ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಪರ ವೈಭವ್ ಸೂರ್ಯವಂಶಿ.. ಕೋಚ್ ಕೊಟ್ರು ಬಿಗ್ ಅಪ್ಡೇಟ್
Vaibhav Sooryavanshi: ಐಪಿಎಲ್ನಲ್ಲಿ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದಿದ್ದ 15 ವರ್ಷದ ವೈಭವ್ ಸೂರ್ಯವಂಶಿ ಅವರ ಅಂತಾರಾಷ್ಟ್ರೀಯ ಪದಾರ್ಪಣೆಯ ಕುರಿತು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಆರಂಭವಾಗಿದ್ದರು. ಇದೀಗ ಈ ಕುರಿತು ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಇಂಗ್ಲೆಂಡ್ ವಿರುದ್ಧದ ಎರಡನೇ ಟಿ-20 ಪಂದ್ಯಕ್ಕೂ ಮುನ್ನ ಮಾತನಾಡಿರುವ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು, 'ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರ್ಧಾರ ಅಷ್ಟು ಸರಳವಾಗಿಲ್ಲ. ಅಲ್ಲದೆ, ಸದ್ಯದ ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರಿಗೆ ಮ್ಯಾನೇಜ್ಮೆಂಟ್ ಬೆಂಬಲ ನೀಡಲಿದೆ,' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪ್ಲೇಯಿಂಗ್ 11ನಲ್ಲಿ ವೈಭವ್.. ಕೋಚ್ ಹೇಳಿದ್ದೇನು?
ಯುಕೆ ಪ್ರವಾಸದಲ್ಲಿ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದು, ಕಳೆದ ಮೂರು ಇನಿಂಗ್ಸ್ಗಳಲ್ಲಿ ಕೇವಲ 5, 0 ಮತ್ತು 1 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಮತ್ತೊಂದೆಡೆ ಅಭಿಷೇಕ್ ಶರ್ಮಾ ಒಂದು ಅರ್ಧಶತಕ ಹಾಗೂ 49 ರನ್ಗಳ ಉಪಯುಕ್ತ ಕಾಣಿಕೆ ನೀಡಿದ್ದಾರೆ. ಸ್ಯಾಮ್ಸನ್ ಅವರ ನಿರಂತರ ವೈಫಲ್ಯದಿಂದಾಗಿ ವೈಭವ್ ಸೂರ್ಯವಂಶಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ನೀಡಬೇಕೆಂಬ ಒತ್ತಾಯಗಳು ಕೇಳಿಬಂದಿದ್ದವು.
'ವೈಭವ್ ಸಿಕ್ಕಿರುವುದು ತಂಡಕ್ಕೆ ಒಳ್ಳೆಯ ಸಂಕೇತವೇ'
ಈ ಕುರಿತು ಮಾತನಾಡಿದ ಮಾರ್ಕೆಲ್, 'ನಾವು ಪ್ರಸ್ತುತ ತಂಡದಲ್ಲಿರುವ ಆಟಗಾರರ ಸಾಧನೆಯನ್ನು ಗೌರವಿಸಬೇಕಾಗುತ್ತದೆ. ಅಭಿಷೇಕ್ ಶರ್ಮಾ ಟಿ-20 ಮಾದರಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಸಂಜು ಸ್ಯಾಮ್ಸನ್ ಇತ್ತೀಚಿನ ಟಿ-20 ವಿಶ್ವಕಪ್ನಲ್ಲಿ ತಂಡದ ಪ್ರಮುಖ ಭಾಗವಾಗಿದ್ದರು ಮತ್ತು ಐಪಿಎಲ್ನಲ್ಲೂ ಅದ್ಭುತವಾಗಿ ಆಡಿದ್ದಾರೆ. ಒಬ್ಬ ತರಬೇತುದಾರನಾಗಿ ಈಗಾಗಲೇ ದೇಶಕ್ಕಾಗಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರರ ಬೆನ್ನಿಗೆ ನಿಲ್ಲುವುದು ನಮ್ಮ ಕರ್ತವ್ಯ. ಒಬ್ಬ ಯುವ ಆಟಗಾರ ತಂಡದ ಬಾಗಿಲು ತಟ್ಟುತ್ತಿದ್ದಾನೆ, ಇದು ತಂಡಕ್ಕೆ ಒಳ್ಳೆಯ ಸಂಕೇತವೇ. ಆದರೆ ಸದ್ಯಕ್ಕೆ ಇರುವ ಆಟಗಾರರನ್ನು ನಾವು ಬೆಂಬಲಿಸಲೇಬೇಕು,' ಎಂದು ಹೇಳಿದ್ದಾರೆ.
