ಕಾಂಗ್ರೆಸ್ ಪಕ್ಷ 'ಮನೆಯೊಂದು ಮೂರು ಬಾಗಿಲು': ಸಚಿವ ಶ್ರೀರಾಮುಲು
ಚಿತ್ರದುರ್ಗ, ಜನವರಿ 12: ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೀಗೆ ಕಾಂಗ್ರೆಸ್ ಪಕ್ಷ ಮೂರು ಭಾಗಗಳಾಗಿ ಒಡೆದಿದೆ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದರು.
ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೂವರು ಕಾಂಗ್ರೆಸ್ ನಾಯಕರು ತಾವೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಸಿಎಂ ಸ್ಥಾನದಿಂದ ಬಿ.ಎಸ್ ಯಡಿಯೂರಪ್ಪ ಬದಲಾವಣೆ ಬಗ್ಗೆ ಅವರು ಮಾತಾಡ್ತಾರೆ, ಮೊದಲು ಮೂರು ಬಾಗಿಲಾಗಿರುವ ಕಾಂಗ್ರೆಸ್ ವನ್ನು ಸರಿಪಡಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಮಾಜಿ ಸಿಎಂ ಸಿದ್ಧರಾಮಯ್ಯ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ಗೆಲ್ಲುವುದು ಕಷ್ಟ ಎಂದು ಹೇಳುತ್ತಿದ್ದಾರೆ. ಸಿದ್ದರಾಮಯ್ಯನವರ ಷಡ್ಯಂತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರು ಅಧಿಕಾರದಿಂದ ಕೆಳಗಿಳಿಯಬೇಕಾಯಿತು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಸಿದ್ದರಾಮಯ್ಯ ಅವರು ಗೋಮಾಂಸ ಭಕ್ಷಣೆ, ಕ್ರಾಸ್ ಬೀಡ್, ರಾಮ-ಆಂಜನೇಯ ಬಗ್ಗೆ ಹೇಳಿಕೆ ನೀಡಿದ ಬಳಿಕ ವಿಷಾದ ವ್ಯಕ್ತಪಡಿಸಿ ವಾಪಸ್ ಪಡೆಯುತ್ತೇನೆ ಎಂದರು. ಅಧಿಕಾರ ಕಳೆದುಕೊಂಡು ಸಿದ್ದರಾಮಯ್ಯಗೆ ಮತಿ ಭ್ರಮಣೆಯಾಗಿದೆ ಎಂದು ಸಚಿವ ಶ್ರೀರಾಮುಲು ಕಿಡಿಕಾರಿದರು.
ಸಿಎಂ ಸ್ಥಾನದಿಂದ ಯಡಿಯೂರಪ್ಪ ಕೆಳಗಿಳಿಯುತ್ತಾರೆ ಎಂದು ಹೇಳಿಕೆ ನೀಡಿ, ಗೊಂದಲ ಉಂಟುಮಾಡುತ್ತಿದ್ದಾರೆ ಅಷ್ಟೇ. ಬಾಯಿ ಚಟಕ್ಕಾಗಿ ಸಿದ್ಧರಾಮಯ್ಯ ಹೇಳಿಕೆ ಸೀಮಿತ ಎಂದರು. ರಾಜ್ಯದಲ್ಲಿ ಕಳೆದ ವರ್ಷ ಉಂಟಾದ ನೆರೆ ಹಾವಳಿ ಹಾಗೂ ಕೊರೊನಾ ಸಂದರ್ಭವನ್ನು ಉತ್ತಮವಾಗಿ ನಿಭಾಯಿಸಿದ್ದೇವೆ ಎಂದು ಹೇಳಿದರು.
ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆ ವೈಯಕ್ತಿಕ ನಿಲುವಾಗಿದ್ದು, ಸಿಎಂ ಬದಲಾಗುತ್ತಾರೆ ಎಂದು ಯತ್ನಾಳ್ ಎಲ್ಲೂ ಹೇಳಿಲ್ಲ. ಯತ್ನಾಳ್ ಮಂತ್ರಿ ಆಗಬೇಕೆಂದು ತೀರ್ಮಾನಿಸಿದಲ್ಲಿ ಅವರು ಬೇಡ ಅನ್ನಲಾಗಲ್ಲ. ನಾಳೆ ಅವರಿಗೂ ಕೂಡ ಅವಕಾಶ ಸಿಗಬಹುದು, ಕಾಯಬೇಕು ಎಂದರು.
ಬುಧವಾರ ಏಳು ಜನ ಶಾಸಕರಿಗೆ ಮಂತ್ರಿಗಿರಿ ಸಿಗಲಿದೆ, ಇಂಥವರೇ ಮಂತ್ರಿ ಆಗ್ತಾರೆಂದು ನಾನು ಹೇಳಲಾಗದು ಎಂದು ಚಿತ್ರದುರ್ಗದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿಕೆ ನೀಡಿದರು.












Click it and Unblock the Notifications