ಜಗಳೂರು ಬಿಜೆಪಿ ಶಾಸಕರಿಗೆ ಬಿಗ್ ರಿಲೀಫ್ ಕೊಟ್ಟ ಹೈಕೋರ್ಟ್
ದಾವಣಗೆರೆ, ಜೂನ್ 09 : ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್. ವಿ. ರಾಮಚಂದ್ರಗೆ ಕರ್ನಾಟಕ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ್ದಾರೆ ಎಂದು ಸಲ್ಲಿಕೆಯಾಗಿದ್ದ ಚುನಾವಣಾ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಎಚ್. ಪಿ. ರಾಜೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ಪೀಠ ನಡೆಸಿತ್ತು. ಅರ್ಜಿಯ ತೀರ್ಪನ್ನು ಕಾಯ್ದಿರಿಸಿತ್ತು. ಈಗ ತೀರ್ಪು ಪ್ರಕಟಗೊಂಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ಜಾತಿ, ಮತ, ಧರ್ಮ, ಬಣ್ಣ, ಭಾಷೆ ನೋಡಿ ಕೊರೊನಾ ಬರಲ್ಲ: ಮೋದಿ
ಎಸ್. ವಿ. ರಾಮಚಂದ್ರ 2018ರ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ಪರಿಶಿಷ್ಟ ವರ್ಗ ಮೀಸಲು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 78,948 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದರು.
ಮಡಿಕೇರಿಯ upsc ಸ್ಪರ್ಧಾಕಾಂಕ್ಷಿಗೆ ಇಂಗ್ಲಿಷ್ ನಲ್ಲಿ ಜಾತಿ ಪ್ರಮಾಣಪತ್ರ ನಿರಾಕರಣೆ
ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿ ಎಸ್. ವಿ. ರಾಮಚಂದ್ರ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಅವರ ಸದಸ್ಯತ್ವವನ್ನು ಅಸಿಂಧುಗೊಳಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು. ಅರ್ಜಿ ಸಲ್ಲಿಸಿದ್ದ ಎಚ್. ಪಿ. ರಾಜೇಶ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ನಕಲಿ ಜಾತಿ ಪ್ರಮಾಣಪತ್ರದಿಂದ ಸರ್ಕಾರಿ ನೌಕರಿ ಪಡೆದವರಿಗೆ ಕಾದಿದೆ ಸಂಕಷ್ಟ
ಅರ್ಜಿಯಲ್ಲಿ ಏನಿತ್ತು?
ಜಗಳೂರು ಕ್ಷೇತ್ರ ಪರಿಶಿಷ್ಟ ವರ್ಗ (ಎಸ್ಟಿ)ಗೆ ಮೀಸಲಾಗಿದೆ. ಎಸ್. ವಿ. ರಾಮಚಂದ್ರ ಅವರ ತಂದೆ ದಿ. ವೀರಪ್ಪ ಮರಾಠ ಸಮುದಾಯಕ್ಕೆ ಸೇರಿದವರು. ಪತ್ನಿ ಕೆಂಚಮ್ಮ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು. ರಾಮಚಂದ್ರ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿದರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಅವರು ವಾಲ್ಮೀಕಿ ಜನಾಂಗಕ್ಕೆ ಸೇರಿಲ್ಲ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
ಆಯ್ಕೆಯನ್ನು ಅಸಿಂಧುಗೊಳಿಸಿ
ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಜಗಳೂರು ಕ್ಷೇತ್ರದಿಂದ ಆಯ್ಕೆಯಾಗಿರುವ ಎಸ್. ವಿ. ರಾಮಚಂದ್ರ ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಎಂದು ಎಚ್. ಪಿ. ರಾಜೇಶ್ ಅರ್ಜಿಯಲ್ಲಿ ಮನವಿ ಮಾಡಿದ್ದರು. ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನ್ಯಾಯಾಲಯದಲ್ಲಿ ನಡೆದ ವಾದ
ಎಸ್. ವಿ. ರಾಮಚಂದ್ರ ಪರವಾಗಿ ವಾದ ಮಂಡನೆ ಮಾಡಿದ್ದ ವಕೀಲ ಜಿ. ಆರ್. ಗುರುಮಠ, "ದಾವಣಗೆರೆ ಜಿಲ್ಲಾ ಜಾತಿ ಪ್ರಮಾಣಪತ್ರದ ಸಿಂಧುತ್ವ ಪರಿಶೀಲನಾ ಸಮಿತಿ ರಾಮಚಂದ್ರ ವಾಲ್ಮೀಕಿ ಜನಾಂಗಕ್ಕೆ ಸೇರಿದವರು ಎಂದು ಪ್ರಮಾಣ ಪತ್ರ ನೀಡಿದೆ. ಆದ್ದರಿಂದ, ಈ ಅರ್ಜಿಯ ವಿಚಾರಣೆ ನಡೆಸುವ ಅಗತ್ಯವಿಲ್ಲ" ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಜಗಳೂರು ಕ್ಷೇತ್ರದ ಫಲಿತಾಂಶ
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಎಸ್. ವಿ. ರಾಮಚಂದ್ರ 78,948 ಮತಗಳನ್ನು ಪಡೆದು ಜಯಗಳಿಸಿದ್ದರು. ಕಾಂಗ್ರೆಸ್ನ ಎಚ್. ಪಿ. ರಾಜೇಶ್ 49,727 ಮತಗಳನ್ನು ಪಡೆದು ಎರಡನೇ ಸ್ಥಾನಗಳಿಸಿದ್ದರು. ಜೆಡಿಎಸ್ನ ಬಿ. ದೇವೇಂದ್ರಪ್ಪ 13,401 ಮತಗಳನ್ನು ಪಡೆದಿದ್ದರು.