ಭಾರತದ ಎರಡನೇ ರಾಜಧಾನಿಯಾಗಿ ಮುತ್ತಿನ ನಗರಿ ಹೈದರಾಬಾದ್?
ಹೈದರಾಬಾದ್, ನವೆಂಬರ್ 18: ಭಾರತದ ಎರಡನೇ ರಾಜಧಾನಿಯಾಗಿ ಮುತ್ತಿನ ನಗರಿ ಹೈದರಾಬಾದ್ ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಬಗ್ಗೆ ಕೇಂದ್ರ ಗೃಹ ಸಚಿವಾಲಯದ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ ಅವರು ಸ್ಪಷ್ಟನೆ ನೀಡಿದ್ದಾರೆ. ಕೇಂದ್ರ ಸರ್ಕಾರ ಮುಂದೆ ಈ ರೀತಿ ಯಾವುದೇ ಪ್ರಸ್ತಾವನೆ ಬಂದಿಲ್ಲ ಎಂದಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಆರೋಗ್ಯ, ಶಿಕ್ಷಣ ವ್ಯವಸ್ಥೆ, ನದಿಗಳ ಜೋಡಣೆ ಬಗ್ಗೆ ಹೆಚ್ಚಿನ ಚರ್ಚೆಗೆ ಆಸ್ಪದ ನೀಡಲಾಗುತ್ತದೆ. ಪ್ರತಿ ಮನೆಗೂ ನಲ್ಲಿ ಮೂಲಕ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವುದು ಮುಖ್ಯ ಯೋಜನೆಯಾಗಿದ್ದು, ಈ ಕುರಿತಂತೆ ಚರ್ಚೆಗೆ ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಕಿಶನ್ ರೆಡ್ಡಿ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ವಿಶೇಷ ಅಧಿಕಾರ ನೀಡುವ ಸಂವಿಧಾನದ ಆರ್ಟಿಕಲ್ 370 ರದ್ದುಗೊಂಡ ಬಳಿಕ ಕಣಿವೆ ರಾಜ್ಯದಲ್ಲಿ ಶಾಂತಿ, ಸೌಹಾರ್ದತೆ ನೆಲೆಸಿದೆ ಎಂದರು.

ಕಾಳೇಶ್ವರ ಏತ ನೀರಾವರಿ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ನೀಡುವ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಕಾಂಗ್ರೆಸ್ ಅಥವಾ ಬಿಜೆಪಿ ಯಾವುದೇ ಭರವಸೆ ನೀಡಿಲ್ಲ ಎಂದರು. ಪೊಲಾವರಂ ಯೋಜನೆಗೆ ರಾಷ್ಟ್ರೀಯ ಸ್ಥಾನಮಾನ ಸಿಗಲು ಮುಖ್ಯ ಕಾರಣ ಆಂಧ್ರ ಪ್ರದೇಶ ಪುನರ್ ರಚನೆ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿತ್ತು ಎಂದರು. ಕೆ ಚಂದ್ರಶೇಖರ್ ರಾವ್ ಅವರು ಕಾಳೇಶ್ವರ ಯೋಜನೆ ಬಗ್ಗೆ ಕಾಯ್ದೆ ರೂಪಿಸುವಾಗ ಉಲ್ಲೇಖಿಸಬೇಕಿತ್ತು, ಇದೇ ರೀತಿ ಹೈದರಾಬಾದ್ ನಗರವನ್ನು ದೇಶದ ಎರಡನೇ ರಾಜಧಾನಿ ಮಾಡುವಂತೆ ಇಲ್ಲಿ ತನಕ ಗೃಹ ಸಚಿವಾಲಯಕ್ಕೆ ಯಾವುದೇ ಅಧಿಕೃತ ಬೇಡಿಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಸ್ತೆ ಸಾರಿಗೆ ರಸ್ತೆ ನೌಕರರ ಮುಷ್ಕರಕ್ಕೆ ರಾಜ್ಯ ಸರ್ಕಾರವೇ ಪರಿಹಾರ ಕಂಡುಕೊಳ್ಳಬೇಕು. ಅಗತ್ಯ ಬಿದ್ದರೆ ಎರಡು ರಾಜ್ಯಗಳ ಮುಖ್ಯಮಂತ್ರಿಗಳು ಒಟ್ಟಿಗೆ ಕುಳಿತು ಈ ಸಮಸ್ಯೆ ಬಗೆಹರಿಸುವುದು ಒಳ್ಳೆಯದು. ಕೇಂದ್ರ ಸರ್ಕಾರದ ಗಮನಕ್ಕೆ ವಿಪಕ್ಷಗಳು ಈ ವಿಷಯವನ್ನು ತಂದರೆ ಮಾತ್ರ ಮಧ್ಯೆ ಪ್ರವೇಶಿಸಲು ಸಾಧ್ಯ ಎಂದು ಕಿಶನ್ ಹೇಳಿದರು.












Click it and Unblock the Notifications