ಜಗಳೂರಲ್ಲಿ ಕೊರೊನಾ ಹತೋಟಿಗೆ ಬಂದಿದ್ದು ಹೇಗೆ?
ದಾವಣಗೆರೆ, ಜೂನ್ 09; ದಾವಣಗೆರೆ ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಆದರೆ ಜಗಳೂರು ತಾಲೂಕಿನಲ್ಲಿ ಹೆಮ್ಮಾರಿಯ ಹರಡುವಿಕೆ ತುಂಬಾ ಕಡಿಮೆಯಾಗಿದೆ. ಇಲ್ಲಿ ಪಾಸಿಟಿವಿಟಿ ದರ ಶೇಕಡಾ 10ಕ್ಕಿಂತ ಕೆಳಗಿದ್ದು, ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಅತ್ಯಂತ ಕಡಿಮೆ ಸೋಂಕಿತರಿದ್ದಾರೆ. ಮಾತ್ರವಲ್ಲ ಸಾವಿನ ಪ್ರಮಾಣವೂ ತುಂಬಾನೇ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ಸೇಫ್ ಝೋನ್ನಲ್ಲಿದೆ.
ಜಗಳೂರು ತಾಲೂಕು ಜಿಲ್ಲೆಯ ಉಳಿದ ತಾಲೂಕುಗಳಿಗೆ ಹೋಲಿಸಿದರೆ ಕೊರೊನಾ ಎರಡನೇ ಅಲೆಯ ಹೊಡೆತಕ್ಕೆ ಸಿಲುಕಿಲ್ಲ. ತಾಲೂಕಿನಲ್ಲಿ ಒಟ್ಟು 171 ಹಳ್ಳಿಗಳಿದ್ದು, ಸುಮಾರು 36 ಗ್ರಾಮ ಕೊರೊನಾ ಮುಕ್ತವಾಗಿವೆ. ಈ ಗ್ರಾಮಗಳಲ್ಲಿ ಇಲ್ಲಿಯವರೆಗೆ ಒಂದೇ ಒಂದು ಕೊರೊನಾ ಪಾಸಿಟಿವ್ ವರದಿಯಾಗಿಲ್ಲ. ಕಲ್ಯಾಣ ದೇವರಪುರ, ಹೊಸಕೋಡು, ಸಿದ್ದಹಳ್ಳಿ ಸೇರಿ 15 ಗ್ರಾಮಗಳಲ್ಲಿ ಕೊರೊನಾ ಸೋಂಕು ಹರಡಿದ್ದರೂ ಎಲ್ಲಿಯೂ ಹತ್ತಕ್ಕಿಂತ ಹೆಚ್ಚು ಪ್ರಕರಣ ಒಂದೇ ದಿನದಲ್ಲಿ ಬಂದಿಲ್ಲ.
ದಾವಣಗೆರೆ; ಹೇಳಿದಂತೆ ಲಸಿಕೆ ತರಿಸಿದ ಶಾಮನೂರು ಶಿವಶಂಕರಪ್ಪ
ತಾಲೂಕಿನಲ್ಲಿ ಕೇವಲ 192 ಸಕ್ರಿಯ ಪ್ರಕರಣಗಳಿವೆ.1228 ಒಟ್ಟು ಪ್ರಕರಣಗಳು. ಈ ಪೈಕಿ 1036 ಜನರು ಗುಣಮುಖರಾಗಿದ್ದಾರೆ. ಮೂವರು ಕೊರೊನಾಕ್ಕೆ ಬಲಿಯಾಗಿದ್ದರೆ, ಸೋಂಕಿನ ಗುಣಲಕ್ಷಣಗಳಿದ್ದ 20 ಮಂದಿ ಬೇರೆ ಬೇರೆ ಕಾಯಿಲೆಗೆ ತುತ್ತಾಗಿ ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ.
ದಾವಣಗೆರೆ: ಅಗತ್ಯ ವಸ್ತುಗಳ ಖರೀದಿಗೆ 3 ದಿನಗಳ ಅನುಮತಿ
ಸೋಂಕು ಕಡಿಮೆಯಾಗಲು ಕಾರಣ?
ಹೊನ್ನಾಳಿ, ಚನ್ನಗಿರಿ, ದಾವಣಗೆರೆಯಲ್ಲಿ ದಿನೇ ದಿನೇ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಜಗಳೂರಿನಲ್ಲಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಜನರ ಗಂಟಲುದ್ರವ ಪಡೆದ ಪರೀಕ್ಷಿಸಿದ್ದಾರೆ. ಸೋಂಕು ಕಾಣಿಸಿಕೊಂಡಾಕ್ಷಣ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಟೆಸ್ಟ್ ಮಾಡಿಸಿ ಬಿಗಿ ಕ್ರಮ ಕೈಗೊಳ್ಳಲಾಗಿದೆ.
