ಚಿತ್ರದುರ್ಗಕ್ಕೆ ನಟ ಧ್ರುವ ಸರ್ಜಾ ಭೇಟಿ: ನೆಚ್ಚಿನ ನಟನ ಕಾಣಲು ಮುಗಿಬಿದ್ದ ಅಭಿಮಾನಿಗಳು
ಚಿತ್ರದುರ್ಗ, ಆಗಸ್ಟ್ 03: ಚಿತ್ರದುರ್ಗ ನಗರದ ಹೊರವಲಯದಲ್ಲಿರುವ ಮುರುಘಾ ಮಠಕ್ಕೆ ನಟ ಧ್ರುವ ಸರ್ಜಾ ಭೇಟಿ ನೀಡಿ, ಮುರುಘಾ ಶರಣರ ಗದ್ದುಗೆಯ ದರ್ಶನ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಮುರುಘಾ ಮಠಕ್ಕೆ ಭೇಟಿ ಕೊಟ್ಟು, ಶ್ರೀಗಳ ಗದ್ದೆಗೆಯ ಆಶೀರ್ವಾದ ಪಡೆದಿದ್ದೇನೆ. ಮುಂಬೈನಲ್ಲಿ ಮಾರ್ಟಿನ್ ಸಿನಿಮಾದ ಟೈಲರ್ ಲಾಂಚ್ ಮಾಡಲಾಗುತ್ತಿದೆ. ಈ ಬಗ್ಗೆ ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸುತ್ತೇವೆ. ಅಂತರಾಷ್ಟ್ರೀಯ ಪತ್ರಕರ್ತರು ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ' ಎಂದರು.

'ಇನ್ನು ಮುಂಬೈಗೆ ಹೋಗುವ ಮಾರ್ಗ ಮಧ್ಯೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಎಲ್ಲರೂ ಮಾರ್ಟಿನ್ ಸಿನಿಮಾ ನೋಡಿ ಹರಸಿ' ಎಂದು ಧ್ರುವ ಸರ್ಜಾ ಅಭಿಮಾನಿಗಳಲ್ಲಿ ಮನವಿ ಮಾಡಿದರು. ನಟ ಧ್ರುವ ಸರ್ಜಾ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ನೆಚ್ಚಿನ ನಟನನ್ನು ನೋಡಿ ಮಾತನಾಡಿಸಿ ಶಿಳ್ಳೆ, ಚಪ್ಪಾಳೆ, ಕೇಕೆ ಹಾಕಿ ಖುಷಿ ಪಟ್ಟರು. ನಟ ಧ್ರುವ ಸರ್ಜಾ ಆಗಮನ ಹಿನ್ನೆಲೆಯಲ್ಲಿ ಮುರುಘಾ ಮಠದಲ್ಲಿ ಬಿಗಿ ಬಂದೋಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು.
ತುಮಕೂರಿನ ಸಿದ್ದಗಂಗಾ ಮಠಕ್ಕೆ ನಟ ಧ್ರುವ ಸರ್ಜಾ ಭೇಟಿ
ತುಮಕೂರು: ಮಾರ್ಟಿನ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ನಟ ಧ್ರುವ ಸರ್ಜಾ ಅವರು ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ್ದಾರೆ. ಮುಂಬೈಗೆ ತೆರಳುವ ಮಾರ್ಗಮಧ್ಯೆ ಮಠಕ್ಕೆ ಆಗಮಿಸಿದ ಅವರು ಸಿದ್ದಲಿಂಗ ಸ್ವಾಮೀಜಿ ಅವರ ಆಶೀರ್ವಾದ ಪಡೆದರು. ಸ್ವಾಮೀಜಿಗಳ ಭೇಟಿಗೂ ಮುನ್ನ ಶ್ರೀ ಶಿವಕುಮಾರ ಸ್ವಾಮೀಜಿ ಗದ್ದುಗೆ ದರ್ಶನ ಪಡೆದರು.

ನಟ ಧ್ರುವ ಸರ್ಜಾ ಮಠಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳು ನಟನನ್ನು ನೋಡಲು ಮುಗಿಬಿದ್ದರು. ಮಠದ ಆವರಣದಲ್ಲಿ ಜಮಾಯಿಸಿದ ಹೆಚ್ಚಿನ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಂದಾದರು. ಈ ವೇಳೆ ನೂಕುನುಗ್ಗಲು ಕೂಡಾ ಉಂಟಾಯಿತು. ಮಠದಲ್ಲಿ ಬಿಗಿ ಬಂದೋಬಸ್ ವ್ಯವಸ್ಥೆ ಮಾಡಲಾಗಿತ್ತು.












Click it and Unblock the Notifications