ಮೋದಿ ಸರ್ಕಾರಕ್ಕೆ 4 ವರ್ಷ: ರೈಲ್ವೆ ಸುರಕ್ಷತೆಗೆ ಆದ್ಯತೆ, ಅಪಘಾತ ಇಳಿಕೆ
ರೈಲ್ವೆ ಖಾತೆಯನ್ನು ಕಳೆದ ವರ್ಷ ಸುರೇಶ್ ಪ್ರಭು ಅವರಿಂದ ಪಿಯೂಷ್ ಗೋಯೆಲ್ ಕೈಗೆತ್ತಿಕೊಂಡ ಬಳಿಕ ಭಾರತೀಯ ರೈಲ್ವೆಯಲ್ಲಿ ಸುರಕ್ಷತೆ ಮತ್ತು ಗದ್ದಲ ರಹಿತ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ.
ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೆ ಸಚಿವಾಲಯ ಮೂವರು ಸಚಿವರನ್ನು ನೋಡಿದೆ. ಆದರೆ ಕಳದ ಸೆಪ್ಟೆಂಬರ್ನಲ್ಲಿ ಪಿಯೂಷ್ ಗೋಯೆಲ್ ಅವರು ಅಧಿಕಾರ ಸ್ವೀಕರಿಸಿದ ಬಳಿಕ ರೈಲು ಅಪಘಾತಗಳ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ.
ಮೋದಿ ಸರ್ಕಾರಕ್ಕೆ 4 ವರ್ಷ : ಶುದ್ಧ ಕುಡಿಯುವ ನೀರು ಪ್ರತಿಯೊಬ್ಬರ ಹಕ್ಕು
2017-18ರಲ್ಲಿ ರೈಲ್ವೆ ಸಚಿವಾಲಯದ ವರದಿಯ ಅನ್ವಯ ನಡೆದ ಅಪಘಾತಗಳ ಸಂಖ್ಯೆ 73. ಇದು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಕಡಿಮೆ.
ಮೋದಿ ಸರಕಾರಕ್ಕೆ 4 ವರ್ಷ : ಅಪನಗದೀಕರಣದಿಂದ ಜಿಸ್ಟಿವರೆಗೆ
ರೈಲುಗಳ ಸ್ವಚ್ಛತೆ, ಹೊಸ ಬೋಗಿಗಳ ಅಳವಡಿಕೆ, ವ್ಯಾಪ್ತಿ ವಿಸ್ತರಣೆ, ಸೌಲಭ್ಯಗಳ ಆಧುನೀಕರಣ, ಸುರಕ್ಷತೆ ಮುಂತಾದವುಗಳಿಗೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ.
ಅಪಘಾತಗಳ ಸಂಖ್ಯೆ ಇಳಿಮುಖ
2014ರಲ್ಲಿ ಸರಣಿ ಅಪಘಾತಗಳು ಮತ್ತು ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದ ಬಳಿಕ 2017-18ರ ಅವಧಿಯಲ್ಲಿ ಅಪಘಾತಗಳ ಸಂಖ್ಯೆ 73ಕ್ಕೆ ಇಳಿದಿದ್ದು, ಇದು ಇಷ್ಟು ವರ್ಷಗಳಲ್ಲಿಯೇ ಅತಿ ಕಡಿಮೆ.
2013-14ರಲ್ಲಿ 118 ರೈಲು ಅವಘಡಗಳು ವರದಿಯಾಗಿತ್ತು. ರೈಲ್ವೆ ಅಪಘಾತಗಳ ಪ್ರಮಾಣ ಶೇ 62ರಷ್ಟು ಕಡಿಮೆಯಾಗಿದೆ. ಹಳೆಯ ಹಳಿಗಳ ಬದಲಾವಣೆ ಮತ್ತು ನಿರ್ವಹಣೆಯಲ್ಲಿ, ದಕ್ಷತೆ ವಿಚಾರದಲ್ಲಿ ರೈಲ್ವೆ ಇಲಾಖೆ ಮುಂಚೂಣಿಗೆ ಬಂದಿದೆ.
