Vani Vilasa Sagara Dam: ವಾಣಿ ವಿಲಾಸ ಸಾಗರ ಜಲಾಶಯದಿಂದ ಈ 17 ಕೆರೆಗಳಿಗೆ ನೀರು ಹರಿಸೋದು ಯಾವಾಗ?
Vani Vilasa Sagara Dam: ಹಿರಿಯೂರು ತಾಲೂಕಿನ ವಾಣಿ ವಿಲಾಸ ಸಾಗರ ಜಲಾಶಯದಿಂದ ಜವನಗೊಂಡನಹಳ್ಳಿ ಹೋಬಳಿಯ ಗಾಯಿತ್ರಿ ಜಲಾಶಯ ಸೇರಿದಂತೆ 17ಕೆರೆಗಳಿಗೆ ನೀರು ಹರಿಸದಿದ್ದರೆ ಗಾಯಿತ್ರಿ ಡ್ಯಾಂನಿಂದ ರೈತರೊಂದಿಗೆ ಶ್ರೀಗಳ ನಡಿಗೆ ವಿಧಾನಸೌಧದ ಕಡೆಗೆ ಎಂದು ವನಕಲ್ಲು ಮಲ್ಲೇಶ್ವರ ಮಠದ ಪೀಠಾಧ್ಯಕ್ಷರಾದ ಡಾ.ಬಸವ ರಮಾನಂದ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಸಿದರು.
ತಾಲೂಕಿನ ಜವನಗೊಂಡನಹಳ್ಳಿ ಹೋಬಳಿಯ ಗಣೇಶ ದೇವಾಲಯ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನೀರಿಗಾಗಿ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ, ಸತ್ಯಾಗ್ರಹ 15ನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿಗೆ ಬೆಂಬಲ ವ್ಯಕ್ತಪಡಿಸಿ, ಪಂಜಿನ ಮೆರವಣಿಗೆ ನಡೆಸಿ ನಂತರ ಮಾತನಾಡಿದರು.

ರೈತರು ನೀರಿಗಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು 15 ದಿನಗಳು ಕಳೆದಿವೆ. ಸರ್ಕಾರ ಇದನ್ನು ಸೂಕ್ಷ್ಮವಾಗಿ ಪರಿಗಣಿಸಬೇಕಿದೆ. ಕಲ್ಲುವಳ್ಳಿ ಭಾಗವಾಗಿರುವ ಈ ಹೋಬಳಿಯು ಅಂತ್ಯಂತ ಹಿಂದುಳಿದ ಪ್ರದೇಶವಾಗಿದ್ದು, ನೀರಿನ ಅಭಾವ ಹೆಚ್ಚಾಗಿದೆ. ತಾಲೂಕಿನಲ್ಲಿ ವಾಣಿ ವಿಲಾಸ ಡ್ಯಾಂ ಇಟ್ಟುಕೊಂಡು ನೀರು ಕೊಡಲಿಲ್ಲ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.
ತಾಲೂಕಿನಲ್ಲಿರುವ ಡ್ಯಾಂ ನೀರು ತಾಲೂಕಿನ ರೈತರಿಗೆ ಕೊಡದೇ ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮೂರು, ಸಂಶೋಧನಾ ಕೇಂದ್ರವಾಗಿರುವ ಅಮೃತ್ ಮಹಲ್ ಕಾವಲಿಗೆ ನೀರು ಕೊಡಲಾಗುತ್ತಿದೆ. ಆದರೆ ಜಲಾಶಯದಿಂದ ಪಕ್ಕದಲ್ಲಿರುವ ರೈತರಿಗೆ ನೀರು ಕೊಟ್ಟಿಲ್ಲ ಅಂದ್ರೆ ಸರ್ಕಾರ, ರಾಜಕಾರಣ ವ್ಯವಸ್ಥೆ, ರೈತರ ಬೆನ್ನೆಲುಬು ಅಲ್ಲ. ಬದಲಿಗೆ ರೈತರ ಬೆನ್ನು ಎಲುಬನ್ನು ಮುರಿಯುವ ಸರ್ಕಾರವಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಕೂಡಲೇ ಸರ್ಕಾರ ಹಾಗೂ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ಎಚ್ಚೆತ್ತುಕೊಂಡು ಈ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸಬೇಕು. ಇಲ್ಲವಾದರೆ ರೈತರೊಂದಿಗೆ ಕಾಲ್ನಡಿಗೆಯಲ್ಲಿ ವಿಧಾನಸೌಧವರೆಗೂ ಪಾದಯಾತ್ರೆ ಕೈಗೊಳ್ಳಲಾಗುವುದು ಎಂದು ಶ್ರೀಗಳು ಎಚ್ಚರಿಸಿದರು.
ಜವನಗೊಂಡನಹಳ್ಳಿ ಹೋಬಳಿಯಲ್ಲಿ ಅಹಿಂದ ವರ್ಗ, ಮುಸ್ಲಿಂ ಸಮುದಾಯದವರು ಹೆಚ್ಚು ಇದ್ದು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಚಿವ ಡಿ.ಸುಧಾಕರ್ ಅವರು ಅತಿ ಹೆಚ್ಚು ಮತಗಳನ್ನು ಕೊಟ್ಟಿರುವ ಹೋಬಳಿಯ ಜನತೆಗೆ ಅನ್ಯಾಯ ಆಗಿದೆ ಎಂದರು.
ಈ ಭಾಗದ ರೈತರು ಯಾವುದೇ ಕಾರಣಕ್ಕೂ ಹೋರಾಟವನ್ನು ನಿಲ್ಲಿಸಬಾರದು. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿರಂತರವಾಗಿರಲಿ. ನಾನು ನಿಮ್ಮೊಂದಿಗೆ ಸದಾ ಇರುತ್ತೇನೆ ಎಂದು ಶ್ರೀಗಳು ತಿಳಿಸಿದರು.
ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ, ವಾಣಿವಿಲಾಸ ಜಲಾಶಯದಿಂದ ಯಾವುದೇ ಅಲೋಕೇಶನ್ ಇಲ್ಲದೆ ಚಳ್ಳಕೆರೆ, ಮೊಳಕಾಲ್ಮೂರು ಭಾಗಕ್ಕೆ ನದಿ ಮೂಲಕ ಸುಮಾರು ಮುಕ್ಕಾಲು ಟಿಎಂಸಿ ನೀರನ್ನು ಹರಿಸುತ್ತಿದ್ದಾರೆ. ಹನಿ ನೀರಾವರಿ ನೀರು ಹಾಯಿಸಲು ಎಲ್ಲಿ ಆಲೋಕೆಷನ್ ಇದೆಯಾ? ಎಂದು ಪ್ರಶ್ನೆ ಮಾಡಿದರು.
ಸುಮಾರು 200 ಕಿಲೋ ಮೀಟರ್ ದೂರದಿಂದ ಭದ್ರಾ ಮೇಲ್ದಂಡೆ ಯೋಜನೆಯಿಂದ ಈ ಭಾಗಕ್ಕೆ ನೀರು ಬರಲು ಸುಮಾರು 15-20 ವರ್ಷ ಬೇಕಾಗುತ್ತದೆ. ಅಲ್ಲಿಯವರೆಗೂ ಈ ಭಾಗದಲ್ಲಿ ಬದುಕುವುದಾದರೂ ಹೇಗೆ? ಎಂದು ಪ್ರಶ್ನಿಸಿದರು. ಇನ್ನೂ ಅಧಿಕಾರಿಗಳು ಧರಣಿ ಸ್ಥಳಕ್ಕೆ ಬಂದರೆ, ಅವರಿಗೆ ನೀರಿನ ಬಗ್ಗೆ ನಾವು ಎಲ್ಲ ವಿವರವನ್ನು ಹೇಳಲು ಬದ್ಧವಾಗಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಚಳವಳಿ ಬಗ್ಗೆ ಗಮನ ಹರಿಸದಿದ್ದರೆ ಮುಂದಿನ ದಿನಗಳಲ್ಲಿ ಚಳವಳಿ ಉಗ್ರರೂಪಕ್ಕೆ ಕೊಂಡೊಯ್ಯುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ.ಪಾಪಣ್ಣ ಮಾತನಾಡಿ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಈ ತಾಲೂಕಿನ ಶಾಸಕರು ಈ ಭಾಗಕ್ಕೆ ನೀರು ಹರಿಸಲು ಬದ್ಧತೆಯನ್ನು ತೋರಿಸಬೇಕು. ಇದುವರೆಗೂ ಈ ಹೋರಾಟದ ಬಗ್ಗೆ ಗಮನ ಹರಿಸದೆ ಸ್ಥಳಕ್ಕೆ ಬಾರದೇ ಇರುವುದು ತುಂಬಾ ಅವಮಾನಕರವಾಗಿದೆ. ಈ ಭಾಗದಿಂದ ಅತೀ ಹೆಚ್ಚ ಮತ ಪಡೆದು ತಾವು ರೈತರನ್ನು ನಿರ್ಲಕ್ಷಿಸಿದರೆ ಹೇಗೆ? ತಾವುಗಳು ವಿಳಂಬ ಮಾಡದೆ ಸಭೆಗೆ ಬಂದು ನೀರು ಹರಿಸುವ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಂ.ಆರ್.ವೀರಣ್ಣ, ನಟರಾಜ್, ಅಶ್ವತಪ್ಪ, ಈರಣ್ಣ, ಕನ್ಯಪ್ಪ, ರಾಜಪ್ಪ ಕೆ.ಆರ್. ಹಳ್ಳಿ, ಕುಮಾರ್, ಮಂಜುನಾಥ್, ಬಾಲಕೃಷ್ಣ, ಈರಣ್ಣ, ರಾಮಕೃಷ್ಣ, ಕರಿಯಪ್ಪ, ಶಿವಣ್ಣ, ಮಹೇಶ, ವಜೀರ್ ಸಾಬ್, ಚಿತ್ರಲಿಂಗಪ್ಪ, ಬಸವರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications