Sabarimala Temple: ಅಯ್ಯಪ್ಪನ ದರ್ಶನಕ್ಕೆ ಒಂದೇ ದಿನ ಲಕ್ಷ ಮಂದಿ ಬುಕ್ಕಿಂಗ್
ತಿರುವನಂತಪುರಂ, ಡಿ. 12: ಶಬರಿಮಲೆ ದೇವಸ್ಥಾನದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಬಂದ ಭಕ್ತರ ಸಂಖ್ಯೆ ದಾಖಲೆ ಬರೆದಿದೆ. ಸೋಮವಾರ ಒಂದೇ ದಿನ 1 ಲಕ್ಷಕ್ಕೂ ಹೆಚ್ಚು ಭಕ್ತರು ದರ್ಶನಕ್ಕೆ ಬುಕ್ಕಿಂಗ್ ಮಾಡಿಸಿದ್ದಾರೆ.
ಶಬರಿಮಲೆ ದೇವಸ್ಥಾನದ ಅಧಿಕಾರಿಗಳ ಪ್ರಕಾರ 1,07,260 ಭಕ್ತರು ಸೋಮವಾರದ ದರ್ಶನಕ್ಕೆ ಬುಕ್ಕಿಂಗ್ ಕಾಯ್ದಿರಿಸಿದ್ದಾರೆ. ಈ ಹಿನ್ನೆಲೆ ಕಾಲ್ತುಳಿತ ಉಂಟಾಗುವ ಸಾಧ್ಯತೆಯನ್ನು ಪರಿಗಣಿಸಿ ಸೂಕ್ತವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.
ವಿಐಪಿ ದರ್ಶನ: ತಿರುಪತಿಯಲ್ಲಿ ಆಗದೇ ಇದ್ದದ್ದು ಶಬರಿಮಲೆಯಲ್ಲಿ ಸಾಧ್ಯವಾಯಿತು
ಭಕ್ತರನ್ನು ಪಂಪಾದಿಂದ ಅಯ್ಯಪ್ಪನ ಸನ್ನಿಧಾನಕ್ಕೆ ನಿಯಂತ್ರಿತ ಮತ್ತು ವಿಭಾಗಗಳಲ್ಲಿ ಕರೆತರಲಾಗುವುದು. ಇದಕ್ಕಾಗಿ ಪ್ರತಿ ಹಂತದಲ್ಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
"ಭಾರೀ ಸಂಖ್ಯೆಯಲ್ಲಿ ಯಾತ್ರಿಗಳು ಸೇರುವುದಿಂದ ಭಕ್ತಾದಿಗಳ ನೂಕುನುಗ್ಗಲಿನಿಂದಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಸರತಿ ಸಾಲುಗಳನ್ನು ವಿಭಾಗಿಸಲಾಗಿದೆ. ಸರತಿ ಸಾಲಿನಲ್ಲಿ ನಿಂತಿರುವ ಭಕ್ತರಿಗೆ ಲಘು ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರಲ್ಲದೆ ಆರ್ಎಎಫ್ ಮತ್ತು ಎನ್ಡಿಆರ್ಎಫ್ ಸಿಬ್ಬಂದಿಯ ಸೇವೆಯನ್ನೂ ಬಳಸಿಕೊಳ್ಳಲಾಗುವುದು'' ಎಂದು ಶಬರಿಮಲೆ ವಿಶೇಷ ಅಧಿಕಾರಿ ಹರಿಶ್ಚಂದ್ರ ನಾಯ್ಕ್ ತಿಳಿಸಿದ್ದಾರೆ.
ದಾಖಲೆ ಬುಕ್ಕಿಂಗ್ ಆಗಿರುವ ಕಾರಣ ದರ್ಶನದ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶಬರಿಮಲೆ ದರ್ಶನಕ್ಕೆ ಡಿಸೆಂಬರ್ 13 ರಂದು ಸುಮಾರು 77,216 ಮತ್ತು ಡಿಸೆಂಬರ್ 14 ರಂದು 64,617 ಜನರು ಆನ್ಲೈನ್ನಲ್ಲಿ ಬುಕ್ ಮಾಡಿದ್ದಾರೆ. ಶನಿವಾರ ಸಂಜೆ 5 ಗಂಟೆಯವರೆಗೆ ಸುಮಾರು 60,000 ಜನರು ಬುಕ್ಕಿಂಗ್ ಮಾಡಿದ್ದಾರೆ.
ಕಳೆದ ನವೆಂಬರ್ 24 ರಂದು ಕೇರಳದ ಪಥನಂತಿಟ್ಟ ಜಿಲ್ಲೆಯ ಶಬರಿಮಲೆಯಲ್ಲಿರುವ ಅಯಪ್ಪ ದೇವಾಲಯಕ್ಕೆ 2.5 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಭೇಟಿ ನೀಡಿದ್ದರು ಎಂದು ಕೇರಳ ದೇವಸ್ವಂ ಇಲಾಖೆ ಸಚಿವ ಕೆ ರಾಧಾಕೃಷ್ಣನ್ ಹೇಳಿದ್ದಾರೆ.
"ಈ ಯಾತ್ರೆಯ ಸಮಯದಲ್ಲಿನ ಮೊದಲ ಆರು ದಿನಗಳಲ್ಲಿ 2,61,874 ಯಾತ್ರಿಕರು ಶಬರಿಮಲೆಗೆ ಭೇಟಿ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸೂಚನೆಗಳಿವೆ" ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇನ್ನು, ಭಾರೀ ಜನದಟ್ಟಣೆಯಿಂದಾಗಿ ಕೆಲವು ಯಾತ್ರಾರ್ಥಿಗಳು ಮತ್ತು ಪೊಲೀಸರು ಗಾಯಗೊಂಡಿರುವ ಕಾರಣ, ತುರ್ತು ಸಭೆ ನಡೆಸಿ, ನೂಕುನುಗ್ಗಲು ನಿಯಂತ್ರಣಕ್ಕೆ ಮಾರ್ಗಗಳನ್ನು ಸೂಚಿಸುವಂತೆ ದೇವಸ್ಥಾನ ಮಂಡಳಿ ಮತ್ತು ಪತ್ತನಂತಿಟ್ಟ ಜಿಲ್ಲಾಧಿಕಾರಿಗೆ ಹೈಕೋರ್ಟ್ ಭಾನುವಾರ ಸೂಚಿಸಿದೆ. ಈ ನಡುವೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೋಮವಾರ ಸಭೆ ಕರೆದು ಪರಿಸ್ಥಿತಿ ಅವಲೋಕನ ನಡೆಸಿದ್ದಾರೆ.