ನವಲಗುಂದ ಸಮಾವೇಶ, 100 ರೈತರಿಗೆ 2500 ಪೊಲೀಸರು!
ನವಲಗುಂದ, ಆಗಸ್ಟ್, 4: ನವಲಗುಂದ ಪಟ್ಟಣದಲ್ಲಿ ರೈತರ ಮೇಲೆ ಪೊಲೀಸ್ ದೌರ್ಜನ್ಯ ಖಂಡಿಸಿ ರೈತ ಸಂಘ ಗುರುವಾರ ಏರ್ಪಡಿಸಿದ್ದ ಸಮಾವೇಶದಲ್ಲಿ ಬೆರಳೆಣಿಕೆಯಷ್ಟು ಹೋರಾಟಗಾರರು ಇದ್ದರೆ ಇವರ ಹತ್ತು ಪಟ್ಟು ಪೊಲೀಸರಿದ್ದರು.
ರೈತ ಮುಖಂಡ, ಶಾಸಕ ಪುಟ್ಟಣ್ಣಯ್ಯನವರು ಏರ್ಪಡಿಸಿದ್ದ ಸಮಾವೇಶದಲ್ಲಿ 100 ರೈತರು ಮಾತ್ರ ಪಾಲ್ಗೊಂಡಿದ್ದರು. ಆದರೆ ಪರಿಸ್ಥಿತಿ ನಿಯಂತ್ರಣಕ್ಕೆ 2500 ಪೊಲೀಸ್ ಸಿಬ್ಬಂದಿ, ಮೂವರು ಎಸ್ಪಿ, 12 ಡಿವೈಎಸ್ಪಿ, ಅರೆಸೇನಾಪಡೆ ತುಕಡಿ, ಸಿಪಿಐಗಳು ಇದ್ದರು![ಯಮನೂರಿಗೆ ಬರುವ ರಾಜಕಾರಣಿಗೆ ಸೆಗಣಿ ಎರಚುವ ಚಳವಳಿ]
ಇಡೀ ಪಟ್ಟಣವನ್ನೇ ಪೊಲೀಸರು ತಮ್ಮ ಸುಪರ್ದಿಯಲ್ಲಿ ಇಟ್ಟುಕೊಂಡಿದ್ದರು. ಡ್ರೋಣ್ ಕ್ಯಾಮರಾ ವೊಂದನ್ನು ಆಕಾಶಕ್ಕೆ ಹಾರಿ ಬಿಡಲಾಗಿತ್ತು.ಅದು ನವಲಗುಂದ ಪಟ್ಟಣದ ಸುತ್ತಮುತ್ತಲೂ ತಿರುಗುತ್ತ ಚಿತ್ರೀಕರಿಸುತ್ತಿತ್ತು.['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']
ಯಮನೂರಿನಲ್ಲಿ ಅಮಾಯಕರ ಮೇಲೆ ದೌರ್ಜನ್ಯವೆಸಗಿದ ಎಲ್ಲ ಪೊಲೀಸರನ್ನು ಅಮಾನತು ಮಾಡಬೇಕು ಮತ್ತು ಹಲ್ಲೆಗೊಳಗಾದ ಮಹಿಳೆಯರು, ರೈತರು ಹಾಗೂ ಮಕ್ಕಳಿಗೆ ಯೋಗ್ಯ ಪರಿಹಾರ ನೀಡಬೇಕೆಂದು ಶಾಸಕ ಮತ್ತು ರೈತ ಸಂಘದ ಮುಖಂಡ ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದರು.
ಮಾತು ತಪ್ಪಿದ ಗೃಹ ಇಲಾಖೆ
ಯಮನೂರಲ್ಲಿ ಪೊಲೀಸರ ದೌರ್ಜನ್ಯದ ನಂತರ ಗೃಹ ಇಲಾಖೆಯು ಯಾವುದೇ ರೀತಿಯಿಂದಲೂ ಪೊಲೀಸರನ್ನು ಅಲ್ಲಿ ಕಳಿಸುವುದಿಲ್ಲ ಎಂದು ಹೇಳಿತ್ತು. ಆದರೆ ಗುರುವಾರದ ಸಮಾವೇಶದ ಸಮಯದಲ್ಲಿ ಭಾರಿ ಸಂಖ್ಯೆಯ ಪೊಲೀಸರನ್ನು ನಿಯೋಜಿಸಿರುವುದು ಹೋರಾಟವನ್ನು ಹತ್ತಿಕ್ಕಿಯುವ ಪ್ರಯತ್ನ ಸರಕಾರ ಮಾಡುತ್ತಿದೆ ಎಂದು ಪುಟ್ಟಣ್ಣಯ್ಯ ಆರೋಪಿಸಿದರು.
