ಚುನಾವಣೆ ಮುಗಿಯುವವರೆಗೆ ರೋಹಿಣಿ ಸಿಂಧೂರಿ ವರ್ಗಾವಣೆ ಅಸಾಧ್ಯ
ಹಾಸನ, ಮಾರ್ಚ್ 21: ಸರ್ಕಾರದ ವರ್ಗಾವಣೆ ಆದೇಶ ಪ್ರಶ್ನಿಸಿ ಸಿಎಟಿ ಮೊರೆ ಹೋಗಿದ್ದ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ತಾತ್ಕಾಲಿಕ ನೆಮ್ಮದಿ ದೊರೆತಿದೆ. ಸೂಕ್ತ ಕಾರಣಗಳಿಲ್ಲದೆ ವರ್ಗಾವಣೆ ಆದೇಶ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಸಿಎಟಿಯು ಏಪ್ರಿಲ್ 26ರ ವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಏಪ್ರಿಲ್ 26ರ ಒಳಗೆ ರೊಹಿಣಿ ಸಿಂಧೂರಿ ಅವರು ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಲು ಸಿಎಟಿ ಆದೇಶಿಸಿದ್ದು, ನಿಖರ ಕಾರಣ ನೀಡಿ ಏಪ್ರಿಲ್ 26ರ ನಂತರ ಸರ್ಕಾರದ ಮುಖ್ಯಕಾರ್ಯದರ್ಶಿ ಅವರು ಪುನಃ ವರ್ಗಾವಣೆ ಆದೇಶ ಹೊರಡಿಸಬಹುದಾಗಿದೆ ಎಂದು ಸಿಎಟಿ ಹೇಳಿದೆ.
ಆದರೆ ಏಪ್ರಿಲ್ 26ರರಷ್ಟರಲ್ಲಿ ಚುನಾವಣೆ ನೀತಿಸಂಹಿತೆ ಜಾರಿ ಆಗುವ ಸಾಧ್ಯತೆ ಹೆಚ್ಚಿರುವ ಕಾರಣ ಆ ಸಮಯದಲ್ಲಿ ಮುಖ್ಯಕಾರ್ಯದರ್ಶಿ ಅವರು ಯಾವುದೇ ವರ್ಗಾವಣೆ ಆದೇಶ ಹೊರಡಿಸುವಂತಿರುವುದಿಲ್ಲ, ಚುನಾವಣಾ ಆಯೋಗವು ಅದಕ್ಕೆ ಅವಕಾಶ ನೀಡುವುದಿಲ್ಲ ಹಾಗಾಗಿ ರೋಹಿಣಿ ಸಿಂಧೂರಿ ಅವರು ಕನಿಷ್ಟ ಚುನಾವಣೆ ಮುಗಿಯುವ ವರೆಗೂ ಹಾಸನದ ಜಿಲ್ಲಾಧಿಕಾರಿಯಾಗಿ ಮುಂದುವರೆಯುವ ಸಾಧ್ಯತೆ ದಟ್ಟವಾಗಿದೆ.

ಚುನಾವಣೆ ನಂತರ ಸರ್ಕಾರ ಬದಲಾದಲ್ಲಿ ರೋಹಿಣಿ ಅವರ ವರ್ಗಾವಣೆ ಆದೇಶವೇ ರದ್ದಾಗಿ ಅವರು ಹಾಸನದಲ್ಲೇ ಸೇವೆ ಮುಂದುವರೆಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಏನೇ ಆಗಲಿ ರೋಹಿಣಿ ಸಿಂಧೂರಿ ಅವರು ತಮ್ಮ ದಿಟ್ಟ ನಡೆಯಿಂದ ಸರ್ಕಾರವನ್ನು ಎದುರು ಹಾಕಿಕೊಂಡು ತೋರಿದ ಛಾತಿ ಮೆಚ್ಚುಗೆ ಗಳಿಸಿದೆ.
ಶ್ರವಣಬೆಳಗೊಳದ ಮಹಾಮಜ್ಜನ ಕಾರ್ಯಕ್ರಮದ ಕೆಲವು ಗುತ್ತಿಗೆಗಳಿಗೆ ಸಂಬಂಧಪಟ್ಟಂತೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಮಂಜು ಹಾಗೂ ರೋಹಿಣಿ ಸಿಂಧೂರಿ ಅವರ ನಡುವೆ ಭಿನ್ನಾಭಿಪ್ರಾಯ ಮೂಡಿ ಕೆ.ಮಂಜು ಅವರ ಒತ್ತಡಕ್ಕೆ ಮಣಿದು ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲು ಸರ್ಕಾರ ಪ್ರಯತ್ನಿಸಿತ್ತು ಎನ್ನಲಾಗಿತ್ತು. ಆದರೆ ವರ್ಗಾವಣೆ ಆದೇಶದ ವಿರುದ್ಧ ಹೋರಾಡಿದ ರೋಹಿಣಿ ಇದೀಗ ಜಯ ಪಡೆದಿದ್ದಾರೆ.












Click it and Unblock the Notifications