2013-14ರಲ್ಲಿ 2,926 ಕಿ.ಮೀ. ಹಳಿ ನವೀಕರಣ ನಡೆಸಿದ್ದರೆ 2017-18ರ ಅವಧಿಯಲ್ಲಿ 4,405 ಕಿ.ಮೀ. ನವೀಕರಣ ಮಾಡಲಾಗಿದೆ. ಅಂದರೆ ಶೇ 50ರಷ್ಟು ಹೆಚ್ಚು ಕೆಲಸ ನಡೆದಿದೆ.
ಈಶಾನ್ಯ ಜನರಿಗೆ ರೈಲು ಸಂಪರ್ಕ
ಇದುವರೆಗೂ ಯಾವ ಕೇಂದ್ರ ಸಚಿವರೂ ಮಾಡದ ಕಾರ್ಯಕ್ಕಾಗಿ ಸುರೇಶ್ ಪ್ರಭು ಅವರನ್ನು ನೆನಪಿಸಿಕೊಳ್ಳಬೇಕಾಗುತ್ತದೆ. ಈಶಾನ್ಯ ಪ್ರದೇಶದ ಜನರಿಗೆ ರೈಲ್ವೆ ಮೂಲಸೌಕರ್ಯದ ವ್ಯಾಪ್ತಿಯನ್ನು ವಿಸ್ತರಿಸಿದವರು ಸುರೇಶ್ ಪ್ರಭು.
ಕಳೆದ ಮೂರು ವರ್ಷಗಳಲ್ಲಿ ಮೇಘಾಲಯ, ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾಗಳನ್ನು ಒಳಗೊಂಡಂತೆ ಐದು ಈಶಾನ್ಯ ರಾಜ್ಯಗಳಲ್ಲಿ ಬ್ರಾಡ್ಗೇಜ್ ನಿರ್ಮಾಣ ಮಾಡುವಲ್ಲಿ ಸಚಿವಾಲಯ ಯಶಸ್ವಿಯಾಗಿದೆ. 2016-17 ಅವಧಿಯ ಕೇವಲ ಒಂದು ವರ್ಷದಲ್ಲಿ ಈ ಪ್ರದೇಶಕ್ಕೆ 29 ಹೊಸ ರೈಲುಗಳನ್ನು ಪರಿಚಯಿಸಲಾಗಿದೆ.
ಮುಂಬರುವ ವರ್ಷಗಳಲ್ಲಿ 90,000 ಕೋಟಿ ಹೂಡಿಕೆಯೊಂದಿಗೆ 2020ರ ವೇಳೆಗೆ ಈಶಾನ್ಯ ರಾಜ್ಯಗಳ ರಾಜಧಾನಿಗಳನ್ನು ಸಂಪರ್ಕಿಸುವ ವಿಶ್ವಾಸವನ್ನು ರೈಲ್ವೆ ಸಚಿವಾಲಯ ಹೊಂದಿದೆ. ಪ್ರಸ್ತುತ ಅಸ್ಸಾಂ, ಅರುಣಾಚಲಪ್ರದೇಶ ಮತ್ತು ತ್ರಿಪುರಾಗಳ ರಾಜಧಾನಿಗಳು ಮಾತ್ರ ರೈಲ್ವೆ ಸಂಪರ್ಕದೊಂದಿಗೆ ಬೆಸೆದುಕೊಂಡಿವೆ.
ಭಾರತದ ಮೊದಲ ಬುಲೆಟ್ ಟ್ರೇನ್
ರೈಲ್ವೆ ಸಚಿವಾಲಯದ ಮತ್ತೊಂದು ಸಾಧನೆಯೆಂದರೆ ಮುಂಬೈ-ಅಹಮದಾಬಾದ್ ಹೈ ಸ್ಪೀಡ್ ಕಾರಿಡಾರ್ ಅಥವಾ ಬುಲೆಟ್ ಟ್ರೇನ್ ಯೋಜನೆ. ಇದು 2022ರ ವೇಳೆಗೆ ಮುಗಿಯುವ ನಿರೀಕ್ಷೆಯಿದೆ.
