ಬಜೆಟ್ನ 10 ಪ್ರಮುಖ ಸಂಗತಿ, ಜನಸಾಮಾನ್ಯರ ಗಮನಕ್ಕೆ
ನಮ್ಮ ದೇಶದಲ್ಲಿ ಮುಂದೆ ಕಾಣಬಹುದಾದ ಸಕಾರಾತ್ಮಕ ಬದಲಾವಣೆಗಳನ್ನು ಗುರುತಿಸುವ ಪ್ರಯತ್ನ ಆಗುವುದು ಮುಖ್ಯ. ಇಲ್ಲಿರುವುದರ ಹೊರತಾಗಿಯೂ ನೀವು ಗಮನಿಸಿದ ಮುಖ್ಯ ಸಂಗತಿಗಳಿದ್ದರೆ ಖಂಡಿತಾ ಒನ್ಇಂಡಿಯಾ ಕನ್ನಡ ಓದುಗರ ಜೊತೆಗೆ ಹಂಚಿಕೊಳ್ಳಿ.
ಕೇಂದ್ರ ಬಜೆಟ್ ಮಂಡನೆ ಆಗಿದೆ. ಜನ ಸಾಮಾನ್ಯರಿಗೆ ಸಿಕ್ಕಿದ್ದೇನು ಸರಳವಾಗಿ, ವಿವರಿಸಿ ಹೇಳಿ ಅನ್ನೋದು ಸಾಮಾನ್ಯವಾದ ಪ್ರಶ್ನೆ ಆಗಿರುತ್ತದೆ. ಎಷ್ಟೆಲ್ಲ ದೊಡ್ಡ ದೊಡ್ಡ ವಿಷಯ ಅಡಗಿರುವ ಬಜೆಟ್ ನಲ್ಲಿ ಹೆಕ್ಕಿ, ತುಂಬ ಒಳ್ಳೆಯ ಘೋಷಣೆ ಅನ್ನಿಸಿದ್ದನ್ನು ನಿಮ್ಮ ಮುಂದೆ ಇಡುವುದು ಈ ವರದಿಯ ಉದ್ದೇಶ.
ತೆರಿಗೆಯಲ್ಲಿ ಏನು ಬದಲಾವಣೆ ಆಯಿತು, ಜನ ಸಾಮಾನ್ಯರಿಗೆ ಅನುಕೂಲವಾಗುವಂಥ ಮೂಲಸೌಕರ್ಯ ವಲಯದಲ್ಲಿ ಆದ ಮಹತ್ತರ ಬದಲಾವಣೆ ಏನು? ಕ್ಯಾಷ್ ಲೆಸ್ ಸಮಾಜದ ಬಗ್ಗೆ ಮಾತನಾಡುತ್ತಿರುವ ಸರಕಾರ ಆ ಬಗ್ಗೆ ತೆಗೆದುಕೊಂಡ ತುಂಬ ಗಂಭೀರವಾದ ನಿಲುವು ಏನು.. ಹೀಗೆ ಹಲವು ವಿಚಾರಗಳ ವಿವರಗಳು ಇಲ್ಲಿವೆ.[ಬಜೆಟ್ 2017: ಯಾವ್ದು ಏರಿಕೆ? ಯಾವ್ದು ಇಳಿಕೆ?]
ನಮ್ಮ ದೇಶದಲ್ಲಿ ಮುಂದೆ ಕಾಣಬಹುದಾದ ಸಕಾರಾತ್ಮಕ ಬದಲಾವಣೆಗಳನ್ನು ಗುರುತಿಸುವ ಪ್ರಯತ್ನ ಆಗುವುದು ಮುಖ್ಯ. ಇಲ್ಲಿರುವುದರ ಹೊರತಾಗಿಯೂ ನೀವು ಗಮನಿಸಿದ ಮುಖ್ಯ ಸಂಗತಿಗಳಿದ್ದರೆ ಖಂಡಿತಾ ಒನ್ಇಂಡಿಯಾ ಕನ್ನಡ ಓದುಗರ ಜೊತೆಗೆ ಹಂಚಿಕೊಳ್ಳಿ. ಒಳ್ಳೆ ಉದ್ದೇಶ, ಸುದ್ದಿ ಹಂಚಿಕೊಳ್ಳುವುದರಲ್ಲೇ ಸಂತಸವಿದೆ ಅಲ್ಲವೇ?
ಶೇ 5 ಆದಾಯ ತೆರಿಗೆ ಇಳಿಕೆ
ಆದಾಯ ತೆರಿಗೆಯಲ್ಲಿ ಆದ ಪ್ರೋತ್ಸಾಹದಾಯಕ ಹಾಗೂ ಗಮನಾರ್ಹ ಬದಲಾವಣೆ ಆಗಿದೆ. 2.5 ಲಕ್ಷದಿಂದ 5 ಲಕ್ಷದವರೆಗಿನ ಆದಾಯಕ್ಕೆ ಈ ಹಿಂದೆ ಶೇ 10ರಷ್ಟು ತೆರಿಗೆ ಇತ್ತು. ಅದನ್ನು ಶೇ 5ಕ್ಕೆ ಇಳಿಕೆ ಮಾಡಲಾಗಿದೆ.
