ವಿಡಿಯೋ: ಎಂಎಲ್ಸಿ ಮಗ ಮತ್ತು ಸಹಚರರಿಂದ ಅರಣ್ಯ ಅಧಿಕಾರಿ ಮೇಲೆ ಹಲ್ಲೆ
ಹೈದರಾಬಾದ್, ಆಗಸ್ಟ್ 21: ಎಂಎಲ್ಸಿ ಮಗ ಮತ್ತು ಆತನ ಸಹಚರರು ಎಂದು ಹೇಳಿಕೊಂಡ ಕೆಲವು ರಾಜಕೀಯ ಪುಡಾರಿಗಳು ಅರಣ್ಯ ಅಧಿಕಾರಿಯನ್ನು ಹಿಗ್ಗಾಮುಗ್ಗಾ ಥಳಿಸಿ ಅವರ ಕಾಲು ಹಿಡಿಯುವಂತೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ದೇಶವು ಸ್ವಾತಂತ್ರ್ಯದಿನಾಚರಣೆ ಆಚರಿಸಿಕೊಂಡ ದಿನವೇ ಈ ಅಮಾನುಷ ಘಟನೆ ನಡೆದಿದ್ದು ಆದರೆ ತಡವಾಗಿ ಬೆಳಕಿಗೆ ಬಂದಿದೆ. ಖಾಕಿ ಸಮವಸ್ತ್ರ, ಟೋಪಿ ಧರಿಸಿ ತನ್ನ ಕರ್ತವ್ಯವನ್ನು ತಾನು ಮಾಡಿದ ಅರಣ್ಯ ಅಧಿಕಾರಿಯನ್ನು ಮನಸೋಇಚ್ಛೆ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಕೃತ್ಯಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕರ್ನೂಲು ಜಿಲ್ಲೆ, ಶ್ರೀಶೈಲದ ಸುನ್ನಿಪೆಂಟದ ಸರ್ಕಾರಿ ಕಾರ್ಯಾಲಯದ ಮುಂದೆಯೇ ರಾತ್ರಿ ವೇಳೆ ಕುಡಿಯುತ್ತಾ, ದಾರಿಯಲ್ಲಿ ಹೋಗಿ ಬರುವ ಪ್ರವಾಸಿಗಳಿಗೆ ತೊಂದರೆ ಕೊಡುತ್ತಿದ್ದ ಯುವಕರ ಗುಂಪನ್ನು ಕರ್ತವ್ಯದಲ್ಲಿದ್ದ ಅರಣ್ಯ ಅಧಿಕಾರಿ ಜ್ಯೋತಿ ಸ್ವರೂಪ ಅವರು 'ಇದು ತಪ್ಪು ಇಲ್ಲಿಂದ ಹೊರಡಿರಿ' ಎಂದು ಹೇಳಿದ್ದಾರೆ.

ಇಷ್ಟಕ್ಕೇ ಉದ್ರೇಕಿತಗೊಂಡ ಕಿರಾತಕರು ಜ್ಯೋತಿ ಸ್ವರೂಪರ ಮೇಲೆ ದಾಳಿ ಮಾಡಿದ್ದಾರೆ, ದಾಳಿ ಮಾಡುವ ಮುನ್ನಾ 'ಗೃಹ ಮಂತ್ರಿ ಚಿರರಾಜಪ್ಪಗೆ ಕರೆ ಮಾಡಲಾ, ನಮ್ಮನ್ನು ಯಾರೆಂದು ತಿಳಿದಿದ್ದೀಯಾ?' ಎಂದೆಲ್ಲಾ ದರ್ಪ ತೋರಿದ್ದಾರೆ. ಅಲ್ಲದೆ ಆ ಗುಂಪಿನಲ್ಲೊಬ್ಬ ತಾನು ಎಂಎಲ್ಸಿ ಮಗನೆಂದು, ಉಳಿದವರೆಲ್ಲಾ ತನ್ನ ಸಹಚರರೆಂದು ಹೇಳಿಕೊಂಡಿದ್ದಾನೆ.
ಅಧಿಕಾರ ದರ್ಪ, ಮದ್ಯದ ಅಮಲಿನಲ್ಲಿದ್ದ ಅವರು ಅರಣ್ಯ ಅಧಿಕಾರಿಯ ಕೈಲಿ ಕಾಲು ಹಿಡಿಸಿಕೊಂಡ ಆ ಗೂಂಡಾಗಳು, ತಮ್ಮ ತಂಟೆಗೆ ಬಂದರೆ ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರೆ, ಇದೆಲ್ಲವೂ ಅರಣ್ಯ ಸಿಬ್ಬಂದಿಯ ಮುಂದೆಯೇ ನಡೆದಿದೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಈ ಬಗ್ಗೆ ಸಾಕಷ್ಟು ವಿವಾದ ಎದ್ದಿದ್ದು, ಅಧಿಕಾರಿ ಮೇಲೆ ದಾಳಿ ಮಾಡಿದ ಆರ್ವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಇವರಲ್ಲಿ ಯಾರೂ ಎಂಎಲ್ಸಿ ಮಗ ಇಲ್ಲ ಎನ್ನಲಾಗುತ್ತಿದೆ. ಆದರೆ ಯಾರಾದರೂ ರಾಜಕಾರಣಿಗಳ ಸಹಚರರಾಗಿರಬಹುದು ಎಂಬ ಬಗ್ಗೆ ಅನುಮಾನ ವ್ಯಕ್ತವಾಗಿದ್ದು ತನಿಖೆ ನಡೆಯುತ್ತಿದೆ.












Click it and Unblock the Notifications