ಹೋಂ ಐಸೋಲೇಷನ್ಗೆ ಯಾರಿಗೂ ಅವಕಾಶ ನೀಡಲಾಗಿಲ್ಲ. ಸೋಂಕು ಬಂದಾಕ್ಷಣ ಕೋವಿಡ್ ಕೇರ್ ಸೆಂಟರ್ ಹಾಗೂ ಆಸ್ಪತ್ರೆಗೆ ದಾಖಲಿಸುವ ಮೂಲಕ ಎಚ್ಚರಿಕೆ ವಹಿಸಲಾಗಿದೆ. ವ್ಯಾಕ್ಸಿನ್ ನೀಡಿಕೆ ಚುರುಕುಗೊಳಿಸಲಾಗಿದೆ. ತಹಶೀಲ್ದಾರ್, ಗ್ರಾಮ ಪಂಚಾಯತಿ ಸದಸ್ಯರ ಶ್ರಮ ಫಲ ಕೊಟ್ಟಿದೆ.
ಸಾವಿನ ಸಂಖ್ಯೆಯೂ ಕಡಿಮೆ
ಮೊದಲ ಅಲೆ ಹಾಗೂ ಎರಡನೇ ಅಲೆಯಲ್ಲಿ ಜಗಳೂರಿನಲ್ಲಿ ಕೊರೊನಾದಿಂದ ಮೃತಪಟ್ಟಿರುವುದು ಒಟ್ಟು 20 ಮಂದಿ. ಒಟ್ಟು 72,850 ಮಂದಿಗೆ ಕೊರೊನಾ ಪರೀಕ್ಷೆ ಮಾಡಿದ್ದು, 2397 ಪಾಸಿಟಿವ್ ಬಂದಿದ್ದರೆ, 2345 ಗುಣಮುಖರಾಗಿರುವುದು ವಿಶೇಷ. ಸಾವಿನ ಸಂಖ್ಯೆಯಲ್ಲೂ ತುಂಬಾ ಕಡಿಮೆ ಇರುವುದು ಸಮಾಧಾನಕರ ಸಂಗತಿ.
ಪರೀಕ್ಷೆಗೆ ಹೋದಾಗ ಕಲ್ಲು ಎಸೆದ ಜನರು
"ಗ್ರಾಮೀಣ ಪ್ರದೇಶಗಳಲ್ಲಿ ಟೆಸ್ಟ್ ಗೆ ಹೋದಾಗ ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತೆಯರ ಮೇಲೆ ಕಲ್ಲು ಎಸೆಯುವುದು, ಗಲಾಟೆ ಮಾಡುವುದು ಹಾಗೂ ಮನೆಯ ಬಾಗಿಲು ಹಾಕಿದ ವಿಚಾರ ಗಮನಕ್ಕೆ ಬಂದಿದೆ. ಇದೆಲ್ಲವನ್ನೂ ಎದುರಿಸಿ ಪರೀಕ್ಷೆ ಮಾಡಲಾಗುತ್ತಿದೆ. ಜನರು ಸಹಕರಿಸಬೇಕು. ಟೆಸ್ಟ್ ಗೆ ಜನರು ಸ್ಪಂದಿಸದಿರುವುದು ಹೊರತುಪಡಿಸಿದರೆ ಸೋಂಕಿನ ಪ್ರಮಾಣ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಮೈ ಮರೆಯುವಂತಿಲ್ಲ'' ಎನ್ನುತ್ತಾರೆ ಜಗಳೂರು ತಾಲೂಕು ಆರೋಗ್ಯಾಧಿಕಾರಿ ನಾಗರಾಜ್.
ಸೀಲ್ ಡೌನ್ ಮಾಡಲಾಗಿಲ್ಲ
"10 ಇಲ್ಲವೇ 20 ಕೇಸ್ ಬಂದರೆ ಸೀಲ್ ಡೌನ್ ಮಾಡಲಾಗುತ್ತದೆ. ಯಾವ ಗ್ರಾಮದಲ್ಲೂ ಇಷ್ಟೊಂದು ಸೋಂಕು ಏಕಕಾಲದಲ್ಲಿ ಬಂದಿಲ್ಲ. ಹಾಗಾಗಿ ಎಲ್ಲೂ ಸೀಲ್ ಡೌನ್ ಮಾಡಲಾಗಿಲ್ಲ. ಒಟ್ಟಿನಲ್ಲಿ ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಹೆಮ್ಮಾರಿ ನರ್ತನ ಮುಂದುವರಿದಿದ್ದರೆ, ಜಗಳೂರು ಮಾತ್ರ ಸದ್ಯಕ್ಕೆ ಕೊರೊನಾದಿಂದ ಸ್ವಲ್ಪ ಮಟ್ಟಿಗೆ ದೂರವಿದೆ. ಜನರು ನಮ್ಮೊಂದಿಗೆ ಸಹಕರಿಸಬೇಕು ಎಂದಿದ್ದಾರೆ" ನಾಗರಾಜ್.
Recommended Video