ಧಾರವಾಡದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 7 ಕೆಜಿ ಚಿನ್ನ ವಶ
ಧಾರವಾಡ, ಏಪ್ರಿಲ್ 10: ಅಕ್ರಮವಾಗಿ ಸಾಗಿಸಲ್ಪಡುತ್ತಿದ್ದ ಸುಮಾರು 2.55ಕೋಟಿ ರೂಪಾಯಿ ಮೌಲ್ಯದ 7 ಕೆಜಿ 722 ಗ್ರಾಂ ಬಂಗಾರವನ್ನು ಸೋಮವಾರ ಕಲಘಟಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಳ್ನಾವರ ಸಮೀಪದ ಕಡಬಗಟ್ಟಿ ಚೆಕ್ ಪೋಸ್ಟ್ ನಲ್ಲಿ ವಶಪಡಿಸಿಕೊಳ್ಳಲಾಗಿದೆ.
ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ಈ ಅಪಾರ ಪ್ರಮಾಣದ ಬಂಗಾರವನ್ನು ಗೋವಾದಿಂದ ಹುಬ್ಬಳ್ಳಿಯ ಕಡೆಗೆ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ಚಿನ್ನವನ್ನು ಮಧ್ಯಾಹ್ನ 12.30ರ ಸುಮಾರಿಗೆ ಕಡಬಗಟ್ಟಿ ಎಸ್.ಎಸ್.ಟಿ.ಚೆಕ್ ಪೋಸ್ಟ್ ವಶಪಡಿಸಿಕೊಳ್ಳಲಾಗಿದೆ.
ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಈ ಚಿನ್ನ ಸಾಗಿಸುತ್ತಿರಬಹುದು ಎಂಬ ಸಂಶಯದ ಮೇರೆಗೆ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರ ನೇತೃತ್ವದ ತಂಡ ದಾಳಿ ನಡೆಸಿ ಚಿನ್ನವನ್ನು ವಶಪಡಿಸಿಕೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪಣಜಿಯ ಪ್ರತೀಕ್, ಅವರ ತಂದೆ ಪ್ರವೀಣ ನಾರ್ವೆಕರ್ ಹಾಗೂ ರಾಜಸ್ಥಾನದ ವಿಕ್ರಮಸಿಂಗ್ ದೇವಿಸಿಂಗ್ ರಾಠೋಡ ಎಂಬುವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.