ಸೇವಾ ತೆರಿಗೆ ವಾಪಸ್
ಐಆರ್ ಸಿಟಿಸಿ ಮೂಲಕ ರೈಲು ಟಿಕೆಟ್ ಬುಕ್ ಮಾಡುವಾಗ ಇದ್ದ ಸೇವಾ ತೆರಿಗೆಯನ್ನು ಈ ಭಾರಿಯ ಬಜೆಟ್ ನಲ್ಲಿ ವಾಪಸ್ ಪಡೆಯಲಾಗಿದೆ. ಮುಂದಿನ ಬಾರಿ ರೈಲ್ವೆ ಟಿಕೆಟ್ ಅನ್ನು ಐಆರ್ ಸಿಟಿಸಿ ಮೂಲಕ ಮಾಡುವಾಗ ಸೇವಾ ತೆರಿಗೆ ಹಾಕಿಲ್ಲ ಅಂಬುದನ್ನು ಖಾತ್ರಿ ಮಾಡಿಕೊಳ್ಳಿ.
3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ
ಬರುವ ಏಪ್ರಿಲ್ ಒಂದರಿಂದ 3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ. ಚೆಕ್ ಅಥವಾ ಆನ್ ಲೈನ್ ಮೂಲಕ ಕೊಡಬಹುದು. ಈ ನಿರ್ಧಾರ ತುಂಬ ಮಹತ್ವದ್ದಾಗಿದ್ದು, ವಾಸ್ತವದಲ್ಲಿ ಹೇಗೆ ಜಾರಿಗೆ ಬರಬಹುದು ಎಂಬ ಕುತೂಹಲವಿದೆ.
ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ 2 ವರ್ಷಕ್ಕೆ ಇಳಿಕೆ
ಆಸ್ತಿ ಮಾರಾಟ ಮಾಡಿದರೆ ಅದರಲ್ಲಿ ಅಲ್ಪಕಾಲೀನ ಬಂಡವಾಳದ ಲಾಭ, ದೀರ್ಘಕಾಲೀನ ಬಂಡವಾಳದ ಲಾಭದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಇದೀಗ ದೀರ್ಘ ಕಾಲೀನ ಬಂಡವಾಳದ ಮೇಲಿನ ತೆರಿಗೆಗೆ ಅವಧಿಯನ್ನು 3ರಿಂದ 2 ವರ್ಷಕ್ಕೆ ಇಳಿಕೆ ಮಾಡಲಾಗಿದೆ.
ಅಬಕಾರಿ ಸುಂಕ ಇಳಿಕೆ
ಲಿಕ್ವಿಡ್ ನ್ಯಾಚುರಲ್ ಗ್ಯಾಸ್ (ಎಲ್ ಎನ್ ಜಿ) ಮೇಲೆ ಅಬಕಾರಿ ಸುಂಕವನ್ನು ಶೇ 5ರಿಂದ 2.5ಗೆ ಇಳಿಕೆ ಮಾಡಲಾಗಿದೆ.
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಅನುಕೂಲ
ದೇಶದ ಐನೂರು ರೈಲು ನಿಲ್ದಾಣದಲ್ಲಿ ಲಿಫ್ಟ್, ಎಸ್ಕಲೇಟರ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದರಿಂದ ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗಲಿದೆ.
ವೇಗದ ಬ್ರ್ಯಾಡ್ ಬಾಂಡ್ ಇಂಟರ್ ನೆಟ್ ಸೇವೆ
ದೇಶದ 1.5 ಲಕ್ಷಕ್ಕೂ ಹೆಚ್ಚು ಗ್ರಾಮಗಳಿಗೆ ವೇಗದ ಬ್ರ್ಯಾಡ್ ಬಾಂಡ್ ಇಂಟರ್ ನೆಟ್ ಸೇವೆ ಒದಗಿಸುವ ಸಂಕಲ್ಪ ಹೊಂದಿದೆ ಕೇಂದ್ರ ಸರಕಾರ
ಹಿರಿಯ ನಾಗರಿಕರಿಗೆ ಸ್ಮಾರ್ಟ್ ಕಾರ್ಡ್
ಈ ಬಾರಿಯ ಬಜೆಟ್ ನಲ್ಲಿ ಆರೋಗ್ಯ ಪರಿಶೀಲನೆಗಾಗಿ ಹಿರಿಯ ನಾಗರಿಕರಿಗೆ ಆಧಾರ್ ಮೂಲದ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡುವ ಗುರಿ ಇದೆ
ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ
ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಪ್ರಸ್ತಾವ ಮಾಡಿದ್ದರು. ಅದನ್ನೀಗ ಬಜೆಟ್ ನಲ್ಲಿ ಶಿಸ್ತುಬದ್ಧವಾಗಿ ಜಾರಿಗೆ ತರಲು ನಿರ್ಧರಿಸಲಾಗಿದೆ. ಮೇ 1, 2018ರ ವೇಳೆಗೆ ಶೇ 100ರಷ್ಟು ಗ್ರಾಮೀಣ ವಿದ್ಯುದ್ದೀಕರಣ ಮಾಡಲು ತೀರ್ಮಾನಿಸಲಾಗಿದೆ
ಗ್ರಾಮೀಣ ಬಡತನದ ನಿರ್ಮೂಲನೆ
ಈ ಬಾರಿಯ ಬಜೆಟ್ ನಲ್ಲಿ ಗ್ರಾಮೀಣ ಭಾಗದಲ್ಲಿ ಮೂರು ಲಕ್ಷ ಕೋಟಿ ಹೂಡಿಕೆಗೆ ತೀರ್ಮಾನಿಸಲಾಗಿದೆ. ಐವತ್ತು ಸಾವಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಐವತ್ತು ಸಾವಿರ ಕುಟುಂಬಗಳನ್ನು ಬಡತನದಿಂದ ಹೊರತರುವ ಗುರಿಯು ಈ ಯೋಜನೆಯ ಹಿಂದಿದೆ.