ತಾನು ಕಲಿತ ಸರಕಾರಿ ಶಾಲೆ ಏಳ್ಗೆಗಾಗಿ 5 ಲಕ್ಷ ಕೊಡುಗೆ ನೀಡಿದವರ ಸ್ಫೂರ್ತಿಗಾಥೆ
ಹಾವೇರಿ, ಡಿಸೆಂಬರ್ 27: ತಾನು ಓದಿದ ಶಾಲೆಗೆ ಕೈಲಾದ ಸಹಾಯ ಮಾಡಬೇಕು ಎಂದು ಯೋಚಿಸುವವರು ಹಲವರು ಮಂದಿ. ಆದರೆ ಅದನ್ನು ಕಾರ್ಯರೂಪಕ್ಕೆ ತರುವವರು ಕೆಲವರು. ಹಾವೇರಿ ತಾಲೂಕಿನ ದೇವಗಿರಿಯ ಸರಕಾರಿ ಶಾಲೆಗೆ ಅಂಥ ವಿದ್ಯಾರ್ಥಿಯೊಬ್ಬರು ಸಿಕ್ಕಿದ್ದಾರೆ. ಅವರ ಹೆಸರು ನಾಗಪ್ಪ ವೀರಪ್ಪ ಬಕ್ಕಣ್ಣನವರ್.
ತುಂಬ ಅನುಕೂಲಸ್ಥ ಕುಟುಂಬದ ಹಿನ್ನೆಲೆಯವರೇನಲ್ಲ ನಾಗಪ್ಪ. ಶಾಲೆ ಕಲಿಯುವಾಗಲೂ ಕೃಷಿ ಕೂಲಿ ಕೆಲಸಗಾರರಾಗಿ ದುಡಿಯುತ್ತಾ ಓದು ಮುಗಿಸಿದವರು. ಅಷ್ಟೇ ಅಲ್ಲ, ಕಟ್ಟಡ ನಿರ್ಮಾಣ, ಸೆಕ್ಯೂರಿಟಿ ಗಾರ್ಡ್ ಹೀಗೆ ತನ್ನ ನಿತ್ಯದ ಖರ್ಚಿಗೆ ದಾರಿ ಸಿಗುವ ಯಾವ ಗೌರವಕ್ಕೆ ಚ್ಯುತಿ ಬಾರದ ಕೆಲಸವನ್ನು ಸಹ ಬಿಟ್ಟವರಲ್ಲ.
ಹೀಗೆ ಕಷ್ಟಪಟ್ಟು ಮಾಸ್ಟರ್ ಆಫ್ ಲೈಬ್ರರಿ ಅಂಡ್ ಇನ್ಫರ್ಮೇಷನ್ ಸೈನ್ಸ್ ಮತ್ತು ಪಿಎಚ್.ಡಿ ಮುಗಿಸಿದ್ದಾರೆ. ಸದ್ಯಕ್ಕೆ ಬೆಂಗಳೂರಿನ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ನಲ್ಲಿ ಉದ್ಯೋಗ. ಇಂಥ ನಾಗಪ್ಪನವರು ತಮ್ಮ ಊರಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿ ಶಾಲೆಗಾಗಿ ಸ್ವಂತ ಹಣ ಐದು ಲಕ್ಷ ರುಪಾಯಿ ಖರ್ಚು ಮಾಡಿದ್ದಾರೆ.

ಸ್ಮಾರ್ಟ್ ಕ್ಲಾಸ್, ಸಿಸಿ ಟಿವಿ ಕ್ಯಾಮೆರಾ, ಪ್ರಿಂಟರ್, ಕಟ್ಟಡ ದುರಸ್ತಿ, ಒಳಾಂಗಣ ಇತ್ಯಾದಿ ಅನುಕೂಲಕ್ಕಾಗಿ ತಮ್ಮ ಶ್ರಮದ ಪಾಲು ಧಾರೆ ಎರೆದಿದ್ದಾರೆ. ಈ ಎಲ್ಲ ವ್ಯವಸ್ಥೆಗೆ ಈಚೆಗೆ ಚಾಲನೆ ಕೂಡ ನೀಡಲಾಗಿದೆ. ರೇವಣ್ಣಸಿದ್ದೇಶ್ವರ ಕೇದಾರನಾಥ ಸ್ವಾಮೀಜಿ, ಬಲ್ಳಾರಿಯ ವಿರೂಪಾಕ್ಷಪ್ಪ ಹಾಗೂ ನಾಗಪ್ಪನವರ ತಾಯಿ ಕಣ್ಣವ್ವ ಕೂಡ ಭಾಗಿಯಾಗಿದ್ದರು.

ನಾಗಪ್ಪ ತಮ್ಮದೇ ಒಂದು ಸಂಸ್ಥೆ ಮಾಡಿಕೊಂಡು, ಶನಿವಾರ-ಭಾರವಾರಗಳಂದು ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಮಾಹಿತಿ ನೀಡಲು ಸೆಷನ್ಸ್ ಗಳನ್ನು ನಡೆಸುತ್ತಾರೆ. ಇಂಥವರ ಸಂಖ್ಯೆ ಸಮಾಜದಲ್ಲಿ ಸಾವಿರವಾಗಲಿ. ತಾವು ಪಡೆದದ್ದನ್ನು ವಾಪಸ್ ಸಮಾಜಕ್ಕೆ ನೀಡುವವರಿಗೆ ಸ್ಫೂರ್ತಿ ಸಿಗಲಿ ಎಂಬುದು ನಮ್ಮ ಉದ್ದೇಶ.












Click it and Unblock the Notifications