Mekedatu: ಕರ್ನಾಟಕಕ್ಕಿಂತ 'ಮೇಕೆದಾಟು' ತಮಿಳುನಾಡಿಗೇ ಹೆಚ್ಚು ಲಾಭ; ಡಿಕೆ ಶಿವಕುಮಾರ್ ಸ್ಪಷ್ಟ ಸಂದೇಶ
ಬೆಂಗಳೂರು: ಮಹತ್ವಾಕಾಂಕ್ಷೆಯ ಮೇಕೆದಾಟು ಯೋಜನೆ ಕೇವಲ ನನ್ನ ಹೃದಯಕ್ಕೆ ಮಾತ್ರ ಹತ್ತಿರವಾಗಿಲ್ಲ. ಮೇಕೆದಾಟು ಯೋಜನೆ ಕರ್ನಾಟಕ ರಾಜ್ಯಕ್ಕಿಂತ ತಮಿಳುನಾಡಿಗೆ ಹೆಚ್ಚು ಅನುಕೂಲ ನೀಡಲಿದೆ. ತಮಿಳುನಾಡು ಪಾಲಿನ 177 ಟಿಎಂಸಿ ನೀರನ್ನು ಬಿಡಲು ಕರ್ನಾಟಕ ಸಿದ್ಧವಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ವಿಧಾನಸೌಧದಲ್ಲಿ ವಿಧಾನ ಪರಿಷತ್ ಚುನಾವಣೆ ಮತದಾನದ ಬಳಿಕ ಶಿವಕುಮಾರ್ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ತಮಿಳುನಾಡು ಸರ್ಕಾರ ನಿಮ್ಮ ಹೃದಯಕ್ಕೆ ಹತ್ತಿರವಾದ ಮೇಕೆದಾಟು ಯೋಜನೆ ತಡೆಯಲು ಕಾನೂನು ಅವಕಾಶ ಹುಡುಕುತ್ತಿದೆ ಎಂಬ ಪ್ರಶ್ನೆಗೆ ಅವರು, ಯೋಜನೆಯಿಂದ ತಮಿಳುನಾಡಿಗೆ ಹೆಚ್ಚುನ ಸಹಾಯವಾಗಲಿದೆ. 177 ಟಿಎಂಸಿ ನೀರು ಬಿಡಲು ಬಗ್ಗೆ ಸುಪ್ರೀಂ ಕೋರ್ಟ್ ಆದೇಶವೂ ಇದೆ. ಈ ಯೋಜನೆ ತೀರ್ಮಾನವನ್ನು ಕೇಂದ್ರ ಜಲ ಆಯೋಗ ಮಾಡಬೇಕು ಎಂದು ಕೋರ್ಟ್ ತಿಳಿಸಿದೆ ಎಂದು ತಿಳಿಸಿದರು.

ನಾವೂ ಒಂದು ಬಕೆಟ್ ನೀರನ್ನೂ ಬಳಸಲ್ಲ: ಡಿಕೆಶಿ
ಮೇಕೆದಾಟು ಯೋಜನೆ ದಕ್ಷಿಣ ಭಾರತದ ಹೃದಯದಂತ ಯೋಜನೆ. ಈ ಯೋಜನೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನ ಹಿತ ಅಡಗಿದೆ. ಆ ರಾಜ್ಯದ ರೈತರ ಹಿತವನ್ನೂ ಕಾಪಾಡಬೇಕು. ಇದು ಸಮತೋಲಿತ ಜಲಾನಯನ. ಇಲ್ಲಿ ಒಂದೇ ಒಂದು ಬಕೆಟ್ ನೀರನ್ನೂ ನೀರಾವರಿಗೆ ಬಳಸುವುದಿಲ್ಲ. ಬೆಂಗಳೂರು ನಗರದ ಕುಡಿಯುವ ನೀರು ಪೂರೈಕೆಗೆ ಮಾತ್ರ ಬಳಸಲಾಗುವುದು. ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು, ನಾವು ಕೃಷ್ಣಾದಿಂದ ನೀರನ್ನು ತರಲು ಸಾಧ್ಯವಿಲ್ಲ. ಹೀಗಾಗಿ ಕಾವೇರಿ ನಮ್ಮ ಮುಂದಿರುವ ಏಕೈಕ ಆಯ್ಕೆ ಎಂದು ಪದೇ ಪದೇ ಕಾವೇರಿ ವಿಚಾರದಲ್ಲಿ ಖ್ಯಾತೆ ತೆಗೆಯುವ ತಮಿಳುನಾಡಿಗೆ ಡಿಕೆಶಿ ಸ್ಪಷ್ಟಪಡಿಸಿದರು.
