Get Updates
Get notified of breaking news, exclusive insights, and must-see stories!

ಹಿರಿಯೂರನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ ಆ ಭಯಾನಕ ಸಮಸ್ಯೆಗಳು...

Recommended Video

      ಹಿರಿಯೂರಿನ ಜ್ವಲಂತ ಸಮಸ್ಯೆ ಎಂದರೆ ಅದು ಕುಡಿಯುವ ನೀರು | Oneindia Kannada

      ಹಿರಿಯೂರು, ಮೇ 2 : ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿ ಪಡೆದಿರುವ ಹಿರಿಯೂರು ಒಂದಾನೊಂದು ಕಾಲದಲ್ಲಿ ಸಮೃದ್ಧ ಬೆಳೆಗಳ ನಾಡಗಿದ್ದು, ಹಚ್ಚ ಹಸಿರಿನಿಂದ ಕೂಡಿತ್ತು. ಮಲೆನಾಡಿನಂತೆ ಕಂಗೊಳಿಸುತ್ತಿತ್ತು. ಸುಂದರವಾದ ವಾತಾವರಣ, ತಣ್ಣನೆಯ ಗಾಳಿ, ಕೀಟಗಳ ಝೇಂಕಾರ , ಸುಗಂಧ ಹೂವಿನ ಪರಿಮಳದ ವಾಸನೆ ಇವುಗಳ ಮಧ್ಯೆ ಸೊಗಸಾದ ಜೀವನಕ್ಕೆ ಸಾಕ್ಷಿಯಾಗಿತ್ತು.

      ಕಬ್ಬು ಹೆಚ್ಚಾಗಿ ಬೆಳೆಯುತ್ತಿದ್ದ ಕಾರಣ ಹಿರಿಯೂರಿನಲ್ಲಿ ಸಕ್ಕರೆ ಕಾರ್ಖಾನೆ ಆರಂಭವಾಯಿತು. ಸಾಕಷ್ಟು ಜನರು ಉದ್ಯೋಗ ಪಡೆದುಕೊಂಡಿದ್ದರು. ಬದಲಾದ ಸಮಯದಲ್ಲಿ ಇಂದು ಸಕ್ಕರೆ ಕಾರ್ಖಾನೆ ಮೂಲೆ ಗುಂಪಾಗಿದೆ.

      ಅದನ್ನ ಮಾರಾಟ ಮಾಡಲು ಹುನ್ನಾರ ನೆಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಇಂದು ಬರದ ಛಾಯೆ ಆವರಿಸಿರುವುದರಿಂದ ಕುರಿ, ದನ, ಕರುಗಳ ಜೊತೆಗೆ ಉದ್ಯೋಗಕ್ಕಾಗಿ ಜನ ಗೂಳೇ ಹೋಗುವ ಪರಿಸ್ಥಿತಿ ಎದುರಾಗಿದೆ.

      ಒಣಗುತ್ತಿರುವ ತೋಟಗಳು

      ಒಣಗುತ್ತಿರುವ ತೋಟಗಳು

      ವಾಣಿ ವಿಲಾಸ ಜಲಾಶಯ ನಂಬಿ ಬದುಕುತ್ತಿದ್ದ ಹಿರಿಯೂರಿನ ರೈತರು ಇಂದು ಕೃಷಿಯ ಬಗ್ಗೆ ನಂಬಿಕೆ ಕಳೆದುಕೊಂಡಿದ್ದಾರೆ. ವಿವಿ ಸಾಗರದ ಅಚ್ಚುಕಟ್ಟು ಪ್ರದೇಶ ಸೇರಿದಂತೆ ಸುಮಾರು 60 ಸಾವಿರ ಎಕರೆ ಪ್ರದೇಶವಿದ್ದು, ಇಲ್ಲಿ ಬೆಳೆಯುವ ಪ್ರಮುಖ ವಾಣಿಜ್ಯ ಬೆಳೆಗಳಾದ ಕಬ್ಬು , ಹತ್ತಿ, ಶೇಂಗಾ, ಸೂರ್ಯಕಾಂತಿ, ತೊಗರಿ, ತೆಂಗು, ಅಡಿಕೆ. ಬಾಳೆ ಬೆಳೆಗಳು ಅಳಿವಿನ ಅಂಚಿನಲ್ಲಿವೆ.

