ಮಾಜಿ ಮು.ಮಂ. ಜಗದೀಶ್ ಶೆಟ್ಟರ್ ಗೆ ನಿಂತ ನೆಲವೇ ಕುಸಿಯುವ ಆತಂಕ
ಹುಬ್ಬಳ್ಳಿ, ಏಪ್ರಿಲ್ 13: ಸತತವಾಗಿ 5 ಸಲ ವಾಣಿಜ್ಯ ನಗರಿ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಗೆದ್ದು ಬೀಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಈ ಬಾರಿ ಆತಂಕ ಶುರುವಾಗಿದೆ. ಈ ಬಾರಿ ಗೆಲುವು ಅಷ್ಟು ಸುಲಭದ ಮಾತಲ್ಲ ಎನ್ನುವ ಆತಂಕ ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳಲ್ಲಿ ಇಣುಕಿದೆ.
ಅಷ್ಟಕ್ಕೂ ಜಗದೀಶ್ ಶೆಟ್ಟರ್ ಗೆ ಈ ಆತಂಕ ಕಾಡಲು ಕಾರಣ ಏನು ಗೊತ್ತಾ? ಕಾಂಗ್ರೆಸ್ ನ ಸವಾಲು, ಜತೆಗೆ ಅಭಿವೃದ್ದಿ ವಿಷಯವೂ ಸೇರಿಕೊಂಡಿದೆ. ಇತರ ಮುಖ್ಯಮಂತ್ರಿಗಳ ಕ್ಷೇತ್ರದೊಂದಿಗೆ ತುಲನೆ ಮಾಡುತ್ತಿದ್ದಾರೆ ಮತದಾರರು. ಹುಬ್ಬಳ್ಳಿ- ಧಾರವಾಡದ ಸೆಂಟ್ರಲ್ ಕ್ಷೇತ್ರದಲ್ಲಿ ಮೊದಲಿನಿಂದಲೂ ಬಿಜೆಪಿ ಪ್ರಾಬಲ್ಯ ಹೊಂದಿದೆ. ಕಾಂಗ್ರೆಸ್ ಗೆ ಈ ಕ್ಷೇತ್ರ 25 ವರ್ಷದಿಂದ ಗಗನ ಕುಸುಮವಾಗಿದೆ. ಅದಕ್ಕೆ ಕಾರಣ ಜಗದೀಶ್ ಶೆಟ್ಟರ್ ಅವರ ಸತತ ಗೆಲುವು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ
ಆದರೆ, ಈ ಸಲ ಕ್ಷೇತ್ರ ಕೈ ತಪ್ಪುವ ಸಣ್ಣ ಆತಂಕ ಶೆಟ್ಟರ್ ಅವರಲ್ಲಿ ಆವರಿಸಿದೆ. ಅದಕ್ಕೆ ಕಾರಣ ಏನೆಂದರೆ, ಈ ಕ್ಷೇತ್ರದಲ್ಲಿ ನಿರೀಕ್ಷಿತ ಅಭಿವೃದ್ಧಿ ಆಗಿಲ್ಲ ಎನ್ನುವ ಅಸಮಾಧಾನ. ರಾಜ್ಯದ ಬೇರೆ ಜಿಲ್ಲೆಗಳಿಂದ ಶಾಸಕರಾಗಿ ಆಯ್ಕೆ ಆಗಿ, ಆ ನಂತರ ಮುಖ್ಯಮಂತ್ರಿ ಆದವರು ಮಾಡಿದ ಕೆಲಸಗಳೊಂದಿಗೆ ಇಲ್ಲಿನ ಮತದಾರರು ಶೆಟ್ಟರ್ ಕೆಲಸಗಳನ್ನು ತುಲನೆ ಮಾಡುತಿದ್ದಾರೆ.

ಹಾಗೆ ಆ ಕ್ಷೇತ್ರಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಅಭಿವೃದ್ಧಿ ಹೇಳಿಕೊಳ್ಳುವ ಮಟ್ಟಿಗೆ ಆಗಿಲ್ಲ. ಹೀಗಾಗಿ ಶೆಟ್ಟರ್ ಅವರಲ್ಲಿ ಆತಂಕ ಆರಂಭವಾಗಿದೆ. ಇನ್ನು ಕಳೆದ ಬಾರಿ ಚುನಾವಣೆಯ ಫಲಿತಾಂಶವನ್ನು ನೋಡುವುದಾದರೆ, ಜಗದೀಶ್ ಶೆಟ್ಟರ್ 58,201 ಮತಗಳನ್ನು ಪಡೆದು, ಗೆದ್ದು ಬೀಗಿದರು.
ಆದರೆ, ಕಾಂಗ್ರೆಸ್ ನಿಂದ ಡಾ. ಮಹೇಶ್ ನಾಲವಾಡ ಕೊನೆಯ ಕ್ಷಣದಲ್ಲಿ ದಿಢೀರನೆ ಕಾಂಗ್ರೆಸ್ ಟಿಕೆಟ್ ಪಡೆದು, ಶೆಟ್ಟರ್ ಗೆ ಪೈಪೋಟಿ ನೀಡಿ, 40,447 ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಮಹೇಶ್ ನಾಲವಾಡ ಸೇರಿದಂತೆ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ನಾಗರಾಜ್ ಛೆಬ್ಬಿ ಸಹ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದಾರೆ.
ಆದರೆ, ಕಾಂಗ್ರೆಸ್ ಟಿಕೆಟ್ ಯಾರಿಗೆ ಎನ್ನುವ ಗೊಂದಲದಲ್ಲಿ ಮತದಾರರಿದ್ದಾರೆ. ಆದರೆ ಈಗಾಗಲೇ ಶೆಟ್ಟರ್ ತಮ್ಮ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಸಿಆರ್ ಎಫ್ ಅನುದಾನ ಹೊರತುಪಡಿಸಿ ಕ್ಷೇತ್ರದಲ್ಲಿ ಹೇಳಿಕೊಳ್ಳುವ ಅಭಿವೃದ್ಧಿ ಆಗದ ಕಾರಣ ಶೆಟ್ಟರ್ ಯಾವ ವಿಷಯಗಳನ್ನು ಮುಂದಿಟ್ಟುಕೊಂಡು ಮತದಾರರ ಬಳಿ ಹೊಗುತ್ತಾರೆ ಎಂಬುದು ಇಲ್ಲಿ ಯಕ್ಷ ಪ್ರಶ್ನೆ.
ಸತತ 5 ಸಾರಿ ಗೆದ್ದು ಬೀಗಿರುವ ಜಗದೀಶ್ ಶೆಟ್ಟರ್ ಗೆ ಮತ್ತೆ ವಿಜಯದ ಮಾಲೆ ಬೀಳಬಹುದಾ ಅಥವಾ ಅಭಿವೃದ್ದಿ ನೆಪವನ್ನು ಒಡ್ಡಿ ಪರ್ಯಾಯ ನಾಯಕನಿಗೆ ಮಣೆ ಹಾಕುತ್ತಾರಾ ಎನ್ನುವುದು ಚುನಾವಣೆ ಫಲಿತಾಂಶದಲ್ಲಿ ಉತ್ತರ ಸಿಗಲಿದೆ.












Click it and Unblock the Notifications