ಗೃಹ ಇಲಾಖೆ ಸಚಿವರ ಕೈ ತಪ್ಪಿದೆ; ವೀರಪ್ಪ ಮೊಯ್ಲಿ
ಧಾರವಾಡ, ಮೇ 10: "ಇದು ಗೃಹ ಸಚಿವರ ಜವಾಬ್ದಾರಿ. ಪಿಎಸ್ಐ ನೇಮಕಾತಿ ನಡೆಸುವುದು ಅವರ ಇಲಾಖೆ. ಅದು ಅವರ ಹತೋಟಿಯಲ್ಲಿ ಇಲ್ಲ, ಭ್ರಷ್ಟಾಚಾರದ ಒಂದೊಂದೇ ಪ್ರಕರಣ ಹೊರ ಬರುತ್ತಿವೆ" ಎಂದು ಕಾಂಗ್ರೆಸ್ ಹಿರಿಯ ನಾಯಕ ವೀರಪ್ಪ ಮೊಯ್ಲಿ ಹೇಳಿದರು.
ಮಂಗಳವಾರ ಧಾರವಾಡದಲ್ಲಿ ಮಾತನಾಡಿದ ಅವರು, "ಮೊಸರಲ್ಲಿ ಕಲ್ಲು ಹುಡುಕುವುದು ಬೇಡ. ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರ ಮೊಸರಿನಲ್ಲಿ ಕಲ್ಲು ಹುಡುಕುವುದು ಮಾಡುತ್ತಿದೆ, ಈ ರೀತಿ ಮಾಡಬಾರದು" ಎಂದರು.
"ಅಧಿಕಾರ ನಡೆಸುವವರು ಜವಾಬ್ದಾರಿಯುತವಾಗಿ ಅಧಿಕಾರ ನಡೆಸಬೇಕಾಗುತ್ತದೆ. ಕಾನೂನಿನಲ್ಲಿ ಎಲ್ಲರಿಗೂ ಸರಿಸಮಾನವಾದ ನ್ಯಾಯ ಒದಗಿಸಬೇಕಾಗುತ್ತದೆ" ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ವೀರಪ್ಪ ಮೊಯ್ಲಿ ತಿಳಿಸಿದರು.

"ಮುಂದೆ ಅಧಿಕಾರವನ್ನು ಪಡೆಯುವ ಹಂಬಲದಿಂದ ಗೊಂದಲ ಸೃಷ್ಟಿಸುತ್ತಿದೆ. ಅಂದರೆ ಶಾಂತವಾದ ನೀರನ್ನು ಕಲಕುವಂತಹ ಕೆಲಸ ಯಾರು ಮಾಡಬಾರದು. ಇದರಿಂದ ಸರ್ಕಾರ ನಡೆಸುವುದಕ್ಕೆ ಆಗುವುದಿಲ್ಲ. ಶಾಂತಿ, ಸಮಾಧಾನ ಸ್ಥಾಪನೆ ಮಾಡುವುದಕ್ಕೆ ಈ ಸರ್ಕಾರದಿಂದ ಆಗುವುದಿಲ್ಲ" ಎಂದು ಟೀಕಿಸಿದರು.
"ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಲೋಚನೆ ಮಾಡಬೇಕಾಗುತ್ತದೆ. ಕಲಹ ಮುಖ್ಯಮಂತ್ರಿ ಅಂತ ಹೆಸರು ಪಡೆಯಬಾರದು. ಆದ್ದರಿಂದ ಗೊಂದಲವನ್ನು ಹತೋಟಿಗೆ ತರಬೇಕು" ಎಂದು ಸಲಹೆ ನೀಡಿದರು.
ಹತೋಟಿಯಲ್ಲಿಇಲ್ಲದ ಸರ್ಕಾರ; "ಮಂತ್ರಿಗಳು, ಶಾಸಕರು ಇವರ ಹತೋಟಿಯಲ್ಲಿಲ್ಲ ಅಥವಾ ಅವರ ಪಕ್ಷ ಹತೋಟಿಯಲ್ಲಿಲ್ಲ. ಪಕ್ಷದ ಬೆಂಬಲಿಗರು, ಸಂಘಟನೆಗಳಾದ ಆರ್ಎಸ್ಎಸ್, ಬಜರಂಗದಳ ಇವು ಇವರ ಹತೋಟಿಯಲ್ಲಿಲ್ಲ ಎಂದರೆ ಮುಖ್ಯಮಂತ್ರಿ ತುಂಬಾ ಆಲೋಚನೆ ಮಾಡಬೇಕಾಗುತ್ತದೆ" ಎಂದರು.

"ಮತ ಕೇಂದ್ರಿತ ರಾಜಕಾರಣ ಅವರ ತಲೆಯಲ್ಲಿದೆ. ಎಲ್ಲಾ ಬಾರಿ ಜನರನ್ನು ಮರಳುಮಾಡಲು ಸಾಧ್ಯವಾಗಲ್ಲ. ಒಂದು ಸಾರಿ ಚುನಾವಣೆ ಗೆಲ್ಲಬಹುದು. ಮತ್ತೆ ಅದರಂತೆ ರಾಷ್ಟ್ರದಲ್ಲಿ ಚುನಾವಣೆ ಗೆಲ್ಲುತ್ತೇವೆ ಅಂದರೆ ಸಾಧ್ಯವಾಗಲ್ಲ" ಎಂದು ಭವಿಷ್ಯ ನುಡಿದರು.
ಹೆಚ್ಚಿನ ಜವಾಬ್ದಾರಿ ಇದೆ; "ಪಿಎಸ್ಐ ಹಗರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಜವಾಬ್ದಾರಿ ಹೆಚ್ಚಿನ ರೀತಿಯಲ್ಲಿ ಕಂಡು ಬರುತ್ತದೆ. ನಾನು ಸಿಎಂ ಇದ್ದಾಗ ಅನೇಕ ಪಿಎಸ್ಐ ನೇಮಕಾತಿಗಳು ನಡೆದಿವೆ. ಒಂದೂ ಸುಳ್ಳು ಬಂದಿಲ್ಲ ಏನಾದರೂ ಇದ್ದರೇ ಅಲ್ವಾ ಬರೋದು?. ಆಯಾ ಇಲಾಖೆಯ ಸಚಿವರೇ ಆಯಾ ಇಲಾಖೆಯ ಜವಾಬ್ದಾರರು. ಇದರಲ್ಲಿ ಉನ್ನತ ಪೊಲೀಸ್ ಅಧಿಕಾರಿಗಳ ಅಮಾನತು ಆಗಿಲ್ಲ, ಸಚಿವರು ಯಾರೂ ಅವರ ಪದವಿ ಬಿಟ್ಟು ಕೊಟ್ಟಿಲ್ಲ" ಎಂದರು.












Click it and Unblock the Notifications