      ವಿ.ವಿ. ಸಾಗರದ ನೀರಿನ ಮಟ್ಟ ಕುಸಿತದಿಂದ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಸುಮಾರು 600 ರಿಂದ 1200 ಅಡಿಗಳವರೆಗೆ ಬೋರ್ ಕೊರೆಸಿದರು ಕುಡಿಯಲು ನೀರು ಸಿಗುತ್ತಿಲ್ಲ.
      ಅಂತರ್ಜಲ ಕುಸಿತದಿಂದ ತೋಟಗಳು ಒಣಗುತ್ತಿದ್ದು, ಹಿರಿಯೂರಿನ ರೈತರ ಬಾಳು ಸಂಕಷ್ಟದಲ್ಲಿದೆ.

      ತೆಂಗಿನ ಮರಗಳಿಗೆ ನುಸಿ ರೋಗ

      ತೆಂಗಿನ ಮರಗಳಿಗೆ ನುಸಿ ರೋಗ

      ಕಳೆದ ಹತ್ತು ವರ್ಷಗಳಿಂದ ತೆಂಗಿನ ಮರಗಳಿಗೆ ರೋಗ ತಗುಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವ ಹಾಗಿದೆ. ತೆಂಗಿನ ಮರಕ್ಕೆ ನುಸಿ ರೋಗ ತಗುಲಿದರೆ ತೆಂಗಿನ ಸುಳಿ ಒಣಗುವುದು , ಹೊಂಬಾಳೆ ಉದುರುವುದು , ಅರಳು ಉದುರುವುದರಿಂದ ಉತ್ತಮ ಗುಣಮಟ್ಟದ ಎಳನೀರು ಮತ್ತು ತೆಂಗಿನ ಕಾಯಿ ಸಿಗದೆ ರೈತರು ಸಾಕಷ್ಟು ನಷ್ಟ ಅನುಭವಿಸಬೇಕಾದ ಪರಿಸ್ಥಿತಿ ಉಂಟಾಗಿದೆ.

      ಕಳೆದ 15 ರಿಂದ 20 ವರ್ಷಗಳ ಹಿಂದೆ ಸಮೃದ್ಧವಾದ ಅಂತರ್ಜಲ ಇದ್ದರಿಂದ ಒಂದು ತೆಂಗಿನ ಮರಕ್ಕೆ ಸುಮಾರು 100 ರಿಂದ 150 ಎಳನೀರು ಮತ್ತು ತೆಂಗಿನಕಾಯಿ ಸಿಗುತ್ತಿದ್ದವು. ಇಂದು 15 ರಿಂದ 20 ತೆಂಗಿನ ಕಾಯಿಗಳು ಸಿಗುತ್ತವೆ. ಅಂದು ಒಂದು ಕಾಯಿಯ ಬೆಲೆ ಕೆವಲ 3 ರಿಂದ 4 ರೂಪಾಯಿ ಇತ್ತು. ಆದರೆ ಇಂದು ಒಂದು ಕಾಯಿಯ ಬೆಲೆ 20 ರಿಂದ 30 ಆದರೆ ಒಂದು ಎಳನೀರಿನ ಬೆಲೆ 12 ರಿಂದ 16 ರೂ ಆಗಿದೆ.

      ರೈತರಿಗೆ ಬೇಸರ

      ರೈತರಿಗೆ ಬೇಸರ

      ಇತ್ತ ತೆಂಗಿನ ಕಾಯಿ ಬೆಲೆ ಮಾರುಕಟ್ಟೆಯಲ್ಲಿ ಗಗನಕ್ಕೇರಿದ್ದು ತೆಂಗಿನ ತೋಟಗಳು ಒಣಗಿರುವುದು ರೈತರಿಗೆ ಬೇಸರದ ಸಂಗತಿಯಾಗಿದೆ. ಮತ್ತೊಂದು ಕಡೆ ಉಳಿದ ತೆಂಗಿನ ಮರ ಉಳಿಸಿಕೊಳ್ಳಲು ರೈತರು ಕಂಗಾಲಾಗಿದ್ದು, ಹೆತ್ತ ಮಕ್ಕಳನ್ನು ತನ್ನ ಕಣ್ಮುಂದೆ ಕಳೆದುಕೊಂಡಂತೆ ಎಂಬ ಪರಿಸ್ಥಿತಿಯಾಗಿದೆ.

