ಹೊನ್ನಾಳಿಯಲ್ಲಿ ಪ್ರಾಂಶುಪಾಲ-ಉಪನ್ಯಾಸಕರ ಸಂಘರ್ಷ: ರೇಣುಕಾಚಾರ್ಯ ತರಾಟೆ
ದಾವಣಗೆರೆ, ಡಿಸೆಂಬರ್, 06: ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಸಂಘರ್ಷಕ್ಕೆ ಬೇಸತ್ತು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದ ಘಟನೆ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಶಾಸಕ ಎಂ. ಪಿ. ರೇಣುಕಾಚಾರ್ಯ ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ಬುದ್ಧಿವಾದ ಹೇಳಿ ತರಗತಿ ನಡೆಯುವಂತೆ ಅನುವು ಮಾಡಿಕೊಟ್ಟರು.
ಕಳೆದ ಮೂರು ಬಾರಿ ಇಂತಹದ್ದೇ ಘಟನೆ ನಡೆದಿದೆ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ನಡುವಿನ ಸಮನ್ವಯ ಕೊರತೆಯಿಂದ ಸಮಸ್ಯೆ ಆಗಿದೆ. ಇದರಿಂದ ಮಕ್ಕಳು ಸರಿಯಾದ ಪಾಠ ಸಿಗದೇ ಪರದಾಡಿದ್ದರು. ಇದೀಗ ಮತ್ತೆ ಸಂಘರ್ಷ ಶುರುವಾದ ಕಾರಣ ತರಗತಿ ಬಿಟ್ಟು ಕಾಲೇಜಿನ ಆವರಣದಲ್ಲಿ ತರಗತಿಗೆ ಹೋಗದೇ ಪ್ರತಿಭಟನೆಗೆ ಮುಂದಾದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಕಾಲೇಜಿಗೆ ಆಗಮಿಸಿದ ರೇಣುಕಾಚಾರ್ಯ ಅವರು ಉಪನ್ಯಾಸಕರು ಹಾಗೂ ಪ್ರಾಂಶುಪಾಲರಿಗೆ ತರಾಟೆಗೆ ತೆಗೆದುಕೊಂಡರು.
ಚಿಕ್ಕನಹಳ್ಳಿಯಲ್ಲಿ ರಾಜಕಾಲುವೆಗೆ ಸೇತುವೆ ನಿರ್ಮಿಸದ ದಾವಣಗೆರೆ ಪಾಲಿಕೆ, ಶಾಲಾ ಮಕ್ಕಳ ಪರದಾಟ
ಈ ವೇಳೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ರೇಣುಕಾಚಾರ್ಯ, ನಾನು ಹುಲಿನೂ ಅಲ್ಲ, ಸಿಂಹನೂ ಅಲ್ಲ. ಈ ಕ್ಷೇತ್ರದ ಸೇವಕ. ರಾಜಕೀಯ ಉದ್ದೇಶದಿಂದ ಇಲ್ಲಿಗೆ ಬಂದಿಲ್ಲ. ಶಿಕ್ಷಣದಿಂದ ವಂಚಿತನಾದವನು ನಾನು. ಪಿಯುಸಿಯಷ್ಟೇ ಓದಿದ್ದೇನೆ ಎಂದು ಮಕ್ಕಳಿಗೆ ಹೇಳಿದರು.
ಹಲವು ಕೋರ್ಸ್ಗಳನ್ನು ತಂದಿದ್ದೇನೆ
ಈ ಕಾಲೇಜಿನಲ್ಲಿ ಕೇವಲ ಕಲಾ ವಿಭಾಗ ಮಾತ್ರ ಇತ್ತು. ಬಸವರಾಜ್ ಹೊರಟ್ಟಿ ಅವರು ಶಿಕ್ಷಣ ಸಚಿವರಾಗಿದ್ದಾಗ ಬೆನ್ನುಬಿಡದೇ ಹಲವು ಕೋರ್ಸ್ ಇಲ್ಲಿಗೆ ಮಂಜೂರಾತಿ ಮಾಡಿಸಿಕೊಂಡು ಬಂದಿದ್ದೇನೆ ಎಂದು ತಿಳಿಸಿದರು. ಶ್ರೀಮಂತರ ಮಕ್ಕಳು ಯಾರೂ ಈ ಕಾಲೇಜಿಗೆ ಬರುವುದಿಲ್ಲ. ಆರ್ಥಿಕವಾಗಿ, ಹಿಂದುಳಿದವರು, ಬಡವರು ಮಾತ್ರ ಈ ಕಾಲೇಜಿನಲ್ಲಿ ಓದುತ್ತಿದ್ದಾರೆ. ನಿಮಗೆ ನ್ಯಾಯ ಸಿಗಬೇಕು ಎಂದರು.
ದಾವಣಗೆರೆಯಲ್ಲಿ ಮಾಜಿ ಸಚಿವ ಮಲ್ಲಿಕಾರ್ಜುನ್ ಕಣಕ್ಕೆ, ಬಿಜೆಪಿ ಅಭ್ಯರ್ಥಿ ಬಗ್ಗೆ ಕುತೂಹಲ
ನಾನು ಆದೇಶ ಮಾಡಲು ಇಲ್ಲಿಗೆ ಬಂದಿಲ್ಲ
ಪ್ರಾಂಶುಪಾಲರು, ಉಪನ್ಯಾಸಕರ ನಡುವೆ ಸಂಘರ್ಷ ಇದ್ದು, ಅದನ್ನು ಸರಿಪಡಿಸುತ್ತೇನೆ. ಬೇರೆ ಕಡೆ ಹೊರಟವನು ಇಲ್ಲಿಗೆ ಬಂದಿದ್ದೇನೆ. ಒಳಗಡೆ ಕುಳಿತು ಮಾತನಾಡೋಣ. ನಾನು ಆದೇಶ ಮಾಡಲು ಬಂದಿಲ್ಲ, ಅವಮಾನನೂ ಮಾಡುವುದಿಲ್ಲ. ಶಿಕ್ಷಣ ನೀಡುವವರು ದೇವರ ಸ್ಥಾನದಲ್ಲಿರುತ್ತಾರೆ. ತಂದೆ, ತಾಯಿ, ಶಿಕ್ಷಕರು, ಉಪನ್ಯಾಸಕರು ನಮ್ಮ ನಿಜವಾದ ಗುರುಗಳಾಗಿದ್ದಾರೆ. ಭಿನ್ನಾಭಿಪ್ರಾಯ ಇದ್ದರೆ ಅದನ್ನು ಬೀದಿಗೆ ತಂದರೆ ನಾನು ಸಹಿಸುವುದಿಲ್ಲ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುತ್ತೇನೆ. ಮಕ್ಕಳಿಗಿಂತ ಯಾರೂ ದೊಡ್ಡವರಿಲ್ಲ ಎನ್ನುತ್ತಿದ್ದಂತೆ ವಿದ್ಯಾರ್ಥಿಗಳು ಚಪ್ಪಾಳೆ ತಟ್ಟಿ ಶಾಸಕರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ಸಂಘರ್ಷಕ್ಕೆ ಎಡೆಮಾಡಿಕೊಡಬಾರದು
ಉಪನ್ಯಾಸಕರು ಗುಂಪುಗಾರಿಕೆ ಮಾಡಬಾರದು. ಸಾಮರಸ್ಯ ಇರಬೇಕು. ನಿಮ್ಮಲ್ಲಿ ಸಂಘರ್ಷಕ್ಕೆ ಎಡೆಮಾಡಿಕೊಡಬಾರದು. ನಿಮಗೆ 40ರಿಂದ 50 ಸಾವಿರ ರೂಪಾಯಿ ಸಂಬಳ ಬರುತ್ತಿದ್ದು, ನೀವು ಹೀಗೆ ಮಾಡಿದರೆ ಶಿಕ್ಷಣ ವಂಚಿತರಾಗುವುದು ಮಕ್ಕಳು. ನನಗೂ ಲಕ್ಷಗಟ್ಟಲೇ ಸಂಬಳ ಬರುತ್ತದೆ. ಶಿಕ್ಷಣ ಕೊಡಲು ನನಗೆ ಆಗುತ್ತಾ. ನಾನು ಯಾರು ಕೆಟ್ಟವರು ಎಂದು ಹೇಳುವುದಿಲ್ಲ, ಈಗಲೇ ತರಗತಿ ನಡೆಸಿ. ಮತ್ತೆ ನಾನೇ ಬಂದು ವೀಕ್ಷಿಸುತ್ತೇನೆ. ಆಗ ಯಥಾಸ್ಥಿತಿಯಲ್ಲಿ ತರಗತಿಗಳು ನಡೆಯಬೇಕು. ನೊಟೀಸ್ ಸೇರಿದಂತೆ ಏನೇ ಸಮಸ್ಯೆ ಇದ್ದರೂ ಕುಳಿತು ಚರ್ಚಿಸಿ ಅರ್ಧಗಂಟೆಯಲ್ಲಿ ಬಗೆಹರಿಸೋಣ ಎಂದು ತಿಳಿಹೇಳಿದರು.
ಮಕ್ಕಳ ಶಿಕ್ಷಣದ ಬಗ್ಗೆ ಯೋಚನೆ ಮಾಡಿ
ಸಣ್ಣಪುಟ್ಟ ಸಮಸ್ಯೆಗಳು ಬೀದಿ ರಂಪಾಟ ಆಗಬಾರದು. ಮೆಮೋ ಬಂದಿರುವವರು ಬಿಟ್ಟು ಉಳಿದವರು ಕ್ಲಾಸ್ ತೆಗೆದುಕೊಳ್ಳಿ ಎಂದರೂ ತೆಗೆದುಕೊಂಡಿಲ್ಲ ಎಂಬುದು ಪ್ರಾಂಶುಪಾಲರ ವಾದ ಆಗಿದೆ. ಮಕ್ಕಳ ಭವಿಷ್ಯ ಏನಾಗಬೇಕು, ಕುಳಿತು ಮಾತನಾಡೋಣ. ಮಕ್ಕಳಿಗೆ ತೊಂದರೆ ಆದರೆ ನನ್ನಿಂದ ಸಹಿಸಲು ಆಗುವುದಿಲ್ಲ. ಎಂದಿನಂತೆ ತರಗತಿ ನಡೆಯಬೇಕು ಎಂದು ಎಚ್ಚರಿಕೆ ನೀಡಿದರು.