ಮೊಬೈಲ್ ಟವರ್ ಏರಿ ಕುಳಿತ ಕಳ್ಳತನದ ಆರೋಪಿ: ನ್ಯಾಯಾಧೀಶರು ಸ್ಥಳಕ್ಕೆ ಬರುವಂತೆ ಪಟ್ಟು
ಧಾರವಾಡ, ಜನವರಿ 17: ವ್ಯಕ್ತಿಯೊಬ್ಬ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಜ್ಯುಬಿಲಿ ವೃತ್ತದ ಬಳಿ ಇರುವ ಮೊಬೈಲ್ ಟವರ್ ಏರಿರುವ ಈ ವ್ಯಕ್ತಿ ಟವರ್ನ ತುತ್ತ ತುದಿಗೆ ಹೋಗಿ ಕುಳಿತಿದ್ದಾನೆ.
ಮಂಗಳವಾರ ಮಧ್ಯಾಹ್ನನದ ವೇಳೆ ಈ ವ್ಯಕ್ತಿ ಮೊಬೈಲ್ ಟವರ್ ಏರಿ ಕುಳಿತಿದ್ದು, ಮೊದಲು ಈತನನ್ನು ಮಾನಸಿಕ ಅಸ್ವಸ್ಥನಿರಬಹುದು ಎಂದು ಶಂಕಿಸಲಾಗಿತ್ತು. ವ್ಯಕ್ತಿಯ ರಕ್ಷಣೆಗೆ ಮುಂದಾದ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡದವರು ಹರಸಾಹಸ ಪಟ್ಟಿದ್ದಾರೆ.
ಜ. 18ಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ನೇರ ಸಂದರ್ಶನ
ಮೊಬೈಲ್ ಟವರ್ ಏರಿ ಕುಳಿತಿದ್ದ ವ್ಯಕ್ತಿಯನ್ನು ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡದವರು ರಕ್ಷಣೆ ಮಾಡಿ ಕೆಳಗಿಳಿಸಿದ್ದಾರೆ. ಈ ರೀತಿ ಟವರ್ ಏರಿ ಕುಳಿತ ವ್ಯಕ್ತಿ ಧಾರವಾಡ ಮೂಲದ ಜಾವೇದ್ ಎಂದು ತಿಳಿದುಬಂದಿದೆ.
ಜಾವೇದ್ ಕಳ್ಳತನ ಪ್ರಕರಣದ ಆರೋಪಿ ಎಂದು ಗೊತ್ತಾಗಿದ್ದು, ಈತ ನಗರದ ಹಲವು ಕಡೆಗಳಲ್ಲಿ ಕಳ್ಳತನ ಮಾಡಿದ್ದಾನೆ. ಅಲ್ಲದೇ ಈತನ ಮೇಲೆ ಅರೆಸ್ಟ್ ವಾರೆಂಟ್ ಸಹ ಇದೆ ಎನ್ನಲಾಗಿದೆ. ಹೀಗಾಗಿ ಈತ ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಬರುವವರೆಗೂ ನಾನು ಟವರ್ ಬಿಟ್ಟು ಕೆಳಗೆ ಇಳಿದು ಬರುವುದಿಲ್ಲ ಎಂದು ಮೂರು ಗಂಟೆಗಳ ಕಾಲ ಪಟ್ಟು ಹಿಡಿದು ಅಲ್ಲೇ ಕುಳಿತಿದ್ದನು.
ಆತನ ರಕ್ಷಣೆಗೆ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ರಕ್ಷಣಾ ತಂಡದ ಇಬ್ಬರು ಸಿಬ್ಬಂದಿ ಟವರ್ ಏರಿ ಆತನಿಗೆ ನೀರು ಹಾಗೂ ಊಟವನ್ನು ಕೊಟ್ಟು ಕೆಳಗಿಳಿಯುವಂತೆ ಸೂಚನೆ ನೀಡಿದ್ದರು. ಆದರೆ, ಆ ವ್ಯಕ್ತಿ ಊಟ ಕೆಳಗೆ ಎಸೆದು ಕೇವಲ ನೀರು ಮಾತ್ರ ಕುಡಿದು ಕೆಳಗೆ ಇಳಿದು ಬರುವುದಿಲ್ಲ ಎಂದು ಹುಚ್ಚಾಟ ನಡೆಸಿದ್ದನು. ಅಲ್ಲದೇ ತನಗೆ ಸಿಗರೇಟ್ ಕೊಡುವಂತೆ ಬೇಡಿಕೆ ಇಟ್ಟಿದ್ದನು ಎನ್ನಲಾಗಿದೆ.
ಸತತ ಮೂರು ಗಂಟೆಗಳ ಬಳಿಕ ರಕ್ಷಣಾ ತಂಡದ ಸಿಬ್ಬಂದಿ ಆತನ ಮನವೊಲಿಸಿ ಸುರಕ್ಷಿತವಾಗಿ ಕೆಳಗಿಳಿಸಿ, ಆತನನ್ನು ಉಪನಗರ ಠಾಣೆ ಪೊಲೀಸರ ವಶಕ್ಕೆ ನೀಡಿದ್ದಾರೆ.