      ಸುಮಾರು ವರ್ಷಗಳ ಕಾಲ ಗೊಬ್ಬರ, ನೀರು ಹಾಕಿ ಮನೆ ಮಗನಂತೆ ನೋಡಿಕೊಂಡಿದ್ದ ತೆಂಗಿನ ಮರಗಳು ತನ್ನ ಕಣ್ಣೆದುರಿಗೆ ಒಣಗಿದ್ದು, ನಿಜಕ್ಕೂ ರೈತರ ಬಾಳು ಆತಂಕದಲ್ಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸ್ಥಳೀಯ ಶಾಸಕ ಡಿ. ಸುಧಾಕರ್ ಭರವಸೆ ನೀಡಿದಂತೆ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ 2015 ಕ್ಕೆ ಮುಗಿದು ಭದ್ರಾ ನೀರು ವಿ.ವಿ. ಸಾಗರಕ್ಕೆ ಬಂದಿದ್ದರೆ ಹಿರಿಯೂರು ರೈತರ ಬದುಕಿನಲ್ಲಿ ಒಂದಿಷ್ಟು ಬೆಳಕು ಚೆಲ್ಲಿ ಮುಖದಲ್ಲಿ ಮಂದಹಾಸ ಮೂಡುತ್ತಿತ್ತು.

      ಜನಪ್ರತಿನಿಧಿಗಳ ಪೊಳ್ಳು ಭರವಸೆ

      ಜನಪ್ರತಿನಿಧಿಗಳ ಪೊಳ್ಳು ಭರವಸೆ

      2016, 2017 ರ ವೇಳೆಗೆ ನೀರು ಹರಿಸುತ್ತೇವೆ ಎಂದು ಗಂಟಾಘೋಷವಾಗಿ ಹೇಳಿದ್ದರು. ತದನಂತರ ಮತ್ತೇ 2018 ರ ಮೇ ತಿಂಗಳ ಒಳಗೆ ಹರಿಸಿಯೇ ತೀರುತ್ತೇವೆ ಎಂದು ತೊಡೆ ತಟ್ಟಿದ ಜನಪ್ರತಿನಿಧಿಗಳ ಮಾತು ಪೊಳ್ಳು ಭರವಸೆಯಾದವು.

      ಮತ್ತೊಂದು ಕಡೆ ಹೊಸದುರ್ಗ ಕ್ಷೇತ್ರದ ಶಾಸಕ ಬಿ. ಜಿ. ಗೋವಿಂದಪ್ಪ ನವರು ವಿ. ವಿ. ಸಾಗರಕ್ಕೆ ಬರುವ ನೀರನ್ನು ತನ್ನ ಹೊಸದುರ್ಗ ಕ್ಷೇತ್ರದಲ್ಲಿ ಅನೇಕ ಚೆಕ್ ಡ್ಯಾಂ ನಿರ್ಮಾಣ ಮಾಡಿ ಬರುವ ನೀರನ್ನು ತಡೆ ಹಿಡಿದಿದ್ದಾರೆ. ಇದರ ಜೊತೆಗೆ ಕಾನೂನು ಸಚಿವರಾದ ಟಿ.ಬಿ. ಜಯಚಂದ್ರ ನವರು ಶಿರಾ ಕ್ಕೆ ನೀರು ಒಯ್ದಿದ್ದಾರೆ.

      ಇನ್ನು ಹಿರಿಯೂರಿನ ಶಾಸಕ ಡಿ. ಸುಧಾಕರ್ ಚಳ್ಳಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಿದ್ದಾರೆ. ಇನ್ನೆಲ್ಲಿ ನೀರು ವಿ.ವಿ. ಸಾಗರಕ್ಕೆ ಬರುವುದು ಕನಸಿನ ಮಾತು ಎಂಬುದು ಹಲವು ರೈತರ ಮಾತುಗಳು.

      ಜಲಾಶಯದ ನೀರಿನ ಪ್ರಮಾಣ ದಾಖಲಾಗಿಲ್ಲ

      ಜಲಾಶಯದ ನೀರಿನ ಪ್ರಮಾಣ ದಾಖಲಾಗಿಲ್ಲ

      ಕಳೆದ ಹದಿನೈದು ವರ್ಷಗಳ ಹಿಂದೆ ಅಂದರೆ 2000ನೇ ಸಾಲಿನಲ್ಲಿ ಸಾಕಷ್ಟು ಮಳೆಯಾಗಿದ್ದ ರಿಂದ ವಿ. ವಿ. ಸಾಗರಕ್ಕೆ ನೀರು ಹರಿದು ಬಂದಿದ್ದು ಇನ್ನೇನು ಕೋಡಿ ಬೀಳಬಹುದು ಅಂದುಕೊಂಡಿದ್ದರು. ಆಗ ಜಲಾಶಯದ ನೀರು ಸುಮಾರು 122.50 ಅಡಿಗೆ ಬಂದಿತು.

      ಕೋಡಿ ಬೀಳಲು ಇನ್ನೂ 7, 50 ಅಡಿ ಬಾಕಿ ಇತ್ತು. ತದನಂತರ 2010 ರಲ್ಲಿ 112 ಅಡಿಗೆ ಬಂದಿದ್ದು ಬಿಟ್ಟರೆ ಅಲ್ಲಿಂದ ಇಲ್ಲಿಯವರೆಗೂ ( 8 ವರ್ಷಗಳಲ್ಲಿ ) ಜಲಾಶಯದಲ್ಲಿ ಯಾವುದೇ ನೀರಿನ ಪ್ರಮಾಣದ ಬಗ್ಗೆ ದಾಖಲಾಗಿಲ್ಲ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 63 ಅಡಿ ಇದೆ.

      ಒಂದೆರಡು ಬಾರಿ ನಾಲೆಗಳಲ್ಲಿ ನೀರು ಹರಿಸಿದ್ದರೆ ಬಹುಶಃ ತೋಟಗಳು ಜೀವಂತವಾಗಿ ಇರುತ್ತವೆ . ಒಂದು ವೇಳೆ ಈ ವರ್ಷ ನೀರು ಹರಿಸದೆ ಇದ್ದು , ಮಳೆ ಬರದಿದ್ದರೆ ಉಳಿದ ಎಲ್ಲ ತೋಟಗಳು ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.

      ನೀರಿಗಾಗಿ 540 ದಿನ ಹೋರಾಟ

      ನೀರಿಗಾಗಿ 540 ದಿನ ಹೋರಾಟ

      2007 ರಲ್ಲಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಯಾಗಿ ಆರಂಭವಾದ ಹೋರಾಟ ಸುಮಾರು 540 ದಿನ ದಾಟಿದ್ದು, ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿತ್ತು.

      ಹೋರಾಟವನ್ನ ಗಮನಿಸಿದ ಈ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ ಮಂಜೂರಾತಿ ನೀಡಿತು ಜೊತೆಗೆ ವಿ.ವಿ. ಜಲಾಶಯಕ್ಕೆ 5 ಟಿಎಂಸಿ ನೀರು ಬಿಡಲು ಸರ್ಕಾರ ಆದೇಶ ಹೊರಡಿಸಿತು.
      ಹೋರಾಟದ ಸ್ಥಳಕ್ಕೆ ಆಗಿನ ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು.

      ಎರಡು ಮೂರು ವರ್ಷಗಳಲ್ಲಿ ಸಂಪೂರ್ಣವಾಗಿ ಮುಗಿಯಬೇಕಿದ್ದ ಕಾಮಗಾರಿ ಇವತ್ತಿನವರೆಗೂ ಮುಗಿದಿಲ್ಲ. ಈ ಯೋಜನೆಗೆ ಮಂಜೂರಾದ ಹಣ ರೂ 3388 ಕೋಟಿಯಿಂದ 12,340 ಕೋಟಿಗೆ ಬಂದಿದೆ. ಇನ್ನೇನು ವಿ.ವಿ. ಸಾಗರಕ್ಕೆ ನೀರು ಬಂದೇ ಬಿಡ್ತು ಎಂದು ಬಕ ಪಕ್ಷಿಯಂತೆ ಕಾದು ಕುಳಿತಿದ್ದ ರೈತರಿಗೆ ತುಪ್ಪ ಕಾಯಿಸಿ ವಾಸನೆ ತೋರಿಸಿದಂತಾಗಿದೆ.

      ಕುಡಿಯುವ ನೀರಿಗಾಗಿ ಹಾಹಾಕಾರ

      ಕುಡಿಯುವ ನೀರಿಗಾಗಿ ಹಾಹಾಕಾರ

      ಹಿರಿಯೂರು ತಾಲೂಕಿನಲ್ಲಿ ವಾಣಿ ವಿಲಾಸ ಸಾಗರ, ಗಾಯಿತ್ರಿ ಜಲಾಶಯ ಇದ್ದು ಜೊತೆಗೆ ವೇದಾವತಿ ನದಿ ಇದ್ದರೂ ನದಿಯ ದಡದಲ್ಲಿ ಮರಳು ತೆಗೆಯುವುದರಿಂದ ಅಂತರ್ಜಲ ಕುಸಿದಿದೆ. ಹಿರಿಯೂರಿನ ಜ್ವಲಂತ ಸಮಸ್ಯೆ ಎಂದರೆ ಕುಡಿಯುವ ನೀರು.

