ಕೋಟೆನಾಡು ಚಿತ್ರದುರ್ಗದಲ್ಲಿ ಸರಳವಾಗಿ ಸಾಗಿದ ಗಣಪನ ಹಬ್ಬ
ಚಿತ್ರದುರ್ಗ, ಆಗಸ್ಟ್ 22: ಕೊರೊನಾ ಭೀತಿಯ ನಡುವೆಯೇ ಚಿತ್ರದುರ್ಗದಲ್ಲಿ ಗಣೇಶ ಹಬ್ಬ ಆಚರಣೆ ನಡೆಯುತ್ತಿದೆ. ಸೋಂಕು ಹರಡುವ ಸಾಧ್ಯತೆಗಳು ದಟ್ಟವಾದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ.
Recommended Video
ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ವತಿಯಿಂದ ಚಿತ್ರದುರ್ಗದ ಸ್ಟೇಡಿಯಂ ರಸ್ತೆಯ ಎಂಎಂ ಪ್ರೌಢಶಾಲೆ ಆವರಣದ ವೇದಿಕೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಕೋವಿಡ್ ಭೀತಿ ಹಿನ್ನೆಲೆ ಸರಳವಾಗಿ ಗಣೇಶೋತ್ಸವ ಆಚರಣೆಗೆ ಆಯೋಜಕರ ತೀರ್ಮಾನವಾಗಿದ್ದು, ಗಣೇಶ ಮೂರ್ತಿಗೆ ಮಾದಾರ ಚೆನ್ನಯ್ಯ ಶ್ರೀಗಳು ಪೂಜೆ ಸಲ್ಲಿಸಿದರು.
ಕೊರೊನಾ, ಮಳೆ ಅಟ್ಟಹಾಸದ ನಡುವೆ ಬೆಳಗಾವಿಯಾದ್ಯಂತ ಗಣೇಶೋತ್ಸವ
ನಗರದ ಅನೇಕ ಭಕ್ತರು ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷ ಅದ್ಧೂರಿಯಾಗಿ ನಡೆಯಬೇಕಿದ್ದ ಗಣೇಶ ಮಹೋತ್ಸವ ಈ ಬಾರಿ ತೀರಾ ಸರಳವಾಗಿ ನಡೆಯುತ್ತಿದೆ. ಯುವಕರ ತಾಳ, ಕುಣಿತಕ್ಕೆ ಕೊರೊನಾ ಬ್ರೇಕ್ ಹಾಕಿದ್ದು, ದುರ್ಗದ ಜನತೆಗೆ ಬಾರಿ ನಿರಾಸೆ ಉಂಟುಮಾಡಿದೆ.
ಇತ್ತ ಹಿರಿಯೂರು, ಹೊಸದುರ್ಗ, ಚಳ್ಳಕೆರೆ, ಹೊಳಲ್ಕೆರೆ, ಮೊಳಕಾಲ್ಮೂರು ತಾಲೂಕುಗಳಲ್ಲಿ ಸಹ ಸರಳವಾಗಿ ಗಣೇಶೋತ್ಸವ ಆಚರಣೆ ನಡೆಯುತ್ತಿದೆ. ಕೋವಿಡ್ -19 ಹಿನ್ನೆಲೆ ಹಳ್ಳಿಗಳಲ್ಲಿ ಯುವಕರು ಸರಳವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಪೆಂಡಾಲ್ ಹಾಕದೆ, ಹೆಚ್ಚು ಅಲಂಕಾರ ಇಲ್ಲದೆ, ಧ್ವನಿ ವರ್ಧಕ ಬಳಸದೇ ಇರುವುದರಲ್ಲೇ ಶೃಂಗಾರ ಮಾಡಿ ಪೂಜೆ ನೆರವೇರಿಸಲಾಗುತ್ತಿದೆ.