ಈ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಅಂಕಿತ ದೊರೆಯುವುದು ಅನುಮಾನ ಎನ್ನಲಾಗಿದೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications