ಚಿತ್ರದುರ್ಗದ ಶಿಕ್ಷಕ ಉಮೇಶ್ಗೆ ರಾಷ್ಟ್ರಮಟ್ಟದ ಪ್ರಶಸ್ತಿ
ಚಿತ್ರದುರ್ಗ, ಆಗಸ್ಟ್ 26 : ಕೇಂದ್ರ ಶಿಕ್ಷಣ ಸಚಿವಾಲಯವು ನೀಡುವ ರಾಷ್ಟ್ರೀಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಕೋಟೆ ನೋಡಿನ ಶಿಕ್ಷಕರೊಬ್ಬರು ಆಯ್ಕೆಯಾಗಿದ್ದಾರೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಅಮೃತಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಉಮೇಶ್ ರಾಷ್ಟ್ರಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಒಟ್ಟು ದೇಶಾದ್ಯಂತ 46 ಶಿಕ್ಷಕರು ಆಯ್ಕೆಯಾಗಿದ್ದು, ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟೆಂಬರ್ 5 ರಂದು ದೆಹಲಿಯಲ್ಲಿ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಎಲ್ಲಾ ಶಿಕ್ಷಕರಿಗೆ ಪ್ರಶಸ್ತಿ ನೀಡಲಿದ್ದಾರೆ.
ಮೂಲತಃ ಉಮೇಶ್ ಅವರು 2004ರಲ್ಲಿ ಶಿಕ್ಷಕ ವೃತ್ತಿಗೆ ಪಾದರ್ಪಣೆ ಮಾಡಿದರು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಚಿಕ್ಕ ಬಳ್ಳಾರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿಸಿದ ಇವರು, 2006ರಲ್ಲಿ ಕೇಶವಪುರ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿ, ನಂತರ 2009 ರಿಂದ ಹೊಳಲ್ಕೆರೆ ತಾಲ್ಲೂಕಿನ ಅಮೃತಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದಾರೆ.

ಮಕ್ಕಳ ಕಲಿಕೆಯಲ್ಲಿ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಶಿಕ್ಷಕ ಉಮೇಶ್ ವಿನೂತನ ಹೆಜ್ಜೆ ಇಟ್ಟಿದ್ದಾರೆ. ಶಾಲೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ. ಗ್ರಾಮದ ಶಾಲೆಯಲ್ಲಿ ಮಕ್ಕಳ ದಾಖಲಾತಿ ಕಡಿಮೆ ಇದ್ದುದ್ದನ್ನು ಗಮನಿಸಿದ ಶಿಕ್ಷಕ ಮಕ್ಕಳ ಹಾಜರಾತಿ ಪ್ರಮಾಣಕ್ಕೆ ಶ್ರಮಿಸಿದರು. ಆರಂಭದಲ್ಲಿ 39 ವಿದ್ಯಾರ್ಥಿಗಳ ಸಂಖ್ಯೆ ಇದ್ದನ್ನು ಕಂಡು ತನ್ನ ಶಾಲೆಯನ್ನು ಬದಲಾವಣೆ ಮಾಡಿ, ವಿದ್ಯಾರ್ಥಿಗಳ ಸಂಖ್ಯೆಯನ್ನು 80ಕ್ಕೆ ಹೆಚ್ಚಿಸಿ ಗಮನ ಸೆಳೆದರು. ಜೊತೆಗೆ ದಾನಿಗಳ ನೆರವಿನಿಂದ ಶಾಲೆಯಲ್ಲಿ ಮೂಲ ಸೌಕರ್ಯ ಒದಗಿಸಿಕೊಟ್ಟರು.
ಶಾಲೆಯಲ್ಲಿ ಶಿಕ್ಷಕ ಉಮೇಶ್ ಅವರು ಕೇವಲ ಶಿಕ್ಷಕನಾಗದೆ ಸಾಹಿತಿಯಾಗಿ ಹೊರಹೊಮ್ಮಿದ್ದಾರೆ. ಶಾಲೆಯಲ್ಲಿ ನಲಿಕಲಿ, ಪ್ರಯೋಗಾಲಯ, ಕಂಪ್ಯೂಟರ್, ಚರ್ಚಾಸ್ಪರ್ಧೆ, ಗುಂಪು ಓದುಗಾರಿಕೆ, ಗೋಡೆ ಬರಹ, ಚಿತ್ರ ಬರವಣಿಗೆ, ಸಂಗೀತ, ಶಾಲಾ ಸ್ವಚ್ಛತೆ, ಹೀಗೆ ವಿವಿಧ ರೀತಿಯಲ್ಲಿ ಮಕ್ಕಳು ಓದಿನ ಕಡೆಗೆ ಗಮನ ಸೆಳೆಯುವಂತೆ ಮಾಡಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲೂ ಸಾಧನೆ
ಉಮೇಶ್ ಅವರು ಪಾಠ ಬೋಧನೆಗೆ ಸಿಮೀತವಾಗದೆ ಸಾಹಿತ್ಯ ಕ್ಷೇತ್ರದಲ್ಲೂ ಕವಿಯಾಗಿ ಹೊರಹೊಮ್ಮಿದ್ದಾರೆ. ವಚನಾಂಜಲಿ, ದೇವರಿಗೆ ಬೀಗ, ಪೋಟೋಕ್ಕೊಂದು ಪ್ರೇಮ್, ಅಪ್ಪನು ಕೊಡಿಸಿದ ಮೊದಲ ಪುಸ್ತಕ, ವಚನವಾಣಿ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿ ಹೊರತಂದಿದ್ದಾರೆ ಎನ್ನಲಾಗಿದೆ.

ರಾಷ್ಟ್ರ ಪ್ರಶಸ್ತಿಗೆ ಶಿಕ್ಷಕ ಉಮೇಶ್ ಆಯ್ಕೆಯಾಗುತ್ತಿದ್ದಂತೆ ಶಿಕ್ಷಣ ಸಚಿವ ಬಿಸಿ ನಾಗೇಶ್ ಹಾಗೂ ಕೇಂದ್ರ ಸಚಿವ ಎ ನಾರಾಯಣಸ್ವಾಮಿ, ಹೊಳಲ್ಕೆರೆ ಶಾಸಕ ಎಂ ಚಂದ್ರಪ್ಪ ಸೇರಿದಂತೆ ಉಮೇಶ್ ರನ್ನು ಅಭಿನಂದಿಸಿದರು.
ಜೀವಶಾಸ್ತ್ರ ಶಿಕ್ಷಕಿ ವಿ. ಪೊನಶಂಕರಿಗೂ ಪ್ರಶಸ್ತಿ
ಕಳೆ 27 ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿರುವ ಪೊನಶಂಕರಿ ಪ್ರಸ್ತುತ ತುಮಕೂರಿನಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲತಃ ತಮಿಳುನಾಡಿನವರಾಗಿರುವ ಇವರು ಗುಜರಾತ್ನಲ್ಲೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರಿನ ಯಶವಂತಪುರದ ಐಐಎಸ್ಸಿಯಲ್ಲಿರುವ ಕೇಂದ್ರೀಯ ವಿದ್ಯಾಲಯದಲ್ಲಿ 12 ವರ್ಷ ಕೆಲಸ ಮಾಡಿದ್ದಾರೆ.












Click it and Unblock the Notifications