ಬುಲೆಟ್ ಟ್ರೇನ್ನಿಂದ ಈ ಎರಡೂ ನಗರಗಳ ನಡುವಣ ಪ್ರಯಾಣ ಏಳರಿಂದ ಮೂರು ಗಂಟೆಗೆ ತಗ್ಗಲಿದೆ. ಭಾರತದ ಮೊದಲ ಬುಲೆಟ್ ಟ್ರೇನ್ ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಸಾಗಲಿದೆ. ಮೂರು ಗಂಟೆಯಲ್ಲಿ 508 ಕಿ.ಮೀ. ದೂರವನ್ನು ಕ್ರಮಿಸಲಿದೆ. ಈ ಟ್ರೇನ್ನ ಸರಾಸರಿ ವೇಗ ಗಂಟೆಗೆ 320 ಕಿ.ಮೀ.
ಯೋಜನೆಯಿಂದ ಉದ್ಯೋಗ ಸೃಷ್ಟಿ
ಮಾರ್ಗ ನಿರ್ಮಾಣದ ಕಾಮಗಾರಿಯು ಸುಮಾರು 20 ಸಾವಿರ ನಿರ್ಮಾಣ ಕೆಲಸಗಾರರಿಗೆ ಉದ್ಯೋಗ ನೀಡಲಿದೆ.
ಯೋಜನೆ ಜಾರಿಯಾದ ಬಳಿಕ ಹೈಸ್ಪೀಡ್ ಮಾರ್ಗದ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 4 ಸಾವಿರ ಉದ್ಯೋಗಿಗಳಿಗೆ ನೇರ ನೌಕರಿ ದೊರಕಲಿದೆ. ಜತೆಗೆ ಈ ಯೋಜನೆ ಅಂದಾಜು 16 ಸಾವಿರ ಪರೋಕ್ಷ ಉದ್ಯೋಗಾವಕಾಶ ಸೃಷ್ಟಿಸಲಿದೆ.
ಉದ್ಯೋಗ ಸೃಷ್ಟಿಯ ಆಚೆಗೆ ಹಳಿಗಳ ನಿರ್ಮಾಣ, ಸಂವಹನದ ಮತ್ತು ಸಿಗ್ನಲಿಂಗ್ ಸಾಧನಗಳ ಅಳವಡಿಕೆ, ಶಕ್ತಿ ಹಂಚಿಕೆ ವ್ಯವಸ್ಥೆ ಮುಂತಾದ ಕ್ಷೇತ್ರಗಳಲ್ಲಿ ಕೌಶಲ ಬೆಳೆಸಲಿದೆ.
ರೈಲ್ವೆ ಅಥ್ಲೀಟ್ಗಳಿಂದ 10 ಚಿನ್ನ
2018r ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಚಿನ್ನದ ಪದಕಗಳನ್ನು ಗೆಲ್ಲುವಲ್ಲಿ ಭಾರತೀಯ ರೈಲ್ವೆಯ ಪಾತ್ರ ಮಹತ್ವದ್ದಾಗಿದೆ.
ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಗೆದ್ದ 26 ಚಿನ್ನದ ಪದಕಗಳ ಪೈಕಿ 10 ಪದಕಗಳನ್ನು ಪ್ರಸ್ತುತ ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಥ್ಲೀಟ್ಗಳೇ ಜಯಿಸಿದ್ದಾರೆ.
ಪಿಒಎಸ್ ಯಂತ್ರಗಳ ಅಳವಡಿಕೆ
ನಗದುರಹಿತ ವಹಿವಾಟನ್ನು ಸಾಧಿಸುವ ಗುರಿಯೊಂದಿಗೆ ಕೇಂದ್ರ ಮತ್ತು ಪಶ್ಚಿಮ ರೈಲ್ವೆಗಳು ಮೀಸಲಿರಿಸದ ಟಿಕೆಟಿಂಗ್ ವ್ಯವಸ್ಥೆಯಲ್ಲಿ (ಯುಟಿಎಸ್) ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರಗಳನ್ನು ಅಳವಡಿಸಿವೆ. ಪಾಯಿಂಟ್ ಆಫ್ ಸೇಲ್ ಯಂತ್ರಗಳನ್ನು ಇದುವರೆಗೂ ಭಾರತೀಯ ರೈಲ್ವೆಯ 4 ಸಾವಿರಕ್ಕೂ ಅಧಿಕ ಸ್ಥಳಗಳಲ್ಲಿ ಅಳವಡಿಸಲಾಗಿದೆ.
