ಶಬರಿಮಲೆ ದೇವಸ್ಥಾನಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರ ಭೇಟಿ
ತಿರುವನಂತಪುರಂ, ಡಿಸೆಂಬರ್ 21: ಈ ವರ್ಷ ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಭಕ್ತರ ಭಾರೀ ನೂಕುನುಗ್ಗಲು ಕಂಡುಬಂದಿದೆ ಎಂದು ದೇವಾಲಯದ ಆಡಳಿತ ಸಮಿತಿಯ ಅಧಿಕೃತ ಹೇಳಿಕೆ ತಿಳಿಸಿದೆ.
ಡಿಸೆಂಬರ್ 11ರಿಂದ ದೇವಾಲಯಕ್ಕೆ ಭಾರೀ ಸಂಖ್ಯೆಯ ಭಕ್ತರು ಭೇಟಿ ನೀಡುತ್ತಿದ್ದು, ಡಿಸೆಂಬರ್ 12 ರಂದು ಗರಿಷ್ಠ 1.07 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು ಡಿಸೆಂಬರ್ 13 ಮತ್ತು 14 ರಂದು ದೇವಸ್ಥಾನಕ್ಕೆ ಕ್ರಮವಾಗಿ 77,216 ಮತ್ತು 64,617 ಭಕ್ತರು ಭೇಟಿ ನೀಡಿದ್ದರು.
ಶಬರಿಮಲೆ: ಭಕ್ತರಿಗೆ ದರ್ಶನ ಸಮಯದಲ್ಲಿ ಬದಲಾವಣೆ, ಇಲ್ಲಿದೆ ವಿವರ
ಡಿಸೆಂಬರ್ 12 ರಂದು ಒಂದು ದಿನದಲ್ಲಿ 1 ಲಕ್ಷಕ್ಕೂ ಹೆಚ್ಚು ಭಕ್ತರು ದೇವಾಲಯಕ್ಕೆ ಆಗಮಿಸಿದ್ದರಿಂದ ಅಯ್ಯಪ್ಪ ದೇವರ ದರ್ಶನಕ್ಕಾಗಿ ದೇವಾಲಯವು ದಾಖಲೆಯ ಜನರನ್ನು ಕಂಡಿತು. ಅಯ್ಯಪ್ಪನ ದರ್ಶನಕ್ಕಾಗಿ 1,07,260 ಭಕ್ತರು ಆನ್ಲೈನ್ನಲ್ಲಿ ಬುಕ್ಕಿಂಗ್ ಮಾಡಿದ್ದಾರೆ. ಅದೇ ರೀತಿ ಡಿಸೆಂಬರ್ 11 ರಂದು ಸುಮಾರು 60,000 ಜನರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ ಎಂದು ಅವರು ಹೇಳಿದರು.
ಭಾರೀ ಜನಸಂದಣಿಯನ್ನು ಪರಿಗಣಿಸಿ, ಭಕ್ತರ ಸುರಕ್ಷತೆಯನ್ನು ಖಾತ್ರಿಪಡಿಸಲು ದೇವಾಲಯದ ಆಡಳಿತ ಮಂಡಳಿಯಿಂದ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ. ನೂಕುನುಗ್ಗಲು ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷ ವ್ಯವಸ್ಥೆ ಮಾಡಲಾಗಿದೆ. ಭಕ್ತರನ್ನು ಪಂಪಾದಿಂದ ಸನ್ನಿಧಾನಕ್ಕೆ ನಿಯಂತ್ರಿತ ಮತ್ತು ವಿಭಾಗೀಯ ರೀತಿಯಲ್ಲಿ ಬೆಂಗಾವಲು ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಹಂತದಲ್ಲೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಶಬರಿಮಲೆ ವಿಶೇಷ ಅಧಿಕಾರಿ ಹರಿಶ್ಚಂದ್ರ ನಾಯಕ್ ತಿಳಿಸಿದ್ದಾರೆ.
ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸೆಗ್ಮೆಂಟ್ ಸರದಿಯಂತೆ ಬಿಡಲಾಗುತ್ತಿದೆ. ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ತಿಂಡಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಟ್ರಾಫಿಕ್ ನಿಯಂತ್ರಿಸಲು ಪೊಲೀಸರಲ್ಲದೆ, ಆರ್ಎಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿಯ ಸೇವೆಯನ್ನು ಸಹ ಬಳಸಲಾಗುತ್ತಿದೆ ಎಂದು ನಾಯಕ್ ಹೇಳಿದರು.
ಶಬರಿಮಲೆಯ ಅಯ್ಯಪ್ಪ ದೇವಾಲಯದ ಆನ್ಲೈನ್ ಪೋರ್ಟಲ್ಗಳನ್ನು ನವೆಂಬರ್ 17 ರಂದು ವಾರ್ಷಿಕ ಮಂಡಲಂ ಮಕರವಿಳಕ್ಕು ಉತ್ಸವಗಳಿಗಾಗಿ ಭಕ್ತರಿಗಾಗಿ ತೆರೆಯಲಾಯಿತು. ಇದು ಎರಡು ತಿಂಗಳ ಅವಧಿಯ ತೀರ್ಥಯಾತ್ರೆಯ ಋತುವಿನ ಆರಂಭವನ್ನು ಸೂಚಿಸುತ್ತದೆ. ತೀರ್ಥಯಾತ್ರೆಯ ಮೊದಲ ಆರು ದಿನಗಳಲ್ಲಿ ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿರುವ ಅಯಪ್ಪ ದೇವಾಲಯಕ್ಕೆ 2.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದಾರೆ.
"ಈ ಯಾತ್ರಾ ಋತುವಿನ ಮೊದಲ ಆರು ದಿನಗಳಲ್ಲಿ 2,61,874 ಯಾತ್ರಾರ್ಥಿಗಳು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸೂಚನೆಗಳಿವೆ" ಎಂದು ಕೇರಳ ದೇವಸ್ವಂ ಇಲಾಖೆ ಸಚಿವ ಕೆ ರಾಧಾಕೃಷ್ಣನ್ ಹೇಳಿದ್ದಾರೆ.