ಸಚಿವರಿಗೆ ತಮ್ಮ ಬಲಗೈ ಬಂಟನೇ ಎದುರಾಳಿ ಆಗಿಬಿಟ್ಟನಾ...?
ಧಾರವಾಡ, ಏಪ್ರಿಲ್ 18 : ಸಚಿವರು ಮಾತು ಕೊಟ್ಟು ಮೋಸ ಮಾಡಿದ್ದಾರೆ. ಆದರೆ ನಾನು ಮಾತ್ರ ಇಟ್ಟ ಹೆಜ್ಜೆ ಹಿಂದಕ್ಕಿಡುವುದಿಲ್ಲ. ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಹಾಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಶಿವಾನಂದ ಕರಿಗಾರ ಸವಾಲು ಹಾಕಿದ್ದಾರೆ.
ಅಂದಹಾಗೆ ಇಲ್ಲಿ ಶಿವಾನಂದ ಕರಿಗಾರ ಆರೋಪ ಮಾಡುತ್ತಿರುವುದು ಯಾರ ಮೇಲೆ? ಅವರು ಮೋಸ ಮಾಡಿದ್ದು ಏನಕ್ಕೆ ಎಂಬುದನ್ನು ತಿಳಿಯಬೇಕಾದರೆ ಮುಂದೆ ಓದಿ...

ಬಿಜೆಪಿಗೆ ಸೆಡ್ಡು ಹೊಡೆದ್ರು
ಶಿವಾನಂದ ಕರಿಗಾರ ಕಳೆದ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿ, ಜನಪ್ರತಿನಿಧಿಯಾಗಿ ಆಯ್ಕೆಯಾದ ಬಲಿಷ್ಠ ರಾಜಕಾರಣಿ. ಬಿಜೆಪಿ ಸಹಕಾರದಿಂದ ಜಿಪಂ ಉಪಾಧ್ಯಕ್ಷ ಸ್ಥಾನ ಸಹ ಅಲಂಕರಿಸಿದರು.
ಆದರೆ, ಅದೇ ಬಿಜೆಪಿಗೆ ಸೆಡ್ಡು ಹೊಡೆದ ಶಿವಾನಂದ ಕರಿಗಾರ, ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಅಣತಿಯಂತೆ ಹತ್ಯೆಯಾದ ಯೋಗೀಶಗೌಡ ಪತ್ನಿಯನ್ನು ಬಿಜೆಪಿಗೆ ಸೇರಿಸಿದರು.
ಇದಕ್ಕೆ ಬದಲಾಗಿ ಶಿವಾನಂದ ಕರಿಗಾರಗೆ ನವಲಗುಂದ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಕೊಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಭರವಸೆ ನೀಡಿದ್ರಂತೆ. ಆದರೆ, ಮಲ್ಲಮ್ಮನನ್ನ ಪಕ್ಷಕ್ಕೆ ಸೇರಿಸಿಕೊಳ್ಳುವ ಮೂಲಕ ಒಂದೇ ಏಟಿನಲ್ಲಿ ಎರಡು ಹಕ್ಕಿಯನ್ನ ಹೊಡೆದಿದ್ದಾರೆ.
ಯೋಗೀಶಗೌಡ ಹತ್ಯೆ ಪ್ರಕರಣದಿಂದ ಪಾರಾಗಲು, ತಾವು ಪ್ರತಿನಿಧಿಸುವ ಧಾರವಾಡ ಗ್ರಾಮೀಣ ಭಾಗದ ಕುರುಬರ ಓಟುಗಳನ್ನ ಸೆಳೆಯಲು ಸಚಿವರು ನನಗೆ ಮೋಸ ಮಾಡಿದ್ದಾರೆ ಎಂದು ಕರಿಗಾರ ಆರೋಪಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಟಿಕೆಟ್ ರಾಜಕೀಯ
ಆರೋಪ ತಳ್ಳಿ ಹಾಕಿದ ಸಚಿವರು
ಸಚಿವ ವಿನಯ್ ಕುಲಕರ್ಣಿ ಶಿವಾನಂದ ಅವರ ಆರೋಪ ತಳ್ಳಿ ಹಾಕಿದ್ದಾರೆ. ಶಿವಾನಂದ ಕಾಂಗ್ರೆಸ್ ಸೇರುವಾಗ ಯಾವುದೇ ಕಂಡಿಷನ್ ಹಾಕಿಲ್ಲ. ಹೀಗಾಗಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ.
ಇನ್ನು ಪಕ್ಷದ ವರಿಷ್ಠರು ಗೆಲ್ಲುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ. ಹೀಗಾಗಿ ಇದರಲ್ಲಿ ನನ್ನದೇನು ಪಾತ್ರವಿಲ್ಲ ಎಂದು ಕೈ ತೊಳೆದುಕೊಂಡಿದ್ದಾರೆ.
ಈ ಮಾತನ್ನು ಕೇಳಿದ ಶಿವಾನಂದ ತಮ್ಮ ಕ್ಷೇತ್ರದ ಗುರು ಹಿರಿಯರ ಮಾತಿನಂತೆ ಬಂಡಾಯವಾಗಿ ನಿಲ್ಲುವುದಾಗಿ ಘೋಷಿಸಿದ್ದಾರೆ.
ಅದೇನೆ ಇರಲಿ, ರಾಜಕೀಯ ಎಂದ ಮೇಲೆ ಭರವಸೆಗಳು ನೀಡುವುದು ಮಾಮೂಲಿ. ಹೀಗಾಗಿ ಯಾರು ಯಾವಾಗ ತಿರುಗಿ ಬೀಳುತ್ತಾರೆ ತಿಳಿಯದ ವಿಷಯ.
ಅದರಲ್ಲೂ ನವಲಗುಂದ ಕ್ಷೇತ್ರದಲ್ಲಿ ಕಳೆದ 10 ವರ್ಷದಿಂದ ಕಾಂಗ್ರೆಸ್ ಮಾಯವಾಗಿದೆ. ಇದರ ಮಧ್ಯೆ ಬಂಡಾಯದ ಬಿಸಿ ಬೇರೆ. ಇಲ್ಲಿ ಮತ್ತೆ ಕೈ ಮೇಲುಗೈ ಸಾಧಿಸುವುದು ಕಷ್ಟಸಾಧ್ಯವೇ ಸರಿ.












Click it and Unblock the Notifications