'ಬ್ಯಾಟಿಂಗ್ ಸ್ಥಾನಗಳಲ್ಲಿ ಬದಲಾವಣೆ ಸಾಧ್ಯವಿಲ್ಲ'
ಪ್ಲೇಯಿಂಗ್ 11ನ ಆಯ್ಕೆಯು ಕೇವಲ ಒಬ್ಬ ಹೊಸ ಆಟಗಾರನನ್ನು ಒಳಗೆ ತರುವುದಷ್ಟೇ ಆಗಿರುವುದಿಲ್ಲ ಎಂದು ಕೋಚ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಮೈದಾನದಲ್ಲಿ ರನ್ ಗಳಿಸುವುದು ಅತ್ಯಂತ ಮುಖ್ಯ. ಆದರೆ ಒಬ್ಬ ಆಟಗಾರನನ್ನು ತಂಡಕ್ಕೆ ತರಲು ಉಳಿದವರ ಬ್ಯಾಟಿಂಗ್ ಕ್ರಮಾಂಕವನ್ನು ಅಥವಾ ಸ್ಥಾನಗಳನ್ನು ಬದಲಾಯಿಸಲು ನಮಗೆ ಇಷ್ಟವಿಲ್ಲ. ಹಾಗಾಗಿ ಬನ್ನಿ ಸೂರ್ಯವಂಶಿಗೆ ಆಡಲು ಬಿಡಿ ಎಂದು ನೇರವಾಗಿ ಹೇಳುವಷ್ಟು ಇದು ಸುಲಭವಲ್ಲ. ಕಷ್ಟದ ಸಂದರ್ಭಗಳಲ್ಲಿ ತಂಡವನ್ನು ಗೆಲ್ಲಿಸಿರುವ ಆಟಗಾರರಿಗೆ ವಿಶ್ವಾಸ ತುಂಬುವುದು ಮುಖ್ಯವಾಗಿದೆ,' ಎಂದು ಅವರು ಹೇಳಿದ್ದಾರೆ.
ವೈಭವ್ ಆಟಕ್ಕೆ ಮಾರ್ಕೆಲ್ ಫಿದಾ
ವೈಭವ್ ಸೂರ್ಯವಂಶಿ ಅವರ ಪದಾರ್ಪಣೆ ಯಾವಾಗ ಎಂಬದನ್ನು ನಿಖರವಾಗಿ ಹೇಳದಿದ್ದರೂ, ಮಾರ್ಕೆಲ್ ಯುವ ಆಟಗಾರನ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. 15 ವರ್ಷದ ಹುಡುಗನಿಗೆ ಅಂತಾರಾಷ್ಟ್ರೀಯ ಮಟ್ಟದ ನೆಟ್ಸ್ ಅಭ್ಯಾಸದಲ್ಲಿ ಭಾಗಿಯಾಗುವುದು ಸ್ವಲ್ಪ ಆತಂಕ ತರಬಹುದು. ಆದರೆ ವೈಭವ್ ತಂಡದ ವಾತಾವರಣಕ್ಕೆ ತುಂಬಾ ಬೇಗ ಹೊಂದಿಕೊಂಡಿದ್ದಾರೆ. ನೆಟ್ಸ್ನಲ್ಲಿ ಅವರ ಬ್ಯಾಟಿಂಗ್ ಶೈಲಿ ಎಲ್ಲರನ್ನೂ ಬೆರಗುಗೊಳಿಸಿದೆ. ಅವರಿಗೆ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಅವರು ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ,' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಯುವ ವೇಗಿ ಪ್ರಿನ್ಸ್ ಯಾದವ್ ಅವರ ಬೌಲಿಂಗ್ ಪ್ರದರ್ಶನವನ್ನು ಅವರು ಕೊಂಡಾಡಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ತಂಡದ ನೆಟ್ಸ್ ಬೌಲರ್ ಆಗಿದ್ದಾಗಿನಿಂದಲೂ ಪ್ರಿನ್ಸ್ ಅವರ ಪ್ರತಿಭೆಯನ್ನು ಗಮನಿಸಿದ್ದೇನೆ ಎಂದಿರುವ ಮಾರ್ಕೆಲ್, ಗಾಯದ ಬಳಿಕ ಹರ್ಷಿತ್ ರಾಣಾ ಉತ್ತಮ ಬೌಲಿಂಗ್ ದಾಳಿ ನಡೆಸುತ್ತಿರುವುದರಿಂದ ತಂಡದ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂಗ್ಲೆಂಡ್ ಪ್ರವಾಸದ ಪಂದ್ಯಗಳಲ್ಲಿ ಹಿರಿಯ ಆಟಗಾರರ ಮೇಲೆಯೇ ನಂಬಿಕೆ ಇಡಲು ಭಾರತೀಯ ಮ್ಯಾನೇಜ್ಮೆಂಟ್ ಮುಂದಾಗಿದೆ. ಮತ್ತೊಂದೆಡೆ ಬಾಲಕ ವೈಭವ್ ಸೂರ್ಯವಂಶಿ ಅವರು ಇನ್ನೂ ಕಾಯಬೇಕು ಎನ್ನುವ ನಿಲುವು ತೆಗೆದುಕೊಂಡಿದೆ.












Click it and Unblock the Notifications