26/11 ಮುಂಬೈ ದಾಳಿಯಲ್ಲಿ ಆ ಮಹಿಳೆ ರಹಸ್ಯ ಹೊರಗೆ ಬರಲಿಲ್ಲ!
ಬೆಂಗಳೂರು, ನವೆಂಬರ್ 26: ಆ ದುರಂತ ಸಂಭವಿಸಿ ಇಂದಿಗೆ ಅಂದರೆ ನವೆಂಬರ್ 26, 2016ಕ್ಕೆ ಎಂಟು ವರ್ಷ. 2008ರ ನವೆಂಬರ್ 25ರಂದು ಮುಂಬೈನ ಮಚಿಮರ್ ನಗರ್ ಸಣ್ಣ ರಸ್ತೆಗಳು ಎಂದಿನಂತೆ ಇದ್ದವು. ಭಾರತ ಎಂದೂ ಕಂಡರಿಯದ ದಾಳಿಯೊಂದು ಇನ್ನು ಇಪ್ಪತ್ನಾಲ್ಕು ಗಂಟೆ ಅವಧಿಯಲ್ಲಿ ಸಂಭವಿಸುತ್ತದೆ ಎಂಬ ಸಣ್ಣ ಸುಳಿವು ಕೂಡ ಇರಲಿಲ್ಲ.
ಪಾಕಿಸ್ತಾನದಿಂದ ಬಂದ ಲಷ್ಕರ್ ಇ ತೋಯ್ಬಾದ ಹತ್ತು ಮಂದಿ ಉಗ್ರರು ಭಾರತ ಆವರೆಗೂ ಕಾಣದ ಗಾಯವೊಂದನ್ನು ಮಾಡುವವರಿದ್ದರು. ತನಿಖೆ ಪ್ರಕಾರ ಆ ಹತ್ತು ಉಗ್ರರು ಮುಂಬೈಗೆ ಬಂದಿದ್ದು ನವೆಂಬರ್ 26ರಂದೇ. ಆದರೆ ಉಗ್ರರಿಗಿದ್ದ ಸ್ಥಳೀಯ ನಂಟಿನ ಬಗ್ಗೆ ತನಿಖೆ ಆಗಬೇಕು ಎಂದು ಪದೇ ಪದೇ ಒತ್ತಾಯ ಕೇಳಿಬಂತು.
ಆದರೆ, ಆ ಫೈಲ್ ಯಾಕೋ ತೆರೆಯಲೇ ಇಲ್ಲ. ಇದಕ್ಕೆ ಯಾವ ಕಾರಣ ಇರಬಹುದು ಎಂಬುದು ಪ್ರಾಯಶಃ ತನಿಖಾಧಿಕಾರಿಗಳಿಗೆ ಗೊತ್ತಿರಬಹುದು. 26/11 ಮುಂಬೈ ದಾಳಿ ನಂತರ ಪೊಲೀಸರ ವೈಫಲ್ಯದ ಬಗ್ಗೆ ಪರಿಶಿಲನೆ ನಡೆಸುವುದಕ್ಕೆ ರಾಮ್ ಪ್ರಧಾನ್ ಸಮಿತಿ ರಚಿಸಲಾಯಿತು. ಅದರಲ್ಲಿದ್ದ ರೀಸರ್ಚ್ ಅನಾಲಿಸಿಸ್ ವಿಂಗ್ ನ ನಿವೃತ್ತ ಅಧಿಕಾರಿ ವಿ.ಬಾಲಚಂದ್ರನ್ ಈ ಬಗ್ಗೆ ಮಾತನಾಡಿದ್ದಾರೆ.
ಸಮಿತಿಯಿಂದ ದೂರೊಂದು ನೀಡಿದ್ದೆವು. ಸಮುದ್ರದ ಮೂಲಕ ಉಗ್ರರು ಭಾರತದೊಳಕ್ಕೆ ಬರಲು ಮಹಿಳೆಯೊಬ್ಬಳು ಸರೀಕಾಗಿದ್ದಳು. ಆ ಬಗ್ಗೆ ತನಿಖೆ ನಡೆಸುವಂತೆ ತಿಳಿಸಿದ್ದೆವು ಎನ್ನುತ್ತಾರೆ ಅವರು.

ಒಂದು ದಿನ ಮುಂಚೆಯೇ ಬಂದಿದ್ದರೆ ಉಗ್ರರು?
ಒನ್ ಇಂಡಿಯಾಗೆ ಕುತೂಹಲಕಾರಿ ಮಾಹಿತಿ ನೀಡಿರುವ ಬಾಲಚಂದ್ರನ್, ತನಿಖೆ ವೇಳೆ ವದಂತಿಯೊಂದಿತ್ತು, ಉಗ್ರಗಾಮಿಗಳು ದಾಳಿಯ ಒಂದು ದಿನ ಮುಂಚೆಯೇ ಮುಂಬೈಗೆ ಬಂದಿದ್ದರು. ಭೂಗತ ಲೋಕವನ್ನು ಬಳಸಿಕೊಂಡು ಮಚಿಮರ್ ನಗರ್ ನ ಗುಡಿಸಲೊಂದರಲ್ಲಿ ಉಳಿದುಕೊಂಡಿದ್ದರು.