      ಹಿರಿಯೂರಿನ ಹಳ್ಳಿಗಳಾದ ಕಲ್ಲಹಟ್ಟಿ , ಸೊಂಡೆಕೆರೆ , ಕಸವನಹಳ್ಳಿ, ಆಲೂರು , ಶಿಡ್ಲಯ್ಯನಹಟ್ಟಿ , ಮಸ್ಕಲ್ ಗೊಲ್ಲರಹಟ್ಟಿ , ಮ್ಯಾಕ್ಲೂರಹಳ್ಳಿ ಇನ್ನೂ ವಿವಿಧ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆಯಿದೆ. ಕಳೆದ ಬಾರಿ ಟ್ಯಾಂಕರ್ ಗಳ ಮೂಲಕ ನೀರು ಸರಬರಾಜು ಮಾಡಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ.

      ಮನೆಯಲ್ಲಿ ನೀರಿಗಾಗಿಯೇ ಒಬ್ಬರನ್ನು ನೇಮಕ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಮೂರ್ನಾಲ್ಕು ದಿನಕ್ಕೆ, ಇಲ್ಲ ಅಂದರೆ ವಾರಕ್ಕೊಮ್ಮೆ ನೀರು ಬಿಡುವುದರಿಂದ ಹಳ್ಳಿಗಳಲ್ಲಿ ಟ್ಯಾಂಕ್ ಮತ್ತು ಬೀದಿ ನಲ್ಲಿಗಳ ಮುಂದೆ ಬಿಂದಿಗೆಗಳ ಸಾಲು ಸಾಲು ದೃಶ್ಯ , ಕೆಲಸ ಕಾರ್ಯ ಬಿಟ್ಟು ಹೆಣ್ಣು ಮಕ್ಕಳು ಕಾದು ಕುಳಿತ್ತಿರುವುದು ಕಣ್ಣಿಗೆ ಪ್ರತಿದಿನ ಕಾಣುತ್ತದೆ. ಇದರ ಜೊತೆಗೆ ಎಷ್ಟೋ ಜನ ನೀರಿಗಾಗಿ ಜಗಳ ಮಾಡುತ್ತಿರುವುದನ್ನು ನೋಡಬಹುದು.

      ಶಾಸಕ ಸುಧಾಕರ್ ನೇರ ಕಾರಣ

      ಶಾಸಕ ಸುಧಾಕರ್ ನೇರ ಕಾರಣ

      ಚುನಾವಣೆ ಬಂತೆಂದರೆ ನೀರಿನದೆ ಟ್ರಂಪ್ ಕಾರ್ಡ್. ವಾಣಿ ವಿಲಾಸ ಸಾಗರಕ್ಕೆ ನೀರು ಬಂತು. ಗಾಯಿತ್ರಿ ಜಲಾಶಯದ ನೀರು ಶಿರಾಕ್ಕೆ ಒಯ್ದರು. ಜವಗೊಂಡನಹಳ್ಳಿಗೆ ನೀರು ಕೊಟ್ಟಿದ್ದೇವೆಂದು ಕ್ರೆಡಿಟ್ ತೆಗೆದುಕೊಳ್ಳುವ ಮೂಲಕ ಸತ್ಯ ಮರೆಮಾಚುವುದು.

      ತಾಲೂಕಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ದರೋಡೆ, ಸುಲಿಗೆ, ದಬ್ಬಾಳಿಕೆ, ಮರಳು ಮಾಫಿಯಾ, ಗಣಿಗಾರಿಕೆ, ಸ್ಥಳೀಯರಿಗೆ ನೀರು ಕೊಡದೆ ವಂಚಿಸಿದ್ದು , ಹಿರಿಯೂರಿನಲ್ಲಿ ಡಿ. ಸುಧಾಕರ್ ಇರುವುದಕ್ಕೆ ಯೋಗ್ಯತೆ ಇಲ್ಲ. ಜನ ಅಭಿಪ್ರಾಯದಲ್ಲಿ ಕಡಿಮೆ ಅಂಕ ಗಳಿಸಿದ್ದು ಶಾಸಕನಾಗಲು ಅರ್ಹತೆ ಇಲ್ಲ.

      ತೋಟಗಳು ಒಣಗುವುದಕ್ಕೆ, ಹಿರಿಯೂರಿನಲ್ಲಿ ನಿರುದ್ಯೋಗ ಸೃಷ್ಟಿಯಾಗಿರುವುದಕ್ಕೆ ಮತ್ತು ರೈತರ ಬಾಳು ಕಂಗಾಲಾಗಿರುವುದಕ್ಕೆ ಶಾಸಕ ಡಿ. ಸುಧಾಕರ್ ನೇರ ಕಾರಣ ಎಂದು ರೈತ ಮುಖಂಡ ಕಸವನಹಳ್ಳಿ ರಮೇಶ್ ತನ್ನ ಆಕ್ರೋಶ ವ್ಯಕ್ತಪಡಿಸುತ್ತಾರೆ.

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+