ತೆಲಂಗಾಣ: ಕೊರೊನಾ ಲಸಿಕೆ ಪಡೆದಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು
ಹೈದರಾಬಾದ್,ಜನವರಿ 24:ಕೊರೊನಾ ಲಸಿಕೆ ಪಡೆದಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.
ವಾರಂಗಲ್ ನಗರದ ಶ್ಯಾಮ್ ಪೇಟ್ ಪ್ರದೇಶದಲ್ಲಿ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ದೀನ್ ದಯಾಳ್ ಕಾಲೋನಿಯಲ್ಲಿ ವಾಸಿಸುತ್ತಿದ್ದರು.
ಜ.19 ರಂದು ಇವರಿಗೆ ಹೊಸ ಶ್ಯಾಂಪೇಟ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೊರೋನಾ ಲಸಿಕೆಯನ್ನು ನೀಡಲಾಗಿತ್ತು. ಜ.23 ರಂದು ರಾತ್ರಿ ಈಕೆಗೆ ಎದೆ ನೋವು ಕಾಣಿಸಿಕೊಂಡಿದ್ದು, ಅಸಿಡಿಟಿಯ ಕಾರಣದಿಂದಾಗಿ ಈ ರೀತಿಯಾಗಿರಬಹುದು ಎಂದುಕೊಂಡು ಮಾತ್ರೆ ಸೇವಿಸಿ ಮಲಗಿದ್ದಾರೆ. ಆದರೆ ಬೆಳಿಗ್ಗೆ ವೇಳೆಗೆ ಆಕೆ ಸಾವನ್ನಪ್ಪಿದ್ದಾರೆ.

ಮರಣೋತ್ತರ ವರದಿ ಬರುವವರೆಗೂ ಕೋವಿಡ್-19 ಲಸಿಕೆಯಿಂದಲೇ ಸಾವನ್ನಪ್ಪಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ತೆಲಂಗಾಣದಲ್ಲಿ ನಿರ್ಮಲ್ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೋರ್ವ ಕೋವಿಡ್-19 ಲಸಿಕೆಯನ್ನು ಪಡೆದ 18 ಗಂಟೆಗಳಲ್ಲಿ ಸಾವನ್ನಪ್ಪಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಕುಟುಂಬ ಸದಸ್ಯರು ಕೋವಿಡ್-19 ಲಸಿಕೆಯಿಂದಾಗಿಯೇ ವನಿತಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಿದ್ದಾರೆ. ಮೃತರಿಗೆ ಮಧುಮೇಹ ಹಾಗೂ ರಕ್ತದ ಒತ್ತಡದ ಸಮಸ್ಯೆ ಈ ಹಿಂದೆಯೇ ಇತ್ತು ಎಂದು ತಿಳಿದುಬಂದಿದೆ.
ಕುಟುಂಬ ಸದಸ್ಯರು ದೂರು ನೀಡಿರುವ ಹಿನ್ನೆಲೆಯಲ್ಲಿ ಸುಬೇದಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಾರಂಗಲ್ ನಗರ ಜಿಲ್ಲಾಧಿಕಾರಿ ರಾಜೀವ್ ಗಾಂಧಿ ಹನುಂತು ಈ ಬಗ್ಗೆ ಮಾತನಾಡಿದ್ದು, ಎಂಜಿಎಂ ಆಸ್ಪತ್ರೆ ವೈದ್ಯರೊಂದಿಗೆ ಮಾತನಾಡಿ ಮೃತರ ಮರಣೋತ್ತರ ವರದಿಯ ಬಳಿಕವಷ್ಟೇ ಸಾವಿಗೆ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.












Click it and Unblock the Notifications