ಎಲ್ಲ ಜಾಗ ನೋಡಿಕೊಂಡು ಬಂದಿದ್ದರು
ಮುಂಬೈನ ಕೊಲಾಬಾದಲ್ಲಿರುವ ಮೀನುಗಾರರೇ ಇರುವ ಕಾಲೋನಿ ಮಚಿಮರ್ ನಗರ್. ಇಡೀ ಪ್ರಕರಣದ ಕಿಂಗ್ ಪಿನ್ ಮಹಿಳೆ ಆ ಹತ್ತು ಉಗ್ರಗಾಮಿಗಳಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಳು. ಅಲ್ಲಿದ್ದುಕೊಂಡು ದಾಳಿ ಮಾಡಬೇಕಾದ ಪ್ರದೇಶವನ್ನೆಲ್ಲ ಉಗ್ರರು ನೋಡಿಕೊಂಡು ಬಂದಿದ್ದರು.

ಹೆಚ್ಚಿನ ವಿವರ ಕಲೆಹಾಕಲು ಅನುಮತಿ ಸಿಗಲಿಲ್ಲ
ಆದರೆ, ಈ ವಿಷಯಗಳು ಚರ್ಚೆಯಾಯಿತೇ ವಿನಾ ಈ ಆರೋಪದ ಬಗ್ಗೆ ಹೆಚ್ಚಿನ ವಿವರ ಕಲೆ ಹಾಕುವುದಕ್ಕೆ ಅನುಮತಿ ಸಿಗಲಿಲ್ಲ ಎನ್ನುತ್ತಾರೆ ಸಮಿತಿಯಲ್ಲಿದ್ದ ಬಾಲಚಂದ್ರನ್. ಆದರೆ ಆ ವಿಷಯಗಳನ್ನು ಕೇಂದ್ರೀಯ ತನಿಖಾ ದಳಕ್ಕೆ ತಿಳಿಸಲಾಯಿತು. ಆದರೆ ಆ ಬಗ್ಗೆ ಮತ್ತೆ ಅವರಿಂದ ಯಾವುದೇ ಪ್ರತಿಕ್ರಿಯೆ ತಿಳಿಯಲಿಲ್ಲ.

ಕಣ್ಣಾರೆ ನೋಡದೆ ಹೇಗೆ ಸಾಧ್ಯ?
ಈ ಪ್ರಕರಣವನ್ನು ತನಿಖೆ ಮಾಡಿದ ಅಪರಾಧ ವಿಭಾಗದವರು ಸಹ ಉಗ್ರಗಾಮಿಗಳು 26ನೇ ತಾರೀಕೇ ಮುಂಬೈಗೆ ಬಂದಿಳಿದರು ಎಂಬ ತೀರ್ಮಾನಕ್ಕೆ ಬಂದುಬಿಟ್ಟರು. ಆದರೆ ಸ್ಥಳಗಳನ್ನು ಒಮ್ಮೆ ಕಣ್ಣಾರೆ ನೋಡದೆ ಅಷ್ಟು ಕರಾರುವಾಕ್ ದಾಳಿ ಮಾಡುವುದು ಸಾಧ್ಯವೇ ಇಲ್ಲ. ತನಿಖೆ ವೇಳೆ, ಉಗ್ರರಿಗೆ ನಿರ್ದಿಷ್ಟ ಸ್ಥಳಗಳ ನಕ್ಷೆ ನೀಡಲಾಗಿತ್ತು. ಅವುಗಳ ಮೇಲಷ್ಟೇ ದಾಳಿ ಮಾಡಿದರು ಎಂದು ಷರಾ ಬರೆದರು ಎನ್ನುತ್ತಾರೆ ಬಾಲಚಂದ್ರನ್.

ಅಲ್ಲಿಗೆ ತಲುಪಿದ್ದು ಹೇಗೆ?
ಕೊಲಾಬಾದ ಬಳಿ ತುಂಬಾ ಕಿರಿದಾದ ರಸ್ತೆಯಲ್ಲಿ ಚಬಾದ್ ಹೌಸ್ ಇದೆ. ಅದರ ಮೇಲೆ ದಾಳಿಯಾಗಿದೆ. ನಾನು ಅದೇ ಪ್ರದೇಶದಲ್ಲಿ ಬಹಳ ಕಾಲ ಇದ್ದೆ. ನನಗೆ ಆ ಸ್ಥಳದ ಬಗ್ಗೆ ಗೊತ್ತಿರಲಿಲ್ಲ. ಅಂಥದ್ದರಲ್ಲಿ ಉಗ್ರಗಾಮಿಗಳು ಹೇಗೆ ಒಂದೇ ದಿನದಲ್ಲಿ ಇಲ್ಲಿವರೆಗೆ ತಲುಪುವುದಕ್ಕೆ ಸಾಧ್ಯ ಎಂದು ಪ್ರಶ್ನಿಸುತ್ತಾರೆ ನಿವೃತ್ತ ಅಧಿಕಾರಿ ಬಾಲಚಂದ್ರನ್.












Click it and Unblock the Notifications