ತೆಲಂಗಾಣದಲ್ಲಿ ನವಿಲುಗಳ ಮಾರಣಹೋಮ: ರೈತರೇ ಕಾರಣ ಎಂದ ಸರ್ಕಾರ
ತೆಲಂಗಾಣ, ಜು.27: ತೆಲಂಗಾಣ ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ 25 ಕ್ಕೂ ಹೆಚ್ಚು ಮೃತ ನವಿಲುಗಳು ಪತ್ತೆಯಾಗಿರುವುದು ಅಲ್ಲಿನ ರಾಜ್ಯ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ತೆಲಂಗಾಣದ ಜೋಗುಲಾಂಬಾ ಗದ್ವಾಲ್ ಹಾಗೂ ನಾಗರ್ಕರ್ನೂಲ್ ಜಿಲ್ಲೆಗಳ ವ್ಯಾಪ್ತಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ನವಿಲುಗಳ ಶವಗಳು ಪತ್ತೆಯಾಗುತ್ತಿದ್ದು, ಪ್ರಾಣಿಪ್ರಿಯರಲ್ಲಿ ಆತಂಕ ಮೂಡಿಸಿದೆ. ಈ ಕುರಿತು ಸ್ಪಷ್ಟನೆ ನೀಡಿರುವ ತೆಲಂಗಾಣ ಅರಣ್ಯ ಇಲಾಖೆ ನವಿಲುಗಳು ಕೃಷಿ ಉತ್ಪನ್ನಗಳನ್ನು ತಿನ್ನುವುದರಿಂದ ಕಂಗೆಟ್ಟಿರುವ ರೈತರು ವಿಷವುಣಿಸಿ ನವಿಲುಗಳನ್ನು ಕೊಂದು ಹಾಕಿರುವ ಸಾಧ್ಯತೆಗಳಿವೆ.
ಅಪಘಾತದಲ್ಲಿ ನವಿಲು ಸಾವು: ಮುಂದೇನಾಯ್ತು ನೋಡಿ
ರೈತರು ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಈ ರೀತಿ ಕೀಟನಾಶಕಗಳನ್ನು ಬೆಳೆಗಳಿಗೆ ಸಿಂಪಡಿಸಿರುತ್ತಾರೆ. ಹೀಗಾಗಿ ವಿಷಪೂರಿತ ಕೀಟನಾಶವುಳ್ಳ ಆಹಾರಗಳನ್ನು ಸೇವಿಸಿ ನವಿಲುಗಳು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಆದರೆ ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಗಡಿ ಭಾಗಗಳಲ್ಲಿ ನವಿಲುಗಳನ್ನು ಬೇಟೆಯಾಡಲು ಆಗಿಂದಾಗ್ಗೆ ಮೂರು ರಾಜ್ಯಗಳ ಬೇಟೆಗಾರರ ನಡುವೆ ಕಲಹಗಳು ನಡೆಯುತ್ತಲೇ ಇದ್ದು ಇತ್ತೀಚೆಗಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಬೇಟೆಗಾರರ ಮೇಲೆ ಗೋಲಿಬಾರ್ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.