ಎಲ್ಲೆಡೆ ಪರಿಶೀಲನೆ
ನವಲಗುಂದಕ್ಕೆ ಬರುವ ಪ್ರತಿಯೊಂದು ರಸ್ತೆಯಲ್ಲೂ ನಾಕಾಬಂದಿ ಮಾಡಲಾಗಿತ್ತು. ಇಡೀ ಪಟ್ಟಣದ ಐದು ಕಡೆ ನಾಕಾಬಾಂದಿ ಮಾಡಿ ಊರೊಳಗೆ ಬರುವ ಪ್ರತಿಯೊಬ್ಬರನ್ನೂ ನಿಲ್ಲಿಸಿ ಪರಿಶೀಲಿಸಿ ಕಳಿಸಲಾಗುತ್ತಿತ್ತು. ಯಾವುದೇ ವಾಹನಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ನಾಕಾಬಂದಿ ಇರುವ ಕಡೆ ಒಬ್ಬ ಸಿಪಿಐ, ಒಬ್ಬ ಪಿಎಸ್ಐ ಮತ್ತು 15 ಜನ ಪೊಲೀಸ್ ಪೇದೆಗಳನ್ನು ನಿಲ್ಲಿಸಲಾಗಿತ್ತು. ಸಾರಿಗೆ ಸಂಸ್ಥೆಯಿಂದ ಯಾವುದೇ ಬಸ್ ಗಳನ್ನು ಬಿಟ್ಟಿರಲಿಲ್ಲ. ಹೀಗಾಗಿ ನವಲಗುಂದ ಮಾರ್ಗವಾಗಿ ವಿಜಯಪುರ, ಬಾಗಲಕೋಟೆ, ಸೋಲಾಪುರ ಕಡೆಗೆ ಹೋಗುವ ಪ್ರಯಾಣಿಕರು ಪರದಾಡುವಂತಾಯಿತು.
ಅಮಾಯಕರನ್ನು ಬಿಡುಗಡೆ ಮಾಡಿ
ಮಹದಾಯಿ ಹೋರಾಟದ ಹಿನ್ನೆಲೆಯಲ್ಲಿ ಸರಕಾರ ಬಂಧಿಸಿರುವವರಲ್ಲಿ ಸಾಕಷ್ಟು ಸಂಖ್ಯೆಯ ಅಮಾಯಕರಿದ್ದಾರೆ ಇವರಲ್ಲಿ ಐಎಎಸ್ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಯೂ ಇದ್ದಾರೆ ಇವರು ಆ.7 ರಂದು ಪರೀಕ್ಷೆ ಬರೆಯಬೇಕಾಗಿದೆ ಆದ್ದರಿಂದ ಕೂಡಲೇ ಎಲ್ಲರನ್ನೂ ಬೇಷರತ್ ಆಗಿ ಬಿಡುಗಡೆಗೊಳಿಸಬೇಕೆಂದು ರೈತ ಮುಖಂಡ ಚಾಮರಸ ಮಾಲಿಪಾಟೀಲ ಹೇಳಿದ್ದಾರೆ.
ಪೊಲೀಸರನ್ನು ಅಮಾನತುಗೊಳಿಸಿ
ಅವರು ನವಲಗುಂದದಲ್ಲಿ ಏರ್ಪಡಿಸಿದ್ದ ರೈತ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು. ಗರ್ಭಿಣಿಯರನ್ನೂ ಮನೆಯಿಂದ ಹೊರಕ್ಕೆ ಎಳೆತಂದು ಅಮಾಯಕವಾಗಿ ಪೊಲೀಸರು ಹಲ್ಲೆ ಮಾಡಿದ್ದಾರೆ. ಮಕ್ಕಳು ಮಹಿಳೆಯರೆನ್ನದೇ ಎಲ್ಲರ ಮೇಲೆ ರಾತ್ರೋ ರಾತ್ರಿ ಪೊಲೀಸರು ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿದರು.
ಪರ ರಾಜ್ಯದೊಂದಿಗೆ ಮಾತನಾಡಿ
ಮಧ್ಯಂತರ ತೀರ್ಪು ಯಾವ ರೀತಿ ಬರುತ್ತದೆ ಎಂಬುದು ರಾಜ್ಯ ಸರಕಾರಕ್ಕೆ ಈಗಾಗಲೇ ಗೊತ್ತಿದೆ. ಹೀಗಾಗಿ ಅಂತಿಮ ತೀರ್ಪು ಬರುವವರೆಗೆ ಕಾಯದೇ ಕೂಡಲೇ ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತನಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಚಿಕಿತ್ಸೆ ವೆಚ್ಚ ಭರಿಸಲಿ
ಲಾಠಿ ಚಾರ್ಜ್ ನಲ್ಲಿ ಗಾಯಗೊಂಡವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಬೇಕು ಮತ್ತು ಚಿಕಿತ್ಸೆಯ ಖರ್ಚನ್ನು ಕೊಡಬೇಕು ಎಂದ ಅವರು, ಬಂಧಿತರ ವಿರುದ್ಧ ಹಾಕಿರುವ ಎಲ್ಲ ಕೇಸ್ ಗಳನ್ನ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು