ಲಾಕ್ ಡೌನ್ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ವಿಫಲ: ಶಿವು ಯಾದವ್
ಚಿತ್ರದುರ್ಗ, ಮೇ 10: ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದ್ದು, ಇದನ್ನು ನಿರ್ವಹಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿವೆ ಎಂದು ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸಿ. ಶಿವು ಯಾವದ್ ಟೀಕಿಸಿದ್ದಾರೆ.
ಲಾಕ್ ಡೌನ್ ಸಡಿಲಿಕೆ ಹೆಸರಲ್ಲಿ ಕೇಂದ್ರ ಸರ್ಕಾರ ಐಟಿ-ಬಿಟಿ, ಗಣಿ ಉದ್ಯಮಿ ಗಳಿಗೆ ಹಾಗೂ ಮದ್ಯದ ಲಾಬಿಗೆ ಮಣಿದು ಕೆಲವು ಮಾರ್ಗಸೂಚಿಗಳನ್ನು ಜಾರಿಗೆ ತಂದಿರುವುದು ಅವೈಜ್ಞಾನಿಕವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ದೇಶದಲ್ಲಿ ಇರುವ ಶ್ರೀಮಂತರ ಮಕ್ಕಳನ್ನು ವಿಶೇಷ ವಿಮಾನದ ಮೂಲಕ ಕರೆತಂದು ಸ್ಟಾರ್ ಹೋಟೆಲ್ ಗಳಲ್ಲಿ ಇರಿಸಲು ವ್ಯವಸ್ಥೆ ಮಾಡಿಕೊಂಡಿರುವ ಸರ್ಕಾರ, ಬದುಕು ಕಳೆದುಕೊಂಡು ಬೀದಿಗೆ ಬಿದ್ದಿರುವ ಕೂಲಿ ಕಾರ್ಮಿಕರು ಕಣ್ಣಿಗೆ ಕಾಣದಿರುವುದು ಬಡ ಜನತೆಯ ದುರಂತ ಎಂದಿದ್ದಾರೆ. ಮುಂದೆ ಓದಿ...
ಕಾರ್ಮಿಕರ ಸಾವಿಗೆ ಕೇಂದ್ರ ಪರಿಹಾರ ನೀಡಬೇಕು
ನಿನ್ನೆ ಮುಂಬೈನಲ್ಲಿ ರೈಲ್ವೆ ಕಂಬಿಯ ಮೇಲೆ ಮಲಗಿದ್ದ 16 ಕಾರ್ಮಿಕರನ್ನು ಗೂಡ್ಸ್ ರೈಲು ಬಲಿ ತೆಗೆದುಕೊಂಡಿದೆ. ದೇಶದಲ್ಲಿ ಇಂತಹ ದುರಂತಗಳಿಗೆ ಲೆಕ್ಕವೇ ಇಲ್ಲ. ಸಾವನ್ನಪ್ಪಿದ ಕಾರ್ಮಿಕರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ಪ್ರತ್ಯೇಕ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ದೇಶ ಕಟ್ಟುವ ಕಾರ್ಮಿಕರು ನೆಮ್ಮದಿಯಾಗಿ ಬದುಕುವಂತೆ ನೋಡಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕೆಂದ್ರ ಸರಕಾರದ ಅವೈಜ್ಞಾನಿಕ ವಿಧಾನಗಳನ್ನು ಸಹಿಸುವುದು ಜನಸಾಮಾನ್ಯರಿಗೆ ಕಷ್ಟ ಸಾದ್ಯವಾಗಿದೆ. ದೇಶದಲ್ಲಿ ದಿನ ದಿನಕ್ಕೂ ನಿಯಂತ್ರಣಕ್ಕೆ ಬರಬೇಕಾದ ಕೊರೊನಾ ಮತ್ತೊಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಿರುವುದು, ದೇಶವಾಸಿಗಳ ನೆಮ್ಮದಿಯ ಬದುಕನ್ನು ಕಿತ್ತುಕೊಂಡಿದೆ.
ಪ್ರಧಾನಿ ಮೂಢನಂಬಿಕೆ ಮೊರೆ ಹೋಗುತ್ತಿದ್ದಾರೆ
ಕೊರೊನಾ ನಿಯಂತ್ರಣಕ್ಕೆ ವ್ಯಾಕ್ಸಿನೇಷನ್ ಕಂಡುಹಿಯಬೇಕಾದ ದೇಶದ ಪ್ರಧಾನಿ ಮೂಢನಂಬಿಕೆಗಳನ್ನು ದೇಶದಲ್ಲಿ ಬಿತ್ತುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಕೊರೊನಾ ಸೋಂಕು ಬಂದು ಮೂರು ತಿಂಗಳಾದರೂ ಪ್ರತಿ ಜಿಲ್ಲಾ ಕೇಂದ್ರ ಗಳಲ್ಲಿ ಕೊರೊನಾ ಪರೀಕ್ಷೆ ಕೇಂದ್ರವನ್ನು ತೆರೆಯಲು ಸಾದ್ಯವಾಗಿಲ್ಲ, ಉಸಿರಾಟದಿಂದ ಸತ್ತ ವ್ಯಕ್ತಿಗಳು ಯಾವ ಕಾರಣಕ್ಕಾಗಿ ಸತ್ತರು ಎಂಬುದನ್ನು ತಿಳಿಯಲು ಸುಮಾರು ಮೂರ್ನಾಲ್ಕು ದಿನ ತೆಗೆದುಕೊಳ್ಳುತ್ತಿರುವುದು ಬೇಜವಾಬ್ದಾರಿ ಸರ್ಕಾರಕ್ಕೆ ಹಿಡಿದ ಕನ್ನಡಿಯಾಗಿದೆ. ಸತ್ತ ಹೆಣ ಹೂಳಲು ಕಷ್ಟಕರ ಸನ್ನಿವೇಶ ನಿರ್ಮಾಣ ಸೃಷ್ಟಿಸಿದ್ದಾರೆ ಎಂದು ಟೀಕಿಸಿದ್ದಾರೆ.
ವೈದ್ಯಕೀಯ ಸಲಕರಣೆಗಳ ಕೊರತೆ ಇದೆ
ಕೊರೊನಾ ನಿರ್ವಹಣೆಗೆ ವೈದ್ಯಕೀಯ ಸಲಕರಣೆಗಳು ಸಮರ್ಪಕವಾಗಿ ಪೂರೈಸಿಲ್ಲ, ವೈದ್ಯರ ಜೀವಕ್ಕೆ ಭದ್ರತೆ ನೀಡಿಲ್ಲ, ಪೊಲೀಸರು ಜೀವನ್ಮರಣಗಳ ಜೊತೆ ಹೋರಾಟ ನಡೆಸಿ ಬಹುತೇಕರು ಕ್ವಾರಂಟೈನ್ ನಲ್ಲಿದ್ದಾರೆ. ಅವರಿಗೆ ಮೂಲಭೂತ ಸೌಕರ್ಯಗಳ ಒದಗಿಸಿದ್ದರೆ ಈ ವ್ಯವಸ್ಥೆ ನಿರ್ಮಾಣವಾಗುತ್ತಿರಲಿಲ್ಲ ಎಂದರು. ಕಿಟ್ ಗಳಲ್ಲಿ ಹಗರಣ, ಮಾಸ್ಕ್ ಗಳಲ್ಲಿ ಹಗರಣ, ವಿತರಣಾ ವ್ಯವಸ್ಥೆಯಲ್ಲಿ ಹಗರಣ, ಸಂಘ ಸಂಸ್ಥೆಗಳು ನೀಡಿದ ಸಹಾಯ ಕೆಲವು ಕಡೆ ಸರ್ಕಾರದ ಲೆಕ್ಕಕ್ಕೆ ಸೇರಿದೆ ಈ ಅನ್ಯಾಯಕ್ಕೆ ಅಂತ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರ ನಡೆಸಲು ಅಸಮರ್ಥರು ನೀವು
ಕೇವಲ ಎರಡು ತಿಂಗಳು ಸರ್ಕಾರ ನಡೆಸಲು ಅಸಮರ್ಥರಾದ ನೀವು, ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರಿಯುವ ಯೋಗ್ಯತೆ ನಿಮ್ಮ ಸರ್ಕಾರಕ್ಕೆ ಇಲ್ಲ. ತಾವೇ ಕೊರೊನಾ ಕಂಟಕದ ಮತ್ತು ಕೊರೊನಾ ದೇಶದಲ್ಲಿ ವೇಗವಾಗಿ ಪ್ರಜ್ವಲಿಸಲು ನಿಮ್ಮ ಅವೈಜ್ಞಾನಿಕ ಮಾರ್ಗಸೂಚಿಗಳು ಕಾರಣಾರಾಗಿರುತ್ತದೆ. ಆದ್ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇದರ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕು. ಇಲ್ಲದಿದ್ದರೆ ದೇಶದಲ್ಲಿ ಕೊರೊನಾ ನಿಯಂತ್ರಣ ಮಾಡಲು ಸಾದ್ಯವಿಲ್ಲ. ದೇಶದ ಜನರು ಭಯದ ನೆರಳಲ್ಲಿ ತಮ್ಮ ಮಾನ, ಪ್ರಾಣಗಳನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಚಿತ್ರದುರ್ಗ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಯಾದವ್ ಹೇಳಿದ್ದಾರೆ.