ಸಿಎಂ ವಿಜಯ್ ಅವರು ಮೇಕೆದಾಟು ಯೋಜನೆ ರದ್ದು ಕುರಿತು ಪ್ರಧಾನಿಗೆ ಮನವಿ ಪ್ರಶ್ನೆಗೆ, ತಮಿಳುನಾಡಿನವರು ಕಳೆದ 40 ವರ್ಷಗಳಿಂದ ರಾಜಕೀಯ ಅಜೆಂಡಾ ಇಟ್ಟುಕೊಂಡಿದ್ದಾರೆ. ಅವರ ರಾಜಕೀಯದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಈ ವಿಚಾರದ ಬಗ್ಗೆ ನ್ಯಾಯಾಲಯ ನಿರ್ದೇಶನ ನೀಡಿದೆ. ಕಳೆದ ವರ್ಷ 400ಕ್ಕೂ ಹೆಚ್ಚು ಟಿಎಂಸಿ ಹೆಚ್ಚುವರಿ ನೀರು ಸಮುದ್ರ ಸೇರಿದೆ. ಅವರು ಕೆಳ ಹಂತದಲ್ಲಿ ಸಾಕಷ್ಟು ಅಣೆಕಟ್ಟು ನಿರ್ಮಾಣ ಮಾಡುತ್ತಿದ್ದು, ನಾವು ಯಾವುದಕ್ಕೂ ಆಕ್ಷೇಪ ವ್ಯಕ್ತಪಡಿಸಿಲ್ಲ. ನಮ್ಮ ಯೋಜನೆಗಳಿಗೂ ನಿಮ್ಮಿಂದ ಅಡಚಣೆ ಬೇಡ ಎಂದು ಎಚ್ಚರಿಸಿದರು.
ಮೇಕೆದಾಟು ವಿಚಾರ ಸುಪ್ರೀಂ ಕೋರ್ಟ್ ನಲ್ಲೂ ಚರ್ಚೆಯಾಗಿದೆ. ಈ ಯೋಜನೆಗೆ ನಾವು ಯಾವುದೇ ಆರ್ಥಿಕ ನೆರವಾಗಲಿ ಇತರೆ ವಿಚಾರವನ್ನು ಕೇಳುತ್ತಿಲ್ಲ. ಈ ಯೋಜನೆಯಿಂದ 400 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವುದು ಇಂಧನ ಕ್ಷೇತ್ರದಲ್ಲಿ ನಮಗೆ ಅನುಕೂಲ ಮಾಡಿಕೊಡಲಿದೆ ಎಂದು ವಿವರಿಸಿದರು.
ತಮಿಳುನಾಡು ಜೊತೆ ಚರ್ಚೆಗೆ ಸದಾ ಸಿದ್ಧ
ಯೋಜನೆಗೆ ಸಂಬಂಧಿಸಿದಂತೆ ಯಾವಾಗ ಬೇಕಾದರೂ ತಮಿಳುನಾಡು ಜೊತೆಗೆ ಕೂತು ಚರ್ಚಿಸಲು ಸಿದ್ಧ. ತಮಿಳುನಾಡು, ಕರ್ನಾಟಕದವರು ಭಾರತೀಯರು. ನಾವು ಕಾವೇರಿ ನೀರು ಕುಡಿಯಬೇಕು. ತಮಿಳುನಾಡಿನಿಂದ ಇಲ್ಲಿಗೆ ಬಂದು ವೃತ್ತಿ ಮಾಡುತ್ತಿರುವ ಅನೇಕರಿದ್ದಾರೆ. ಇಲ್ಲಿಂದ ಹೋಗಿ ಅಲ್ಲಿ ಕೆಲಸ ಮಾಡುತ್ತಿರುವವರೂ ಇದ್ದಾರೆ. ನಾವು ಅವರನ್ನು ಪ್ರತ್ಯೇಕಿಸುವುದಿಲ್ಲ. ಸಮತೋಲಿತ ಜಲಾನಯನ ನಿರ್ಮಾಣದಿಂದ ಕಷ್ಟ ಕಾಲದಲ್ಲಿ ತಮಿಳುನಾಡಿನ ಪಾಲಿನ ನೀರನ್ನು ಹರಿಸಲು ನೆರವಾಗುತ್ತದೆ. ಅತೀ ಕಡಿಮೆ ವೆಚ್ಚದಲ್ಲಿ ಯೋಜನೆ ಆಗುವ ವಿಶ್ವಾಸವಿದೆ ಎಂದು ತಿಳಿಸಿದರು.