ಮುಂಬೈನಲ್ಲಿ ಭಾರತದ ಮೊದಲ ಮಹಿಳಾ ನಿಲ್ದಾಣ
ಮುಂಬೈನ ಮಾತುಂಗಾ ರೈಲ್ವೆ ನಿಲ್ದಾಣವನ್ನು ಸಂಪೂರ್ಣವಾಗಿ ಮಹಿಳೆಯರೇ ನಿರ್ವಹಣೆ ಮಾಡುತ್ತಾರೆ. ಇದು ಉಪನಗರ ಕೆಟಗರಿಯಲ್ಲಿರುವ ರೈಲು ನಿಲ್ದಾಣ. ಮಾತುಂಗಾ ರೋಡ್ ರೈಲ್ವೆ ನಿಲ್ದಾಣವನ್ನು ಸಂಪೂರ್ಣ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುವ ನಿಲ್ದಾಣವಾಗಿ ಮಾರ್ಚ್ 8ರಂದು ಪರಿವರ್ತನೆ ಮಾಡಲಾಯಿತು.
ರೈಲ್ವೆ ಕೋಚ್ಗಳಲ್ಲಿ ಜೈವಿಕ ಶೌಚಾಲಯ
ಭಾರತೀಯ ರೈಲ್ವೆಯು 27 ವಿಭಾಗಗಳಲ್ಲಿ ಹಸಿರು ಕಾರಿಡಾರ್ಗಳನ್ನು ನಿರ್ವಹಣೆ ಮಾಡುತ್ತಿದೆ. ಈ ಮಾರ್ಗಗಳಲ್ಲಿ ಓಡಾಡುವ ಪ್ರತಿ ರೈಲುಗಳ ಎಲ್ಲ ಕೋಚ್ಗಳಲ್ಲಿಯೂ ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ.
ಮಾರ್ಚ್ 2018ರವರೆಗೆ ರೈಲ್ವೆ ಕೋಚ್ಗಳಲ್ಲಿ 1,25,000 ಜೈವಿಕ ಶೌಚಾಲಯಗಳನ್ನು ಒದಗಿಸಲಾಗಿದೆ. ಈ ಜೈವಿಕ ಶೌಚಾಲಯಗಳನ್ನು ಹೊಸದಾಗಿ ಆವಿಷ್ಕರಿಸಿ ವಿನ್ಯಾಸಗೊಳಿಸಲಾಗಿದೆ. ಅಲ್ಲದೆ ಇದು 'ಮೇಡ್ ಇನ್ ಇಂಡಿಯಾ'.
ಅತ್ಯಾಧುನಿಕ, ಎಂಜಿನ್ ರಹಿತ ಟ್ರೇನ್, ಎನ್ಎಚ್ಬಿ ಕೋಚ್ಗಳು ಈ ವರ್ಷ ಬಳಕೆಗೆ ಬರಲಿವೆ. ಇನ್ನಷ್ಟು ನಿಲ್ದಾಣಗಳು ವೈಫೈ ಸೌಲಭ್ಯಗಳನ್ನು ಪಡೆದುಕೊಳ್ಳಲಿವೆ. ಇತ್ತೀಚೆಗಷ್ಟೇ ರೈಲ್ವೆ ಇಲಾಖೆಯು ತನ್ನ ನಿಲ್ದಾಣಗಳನ್ನು ಶೇ 100ರಷ್ಟು ವಿದ್ಯುದೀಕರಿಸಿದ್ದಾಗಿ ಹೇಳಿಕೊಂಡಿದೆ.