ಬಿಜೆಪಿ ಧರ್ಮಗಳ ನಡುವೆ ಬಿಜೆಪಿ ಸಂಘರ್ಷ ತರುತ್ತಿದೆ: ಕುಮಾರಸ್ವಾಮಿ
ಹಾಸನ, ಜುಲೈ 4 : "ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಭಿವೃದ್ಧಿ ಕಾರ್ಯ ಬಿಟ್ಟು ವಿವಾದ ಸೃಷ್ಟಿಸುವಲ್ಲಿ ಕಾಲ ಕಳೆಯುತ್ತಿದೆ. ಧರ್ಮಗಳ ನಡುವೆ ಸಂಘರ್ಷ ಹುಟ್ಟುಹಾಕುತ್ತಿದೆ. ಬೇರೆ ಪಕ್ಷಗಳ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡದೆ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿದೆ" ಎಂದು ಸಕಲೇಶಪುರ ಜೆಡಿಎಸ್ ಶಾಸಕ ಎಚ್. ಕೆ. ಕುಮಾರಸ್ವಾಮಿ ಆರೋಪಿಸಿದ್ದಾರೆ.
ಸಕಲೇಶಪುರ ತಾಲೂಕಿನ ಹಾನುಬಾಳ್ ಹೋಬಳಿಯ ಖಾಸಗಿ ರೆಸಾರ್ಟ್ವೊಂದರಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ಬಿಜೆಪಿ ರಾಜ್ಯದಲ್ಲಿ ಅಧಿಕಾರ ಹಿಡಿದ ನಂತರ ರಾಜ್ಯದಲ್ಲಿ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ, ಕೇವಲ ಭಾವನಾತ್ಮಕ ವಿಚಾರಗಳನ್ನು ಎತ್ತಿ ಹಿಡಿದು ಧರ್ಮ ಧರ್ಮಗಳ ನಡುವೆ ಕಂದಕ ಮೂಡಿಸುತ್ತಿದ್ದಾರೆ" ಎಂದರು.
"ಅದರಲ್ಲೂ ಬಿಜೆಪಿ ಸರ್ಕಾರ ಮಲೆನಾಡು ಭಾಗವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಬಜೆಟ್ನಲ್ಲಿ ಕಾಫಿಬೆಳೆಗಾರರಿಗೆ ಘೋಷಣೆ ಮಾಡಿದ 10 ಹೆಚ್ಪಿ ಒಳಗಿನ ಪಂಪ್ಸೆಟ್ ಬಳಕೆದಾರರಿಗೆ ಉಚಿತ ವಿದ್ಯುತ್ ಕೊಡುಗೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮಕೈಗೊಂಡಿಲ್ಲ. ಸ್ಥಳೀಯ ಸಂಸ್ಥೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಂಪೂರ್ಣವಾಗಿ ಮರೆತಿದ್ದು, ಗ್ರಾಮ ಪಂಚಾಯಿತಿಗಳಿಗೆ ಯಾವುದೇ ರೀತಿಯಲ್ಲಿ ಹೆಚ್ಚಿನ ಅನುದಾನ ದೊರಕುತ್ತಿಲ್ಲ. ಅತಿ ಹೆಚ್ಚು ಕಾಫಿ ಬೆಳೆಗಾರರು ಇರುವ ಚಿಕ್ಕಮಗಳೂರು, ಕೊಡಗು, ಜಿಲ್ಲೆಗಳ ಜನ ಹೇಗಿದ್ದರು ಬಿಜೆಪಿ ಪರ ಮತದಾನ ಮಾಡುತ್ತಾರೆಂದು ಈ ಭಾಗಗಳನ್ನು ಹಗುರವಾಗಿ ಪರಿಗಣಿಸಲಾಗುತ್ತಿದೆ" ಎಂದು ಆರೋಪಿಸಿದರು.

"ಜಿಲ್ಲಾ ಉಸ್ತುವಾರಿ ಮಂತ್ರಿಗಳು ಜಿಲ್ಲೆ ಹಾಗೂ ತಾಲೂಕಿನಲ್ಲಿ ಪ್ರಗತಿ ಪರಿಶೀಲನೆ ಸಭೆಮಾಡಿ ಸುಮಾರು ಒಂದೂವರೆ ವರ್ಷ ಆಗುತ್ತಾ ಬಂದಿದೆ. ಅರಣ್ಯ ಕಾಯಿದೆ ಸೆಕ್ಷನ್ (4) ಹೆಸರಿನಲ್ಲಿ ಅರಣ್ಯ ಇಲಾಖೆ ಹಾನುಬಾಳ್ ಹೋಬಳಿಯಲ್ಲಿ ಬೆಳೆಗಾರರನ್ನು ಒಕ್ಕಲೆಬ್ಬಿಸಲು ಹೊರಟಿದ್ದು ಖಂಡನೀಯವಾಗಿದೆ. ತಾಲೂಕಿನ ಎಲ್ಲಾ ಸಮಸ್ಯೆಗಳ ವಿರುದ್ದ ಜೆಡಿಎಸ್ ಹೋರಾಟ ನಡೆಸುತ್ತಿದ್ದು ಆದರೆ ಸರ್ಕಾರದಿಂದ ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಯಾವುದೆ ನೆರವು ದೊರಕುತ್ತಿಲ್ಲ. ತಾಲೂಕಿನಲ್ಲಿ ಪಕ್ಷ ಸದೃಡವಾಗಿದ್ದು ಪಕ್ಷದ ಘಟಕಗಳನ್ನು ಶೀಘ್ರದಲ್ಲಿ ಪುನರ್ ರಚಿಸಲಾಗುತ್ತದೆ" ಎಂದರು.
ಸಭೆಯಲ್ಲಿ ಕೆಲವು ಕಾರ್ಯಕರ್ತರು ಮಾತನಾಡಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಾಲೂಕಿನಲ್ಲಿ ಜೆಡಿಎಸ್ ಕಾರ್ಯಕರ್ತರ ಯಾವುದೇ ಕೆಲಸಗಳು ಆಗುತ್ತಿಲ್ಲ. ಪಕ್ಷದ ಮುಖಂಡರು ಕಾರ್ಯಕರ್ತರ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ಇದೇ ರೀತಿ ಮುಂದುವರೆದರೆ ಪಕ್ಷಕ್ಕೆ ವ್ಯಾಪಕ ಹಾನಿಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.












Click it and Unblock the Notifications