ಕಾವೇರಿ, ಮೇಕೆದಾಟು ವಿಚಾರದಲ್ಲಿ ರಾಜ್ಯದ ಬಿಜೆಪಿ ಸಂಸದರು ಇದರ ಬಗ್ಗೆ ಹೋರಾಟ ಮಾಡಬೇಕಲ್ಲವೇ ಎಂದಾಗ, ಅವರು ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯದಿಂದ ಆಯ್ಕೆಯಾಗಿರುವ ಕಾಂಗ್ರೆಸ್, ಬಿಜೆಪಿ, ದಳ ಎಲ್ಲಾ ಸಂಸದರು ಒಗ್ಗಟ್ಟಾಗಿ ನಮ್ಮ ರಾಜ್ಯದ ಹಿತ ಕಾಪಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ತಮಿಳುನಾಡಲ್ಲಿ ಕಾಂಗ್ರೆಸ್ ಮೈತ್ರಿ ಇದ್ದು, ನಮ್ಮ ನಾಯಕರಿಗೆ ಅಗತ್ಯ ಮನವಿ ಸಹ ಮಾಡಿದ್ದೇವೆ. ಎರಡು ರಾಜ್ಯಗಳ ಹಿತ ಕಾಪಾಡಿಕೊಂಡು ಹೋಗೋಣ ಎಂದು ತಿಳಿಸಿದರು.
ಪರಿಷತ್ ಚುನಾವಣೆ: ಅಡ್ಡಮತದಾನ ಅನಗತ್ಯ
ಇಂದು ನಡೆದ ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ತಂತ್ರಗಾರಿಕೆ ಏನು ಮಾಡಿಲ್ಲ. ಎಲ್ಲರೂ ಪ್ರಜ್ಞಾವಂತರು, ಬುದ್ಧಿವಂತರಿದ್ದು, ಜನರ ಪ್ರತಿನಿಧಿಗಳಾಗಿದ್ದಾರೆ. ಅವರು ತಮ್ಮ ಸ್ವಇಚ್ಛೇ ಮೇಲೆ ಯಾರಿಗೆ ಮತ ಹಾಕಬೇಕೋ ಹಾಕಿದ್ದಾರೆ. ನಮ್ಮ ಶಾಸಕರ ಜೊತೆ ಎರಡು ದಿನ ಕಾಲ ಕಳೆದಿದ್ದೇನೆ ಹೊರತು, ಬೇರೆ ಯಾವ ತಂತ್ರಗಾರಿಕೆ ಮಾಡಿಲ್ಲ. ಸದರಿ ಚುನಾವಣೆಯಲ್ಲಿ ನಾವು ಯಾವುದೇ ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ. ಆ ಬಗ್ಗೆ ಮಾಹಿತಿಯೂ ಇಲ್ಲ. ಇದು ರಹಸ್ಯ ಮತವಾಗಿದ್ದು, ಫಲಿತಾಂಶ ಬರುವವರೆಗೂ ಕಾಯೋಣ ಎಂದು ತಿಳಿಸಿದರು.
ಒಂದು ಪಕ್ಷಕ್ಕೆ ನಾನು ಸಿಎಂ ಅಲ್ಲ
ರಾಜ್ಯದ 224 ಶಾಸಕರೂ ನನ್ನ ಜೊತೆ ಆತ್ಮೀಯರಾಗಿದ್ದಾರೆ. ನಾನು 224 ಶಾಸಕರಿಗೂ ಮುಖ್ಯಮಂತ್ರಿ. ನಾನು ಒಂದು ಪಕ್ಷಕ್ಕೆ ಮುಖ್ಯಮಂತ್ರಿ ಅಲ್ಲ. ಎಲ್ಲರೂ ನಮ್ಮ ಸಹೋದರರು ಎಂದರು. ಅಸಂಬದ್ಧ ಹೇಳಿಕೆಗಳಿಗೆಲ್ಲ ಪ್ರತಿಕ್ರಿಯೆ ನೀಡುವುದಿಲ್ಲ. ಈ ರೀತಿ ಮಾತನಾಡುವುದು ಅವರ ಮಟ್ಟಕ್ಕೆ ಸರಿಯಲ್ಲ ಅಥವಾ ಈ ಮಟ್ಟಕ್ಕೆ ಇಳಿದು ಅವರು ಮಾತನಾಡಬಾರದು. ಈ ಮಾತುಗಳು ಅವರ ಘನತೆಗೆ ಸೂಕ್ತವಾದುದಲ್ಲ. ಅವರು ತಮ್ಮ ಹಿರಿತನ ಕಾಪಾಡಿಕೊಂಡು ಹೋದರೆ ಒಳ್ಳೆಯದು ಎಂದು ಎಚ್ಡಿ ಕುಮಾರಸ್ವಾಮಿ ಕುರಿತು ತಿಳಿಸಿದರು.














Click it and Unblock the Notifications